ಬೆಂಗಳೂರು: ಸುಮನಹಳ್ಳಿ ಮೇಲ್ಸೇತುವೆ ರಂಧ್ರ ದುರಸ್ತಿಗೆ 1 ವಾರ, ಸುಸ್ಥಿರ ವರದಿಗೆ 30ದಿನ ಬೇಕು: ಬಿಬಿಎಂಪಿ
ಬೆಂಗಳೂರು, ಸೆಪ್ಟಂಬರ್ 26: ಬೆಂಗಳೂರಿನ ನಾಗರಭಾವಿ ಮತ್ತು ಡಾ. ರಾಜ್ಕುಮಾರ್ ಸಮಾಧಿ ಸ್ಥಳ ಸಂಪರ್ಕಿಸುವ ಮಾಗಡಿ ರಸ್ತೆ ಮೇಲೆ ಅಡ್ಡಲಾಗಿ ಇರುವ ಸುಮನಹಳ್ಳಿ ಮೇಲ್ಸೇತುವೆ ಮೇಲೆ ಬಿದ್ದಿದ್ದ ರಂಧ್ರದ ದುರಸ್ತಿ ಕಾರ್ಯ ನಡೆದಿದೆ. ಕಾಂಕ್ರೀಂಟ್ನಿಂದ ಈ ರಸ್ತೆ ಮುಚ್ಚಲು ಸುಮಾರು ಒಂದು ವಾರ ಹಿಡಿಯಲಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.
ನಗರದ ಹೊರವರ್ತುಲ ರಸ್ತೆಯಲ್ಲಿ ದಶಕದ ಹಿಂದಷ್ಟೇ ನಿರ್ಮಾಣವಾಗಿದ್ದ ಸುಮನಹಳ್ಳಿ ಮೇಲ್ಸೇತುವೆಯಲ್ಲಿ ಸೆಪ್ಟೆಂಬರ್ 20 ರಂದು ಮತ್ತೆ ಗುಂಡಿ ಕಾಣಿಸಿಕೊಂಡಿತ್ತು. ಕಾಂಕ್ರೀಟ್ ಕಿತ್ತುಹೋಗಿ ರಂಧ್ರದೊಳಗೆ ಕಬ್ಬಿಣದ ರಾಡುಗಳು ಹಾಗೂ ಮೇಲ್ಸೇತುವೆಯ ಕೆಳಗಿನ ರಸ್ತೆ ಸಹ ಕಾಣುವಂತೆ ರಂಧ್ರ ಕಾಣಿಸಿಕೊಂಡಿದೆ.
ಬೆಂಗಳೂರು: 3ವರ್ಷದಲ್ಲಿ ಸುಮನಹಳ್ಳಿ ಫ್ಲೈಓವರ್ನಲ್ಲಿ 2ನೇ ಬಾರಿ ರಂಧ್ರ, ಸಂಚಾರ ಸಮಸ್ಯೆ
ದುರಸ್ತಿ ಕಾರ್ಯದ ಬಗ್ಗೆ ಬಿಬಿಎಂಪಿ ಪಶ್ಚಿಮ ವಲಯದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಬಾಲಾಜಿಗೌಡ ಅವರು, ನಾಗರಬಾವಿಯಿಂದ ಗೊರಗುಂಟೆಪಾಳ್ಯ ಸಂಪರ್ಕಿಸುವ ಈ ರಸ್ತೆಯಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲು ಈ ಮೇಲ್ಸೇತುವೆ ನಿರ್ಮಿಸಲಾಗಿತ್ತು. ಸದ್ಯ ರಂಧ್ರದ ದುರಸ್ತಿ ಕಾರ್ಯ ನಡೆಯುತ್ತಿದ್ದು, ಈ ಭಾಗದಲ್ಲಿ ಸಂಚಾರ ದಟ್ಟಣೆ ಉಂಟಾಗಿದೆ. ನಾವು ರಂಧ್ರವನ್ನು ಸರಿಪಡಿಸಲು ರ್ಯಾಪಿಡ್ ಸಿಮೆಂಟ್ ಅಳವಡಿಸುವ ಕಾಮಗಾರಿ ಆರಂಭಿಸಿದ್ದೇವೆ. ಕೆಲಸ ಪೂರ್ಣಗೊಳ್ಳಲು ಒಂದು ವಾರ ಹಿಡಿಯಬಹುದು. ದುರಸ್ತಿಗಾಗಿ ಉನ್ನತ ದರ್ಜೆಯ ಕಾಂಕ್ರೀಟ್ ಬಳಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಮೇಲು ಸೇತುವೆ ಸುಸ್ಥಿರತೆಯ ವರದಿಗೆ 30ದಿನ
ಮೇಲ್ಸೇತುವೆಯಲ್ಲಿ ಈ ಸಮಸ್ಯೆ ಕಾಣಿಸಿಕೊಂಡ ತಕ್ಷಣೆವೆ ಬಿಬಿಎಂಪಿ ತನಿಖೆ ಮಾಡಿದೆ. ಮೇಲ್ಸೇತುವೆಯಲ್ಲಿ ಎರಡನೇ ಬಾರಿಗೆ ಕಾಣಿಸಿಕೊಂಡ ಈ ರಂಧ್ರದಿಂದಾಗಿ ಯಾವುದೇ ಅಪಾಯವಿಲ್ಲ. ಮತ್ತೊಮ್ಮೆ ಮೇಲ್ಸೇತುವೆಯನ್ನು ಸಮಗ್ರವಾಗಿ ವಿಶ್ಲೇಷಣೆ ನಡೆಸಲಾಗುವುದು. ಜತೆಗೆ ಫ್ಲೈಓವರ್ನ ಸ್ಥಿರತೆಯ ಬಗ್ಗೆ ವರದಿಯನ್ನು ಪಡೆಯಲು 30 ದಿನಗಳನ್ನು ತೆಗೆದುಕೊಳ್ಳಲಿದ್ದೇವೆ ಬಾಲಾಜಿಗೌಡ ಅವರು ವಿವರಿಸಿದರು.
