#Dontbelate ಅಭಿಯಾನಕ್ಕೆ ಚಾಲನೆ ಕೊಟ್ಟ ಸುನಿಲ್ ಚೆಟ್ರಿ
ಬೆಂಗಳೂರು, ಫೆಬ್ರವರಿ 8: ಕ್ಯಾನ್ಸರ್ ಕಾಯಿಲೆಯ ವಿರುದ್ಧ ಹೋರಾಟ ಮತ್ತು ಅದನ್ನು ಆರಂಭಿಕ ಹಂತದಲ್ಲಿಯೇ ಗುರುತಿಸುವ ಅಗತ್ಯವನ್ನು ಪ್ರತಿಪಾದಿಸುವ ನಾರಾಯಣ ಹೆಲ್ತ್ ಸಿಟಿಯ ವಿಭಿನ್ನ ಅಭಿಯಾನ #Dontbelate ಇಂದು ಆರಂಭವಾಯಿತು.
ಬೆಂಗಳೂರು ಎಫ್ಸಿ ಮತ್ತು ರಾಷ್ಟ್ರೀಯ ಫುಟ್ಬಾಲ್ ತಂಡದ ನಾಯಕ ಸುನಿಲ್ ಚೆಟ್ರಿ ಅವರು #Dontbelate ಅಭಿಯಾನಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ನಾರಾಯಣ ಹೆಲ್ತ್ ಸಿಟಿಯ ಚೀಫ್ ಆಪರೇಟಿಂಗ್ ಆಫೀಸರ್ ಜೋಸೆಫ್ ಪಸಂಗಾ, ಬಿಎಂಟಿ ಮುಖಸ್ಥ, ಸೀನಿಯರ್ ಕನ್ಸಲ್ಟಂಟ್ ಹೆಮಾಟಾಲಾಜಿಸ್ಟ್, ಕ್ಲಿನಿಕಲ್ ಡೈರೆಕ್ಟರ್ ಡಾ. ಶರತ್ ದಾಮೋದರ್, ನಾರಾಯಣ ಹೆಲ್ತ್ ಸಿಟಿಯ ಆಂಕಾಲಜಿ ಮತ್ತು ಬೋನ್ ಮಾರೊ ಟ್ರಾನ್ಸ್ಪ್ಲಾಂಟ್ನ ಮುಖ್ಯಸ್ಥ ಡಾ. ಸುನಿಲ್ ಭಟ್ ಹಾಗೂ ನಾರಾಯಣ ಹೆಲ್ತ್ ಸಿಟಿಯ ರೇಡಿಯೇಷನ್ ಆಂಕಾಲಜಿಯ ಮುಖ್ಯಸ್ಥ, ಹಿರಿಯ ಕನ್ಸಲ್ಟಂಟ್ ಡಾ. ಸಂದೀಪ್ ಜೈನ್ ಅವರಿದ್ದರು.
ಈ ಅಭಿಯಾನಕ್ಕೆ ಚಾಲನೆ ನೀಡಿದ ಸಂದರ್ಭದಲ್ಲಿ ಸುನೀಲ್ ಚೆಟ್ರಿ ಅವರು, 'ಈ ಕಾರ್ಯಕ್ರಮದ ಭಾಗವಾಗಲು ನನಗೆ ಸಂತಸವಾಗಲಿದೆ. ಈ ಅಭಿಯಾನವು ಸಾರ್ವಜನಿಕರಿಗೆ ಕ್ಯಾನ್ಸರ್ ಕುರಿತು ಜಾಗೃತಿ ಮುಡಿಸಲು, ಆದಷ್ಟು ಬೇಗನೇ ಗುರುತಿಸಿ ಚಿಕಿತ್ಸೆ ಪಡೆಯಲು ನೆರವಾಗಲಿದೆ. ಅಲ್ಲದೆ, ಕ್ಯಾನ್ಸರ್ ಅನ್ನು ಇನ್ನಷ್ಟು ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳಲು ಸಹಕಾರಿಯಾಗಲಿದೆ. ಅದರ ಪರಿಣಾಮ, ಗುರುತಿಸುವ ಬಗೆ, ಆರೋಗ್ಯಕರ ಜೀವನಶೈಲಿ ರೂಪಿಸಿ ಕೊಳ್ಳುವುದು ಸಾಧ್ಯವಾಗಲಿದೆ' ಎಂದರು.
ಈ ಕಾರ್ಯಕ್ರಮದಡಿ ನಾರಾಯಣ ಹೆಲ್ತ್ ಸಿಟಿಯು ಗೋಲ್ ಪೋಸ್ಟ್ ಮತ್ತು ಕ್ಯಾನ್ಸರ್ ಎಂದು ಬರೆಯಲಾದ ಬಾಲ್ ಅನ್ನು ನಗರದ ಎಲ್ಲ ಮಾಲ್ಗಳಲ್ಲಿ ಇಡಲಿದೆ. ಇಲ್ಲಿ ಭೇಟಿ ನೀಡುವವರಿಗೆ ಕ್ಯಾನ್ಸರ್ ಒದ್ಡೋಡಿಸುವುದರ ಸಾಂಕೇತಿಕವಾಗಿ ಬಾಲ್ ಅನ್ನು ಒದೆಯುವಂತೆ ಹೇಳಲಾಗುವುದು. ಇದರ ಜೊತೆಗೆ ಭೇಟಿ ನೀಡುವರು ಸ್ವಯಂ ಆರೋಗ್ಯ ರಕ್ಷಣೆ ಜಾಗೃತಿಗೆ ಒತ್ತು ನೀಡುವುದರ ಬಗ್ಗೆಯೂ ಪ್ರತಿಜ್ಞೆ ಸ್ವೀಕರಿಸುವರು ಎಂದರು.
ಕ್ಯಾನ್ಸರ್ ಎಂಬುದು ಗಂಭೀರ ಸ್ವರೂಪದ ಕಾಯಿಲೆ. ಇದರಲ್ಲಿ ಸ್ಕಿನ್ ಕ್ಯಾನ್ಸರ್, ಬ್ಲಡ್ ಕ್ಯಾನ್ಸರ್, ಥ್ರೋಟ್ ಕ್ಯಾನ್ಸರ್, ಲಂಗ್ಸ್ ಕ್ಯಾನ್ಸರ್ ಇನ್ನೂ ಅನೇಕ ವಿಧಗಳಿವೆ. ಕ್ಯಾನ್ಸರ್ನಿಂದ ಬಳಲುತ್ತಿರುವವವರು ವೈದ್ಯರಿಂದ ಅಗತ್ಯ ಚಿಕಿತ್ಸೆ ಪಡೆಯುವುದು ಅಗತ್ಯ. ಆದರೆ, ಕ್ಯಾನ್ಸರ್ ಇಂದಿಗೂ ಸಮಾಜದಲ್ಲಿ ದುಃಸ್ವಪ್ನವಾಗಿದ್ದು, ನಕಾರಾತ್ಮಕ ಅಂಶಗಳ ಚಿಂತನೆಯೇ ಹೆಚ್ಚಿದೆ. ಈ ಅಭಿಯಾನದ ಮುಖ್ಯ ಉದ್ದೇಶ ಇಂಥ ತಪ್ಪುಗ್ರಹಿಕೆ ಬದಲಿಸುವುದೇ ಆಗಿದೆ.