ಸುಮನಹಳ್ಳಿ ಸೇತುವೆ ಇಂದಿನಿಂದ ಸಂಚಾರಕ್ಕೆ ಮುಕ್ತ
ಬೆಂಗಳೂರು, ನವೆಂಬರ್ 18: ಸುಮನಹಳ್ಳಿ ಸೇತುವೆ ಇಂದಿನಿಂದ ಸಂಚಾರಕ್ಕೆ ಮುಕ್ತವಾಗಲಿದೆ.
ಸುಮನಹಳ್ಳಿ ಮೇಲ್ಸೇತುವೆಯ ಮೇಲ್ಭಾಗದಲ್ಲಿ ಗುಂಡಿ ದುರಸ್ತಿ ಕಾರ್ಯ ಪೂರ್ಣಗೊಂಡಿದ್ದು, ಇಂದಿನಿಂದ ಲಘು ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗಿದೆ.
10 ದಿನಗಳ ಕಾಲ ಸುಮನಹಳ್ಳಿ ಮೇಲ್ಸೇತುವೆ ಬಂದ್, ಪರ್ಯಾಯ ಮಾರ್ಗ?
ಕಳೆದ ಮಂಗಳವಾರ ವಿದೇಶದಿಂದ ತರಿಸಲಾದ ವಿಶೇಷ ಸಿಮೆಂಟ್ನಿಂದ ಗುಂಡಿ ಭರ್ತಿ ಕಾಮಗಾರಿ ಮಾಡಲಾಗಿದೆ. ಗುಂಡಿ ದುರಸ್ತಿಯಾಗಿರುವ ಹಿನ್ನೆಲೆಯಲ್ಲಿ ಈಗಾಗಲೇ ಕಾರು, ಬೈಕ್, ಆಟೋ ಸೇರಿದಂತೆ ಲಘು ವಾಹನಗಳ ಸಂಚಾರಕ್ಕೆ ಅವಕಾಶ ನೀಡುವಂತೆ ಸಂಚಾರಿ ಪೊಲೀಸರಿಗೆ ತಿಳಿಸಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನಗರದ ಹೊರವರ್ತುಲ ರಸ್ತೆಯ ಸುಮನಹಳ್ಳಿಯ ಮೇಲ್ಸೇತುವೆ ಮೇಲ್ಭಾಗದಲ್ಲಿ ದೊಡ್ಡ ಗುಂಡಿ ಸೃಷ್ಟಿಯಾಗಿದ್ದ ಹಿನ್ನೆಲೆಯಲ್ಲಿ ಕಳೆದ 18ದಿನಗಳಿಂದ ಗುಂಡಿ ಬಿದ್ದಿರುವ ನಾಗರಬಾವಿಯಿಂದ ಗೊರಗುಂಟೆ ಪಾಳ್ಯ ಮಾರ್ಗದಲ್ಲಿ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು.
ಗೊರಗುಂಟೆ ಪಾಳ್ಯ ಮೇಲ್ಸೇತುವೆಯು ಬಿಇಎಲ್ ರಸ್ತೆ ಹಾಗೂ ತುಮಕೂರು ರಸ್ತೆ ಹಾಗೂ ಔಟರ್ ರಿಂಗ್ ರಸ್ತೆಯನ್ನು ಸಂಪರ್ಕಿಸುತ್ತದೆ. ಹಾಗೆಯೇ ಯಶವಂತಪುರ ರೈಲ್ವೆ ಬ್ರಿಡ್ಜ್ ವರೆಗೂ ಮೇಲ್ಸೇತುವೆ ಇದೆ.
ಸುಮನಹಳ್ಳಿ ಮೇಲ್ಸೇತುವೆಯನ್ನು 2010ರಲ್ಲಿ ನಿರ್ಮಿಸಲಾಗಿತ್ತು, 2016ರವರೆಗೆ ಬಿಡಿಎ ನೋಡಿಕೊಳ್ಳುತ್ತಿತ್ತು. 2016ರಲ್ಲಿ ಬಿಬಿಎಂಪಿಗೆ ಹಸ್ತಾಂತರಿಸಲಾಗಿತ್ತು. ಅದಾದ ಬಳಿಕ ಬಿಬಿಎಂಪಿಯು ಹೆಚ್ಚಿನ ನಿಗಾ ವಹಿಸಿರಲಿಲ್ಲ.