ಮುಖ್ಯಮಂತ್ರಿ ಮನೆ ಬಾಗಿಲು ಹುಡುಕಿಕೊಂಡು ಬಂದ 'ಲಕ್ಷ್ಮಿ'
ಬೆಂಗಳೂರು, ನವೆಂಬರ್.13: ರಾಜಕಾರಣದಲ್ಲಿ ಯಾರೂ ಮಿತ್ರರೂ ಅಲ್ಲ. ಯಾರು ಶತ್ರುಗಳೂ ಅಲ್ಲ. ಕರ್ನಾಟಕ ರಾಜಕೀಯದ ವಿಷಯದಲ್ಲಂತೂ ಈ ಮಾತು ಹೇಳಿ ಮಾಡಿಸಿದಂತಿದೆ. ಇಲ್ಲಿ ಯಾರು ಯಾವಾಗ ಯಾವ ಪಕ್ಷದಲ್ಲಿ ಇರುತ್ತಾರೋ, ಯಾರು ಯಾವ ಯಾವ ಪಕ್ಷಕ್ಕೆ ಹಾರುತ್ತಾರೋ ಅನ್ನೋದೇ ಗೊತ್ತಾಗಲ್ಲ.
ಬುಧವಾರ ಬೆಂಗಳೂರಿನಲ್ಲಿ ಇಬ್ಬರು ನಾಯಕರ ನಡುವಿನ ಭೇಟಿ ಸದ್ಯದ ರಾಜಕೀಯ ಬೆಳವಣಿಗೆಯಲ್ಲಿ ಮತ್ತಷ್ಟು ಕುತೂಹಲ ಕೆರಳಿಸಿದೆ. ಅದರಲ್ಲೂ ಕಾಂಗ್ರೆಸ್ ನ ಈ ನಾಯಕಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಿವಾಸಕ್ಕೆ ಭೇಟಿ ನೀಡಿದ್ದು ಸಾಕಷ್ಟು ಕುತೂಹಲ ಕೆರಳಿಸಿದೆ.
Live Updates : ಸುಪ್ರೀಂತೀರ್ಪು : ಅನರ್ಹರು ಚುನಾವಣಾ ಕಣಕ್ಕೆ
ಹೌದು, 17 ಅನರ್ಹ ಶಾಸಕರ ಪೈಕಿ 15 ಶಾಸಕರ ಭವಿಷ್ಯವನ್ನು ಸುಪ್ರೀಂಕೋರ್ಟ್ ಹೊರ ಹಾಕಿದೆ. 15 ಮಂದಿ ಅನರ್ಹ ಶಾಸಕರು ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಕೋರ್ಟ್ ಅವಕಾಶ ನೀಡಿದೆ. ಈ ತೀರ್ಪು ಹೊರ ಬೀಳುತ್ತಿದ್ದಂತೆ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಮುಖ್ಯಮಂತ್ರಿ ಯಡಿಯೂರಪ್ಪ ನಿವಾಸಕ್ಕೆ ವಿಸಿಟ್ ಕೊಟ್ಟಿದ್ದಾರೆ.
ಯಡಿಯೂರಪ್ಪ ಮನೆ ಬಾಗಿಲಿಗೆ 'ಲಕ್ಷ್ಮಿ':
ಸುಪ್ರೀಂಕೋರ್ಟ್ ಅನರ್ಹರ ಕುರಿತು ತೀರ್ಪು ಹೊರಡಿಸಿದ ಬೆನ್ನಲ್ಲೇ ರಾಜಕೀಯ ಚಟುವಟಿಕೆಗಳು ಚುರುಕುಗೊಂಡಿವೆ. ಇದರ ಮಧ್ಯೆ ಬೆಂಗಳೂರಿನ ಮುಖ್ಯಮಂತ್ರಿ ನಿವಾಸ ಧವಳಗಿರಿಗೆ ಲಕ್ಷ್ಮಿ ಹೆಬ್ಬಾಳ್ಕರ್ ಭೇಟಿ ನೀಡಿದ್ದಾರೆ. ಬೆಳಗಾವಿಯ ಮೂರು ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆಯಲಿದೆ. ಈ ಪೈಕಿ ರಮೇಶ್ ಜಾರಕಿಹೊಳಿ ತವರು ಕ್ಷೇತ್ರ ಗೋಕಾಕ್ ಮೇಲೆ ಲಕ್ಷ್ಮಿ ಹೆಬ್ಬಾಳ್ಕರ್ ಕಣ್ಣು ಇಟ್ಟಿದ್ದಾರೆ.
ಸುಪ್ರೀಂ ತೀರ್ಪು; ಅನರ್ಹರಿಗೆ ಸಂತೋಷ, ಸವದಿಗೆ ಸಂಕಷ್ಟ!
ಬೆಳಗಾವಿ ರಾಜಕಾರಣದಲ್ಲಿ ವೈರಿ ಎಂತಲೇ ರಮೇಶ್ ಜಾರಕಿಹೊಳಿ ಹಾಗೂ ಲಕ್ಷ್ಮಿ ಹೆಬ್ಬಾಳ್ಕರ್ ಬಿಂಬಿತವಾಗಿದ್ದಾರೆ. ಗೋಕಾಕ್ ಅಖಾಡಕ್ಕೆ ಕಾಂಗ್ರೆಸ್ ನಿಂದ ತಮ್ಮ ಅಭ್ಯರ್ಥಿ ಅಶೋಕ್ ಪೂಜಾರಿಯನ್ನು ಕಣಕ್ಕಿಳಿಸಲು ಲಕ್ಷ್ಮಿ ಹೆಬ್ಬಾಳ್ಕರ್ ಎಲ್ಲಿಲ್ಲದ ಕಸರತ್ತು ನಡೆಸಿದ್ದಾರೆ. ಬಿಜೆಪಿಯಿಂದ ಇನ್ನೇನು ರಮೇಶ್ ಜಾರಕಿಹೊಳಿಗೆ ಟಿಕೆಟ್ ಪಕ್ಕಾ ಅಂತಲೇ ಹೇಳಲಾಗುತ್ತಿದೆ.
ಸಂಜೆ ಬಿಜೆಪಿ ಕೋರ್ ಕಮಿಟಿ ಸಭೆ ನಡೆಯಲಿದ್ದು, ಅಲ್ಲಿ ಅನರ್ಹ ಶಾಸಕರಿಗೆ ಟಿಕಿಟ್ ನೀಡುವ ಬಗ್ಗೆ ಚರ್ಚೆ ನಡೆಯಲಿದೆ. ಆ ನಂತರವಷ್ಟೇ ಬಿಜೆಪಿಯ ಮುಂದಿನ ನಡೆಯ ಬಗ್ಗೆ ತಿಳಿಸುವುದಾಗಿ ಮುಖ್ಯಮಂತ್ರಿ ಬಿಎಸ್ ವೈ ತಿಳಿಸಿದ್ದಾರೆ. ಇದರ ನಡುವೆ ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಭೇಟಿ ಸಾಕಷ್ಟು ಕುತೂಹಲ ಕೆರಳಿಸಿದೆ.
ಇಷ್ಟೆಲ್ಲಾ ಆದರೂ ಲಕ್ಷ್ಮಿ ಹೆಬ್ಬಾಳ್ಕರ್ ರಾಜಕೀಯ ಚರ್ಚೆ ಬಗ್ಗೆ ಯಾವುದೇ ರೀತಿ ಸುಳಿವು ಬಿಟ್ಟು ಕೊಡಲಿಲ್ಲ. ಸಿಎಂ ನಿವಾಸದಿಂದ ಹೊರ ಬಂದ ಲಕ್ಷ್ಮಿ ಹೆಬ್ಬಾಳ್ಕರ್ ತಮ್ಮ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಚರ್ಚೆ ನಡೆಸಿದ್ದಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.