3 ವರ್ಷದಲ್ಲಿ 2ನೇ ಭಾರಿ ಮತ್ತೆ ರಂಧ್ರ
ಈ ಸುಮನಹಳ್ಳಿ ಮೇಲ್ಸೇತುವೆಯನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ)ವು 2010ರಲ್ಲಿ ಸ್ಥಾಪಿಸಿ ಕಾರ್ಯಾರಂಭ ಮಾಡಿತ್ತು. ನಂತರ ಅದರ ನಿರ್ವಹಣೆಯನ್ನು 2016ರಲ್ಲಿ ಬಿಬಿಎಂಪಿಗೆ ಹಸ್ತಾಂತರಿಸಿತ್ತು. ಇದಾದ ಬಳಿಕ 2019ರಲ್ಲಿ ಮೇಲ್ಸೇತುವೆಯ ಇದೇ ಭಾಗದಲ್ಲಿ ಗುಂಡಿ ಬಿದ್ದಿತ್ತು. ಆಗಲೂ ವಾಹನ ಸವಾರರಿಗೆ ಸಾಕಷ್ಟು ತೊಂದರೆ ಉಂಟಾಗಿತ್ತು. ನಂತರ ಬಿಬಿಎಂಪಿ ದುರಸ್ತಿ ಕಾರ್ಯ ಮಾಡಿದ್ದರು. ಅದಾಗಿ ಮೂರು ವರ್ಷದಲ್ಲೇ ಮತ್ತೆ ಗುಂಡಿ ಬಿದ್ದಿರುವುದಕ್ಕೆ ಸಾಕಷ್ಟು ಆಕ್ರೋಶ ವ್ಯಕ್ತವಾಗಿದೆ.
ನಗರದ ಎಲ್ಲ ಮೇಲ್ಸೇತುವೆಗಳ ಅಧ್ಯಯನ
ಮೇಲ್ಸೇತುವೆಗಳ ಕುರಿತು ಮಾತನಾಡಿದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು, ನಗರದ ಎಲ್ಲ 47 ಮೇಲ್ಸೇತುವೆಗಳ ಸ್ಥಿರತೆ, ಕಾರ್ಯಕ್ಷಮತೆ ಕುರಿತು ಅಧ್ಯಯನ ಮಾಡಲು ಬಿಬಿಎಂಪಿ ಕಂಪನಿ ಒಂದಕ್ಕೆ ಗುತ್ತಿಗೆ ನೀಡಿದೆ. ಶಿವಾನಂದ ವೃತ್ತದಲ್ಲಿನ ಉಕ್ಕಿನ ಮೇಲ್ಸೇತುವೆಯಲ್ಲಿ ಒಂದು ಬದಿ ಸಂಚಾರ ಮೇಲ್ಸೇತುವೆಯ ಒಂದು ಬದಿ ತೆರೆಯಲಾಗಿದೆ ಎಂದರು.
ಶಿವಾನಂದ ವೃತ್ತದ ಉಕ್ಕಿನ ಮೇಲ್ಸೇತುವೆಯ ಒಂದು ಬದಿಯನ್ನು ಈ ಹಿಂದೆ ಪ್ರಾಯೋಗಿಕವಾಗಿ ಸಂಚಾರಕ್ಕೆಂದು ತೆರೆದಿತ್ತು. ಆದರೆ ಮೇಲ್ಸೇತುವೆಯ ಗುಣಮಟ್ಟ ಬಗ್ಗೆ ಟೀಕೆ ವ್ಯಕ್ತವಾಗಿದ್ದರಿಂದ ಸರಿಪಡಿಸುವಂತೆ ಮುಖ್ಯ ಆಯುಕ್ತರು ಸೂಚಿಸಿದ್ದರು. ಫ್ಲೈಓವರ್ ಸುರಕ್ಷತೆಗೆ ವಿಚಾರದಲ್ಲಿ ಯಾವ ಸಮಸ್ಯೆ ಇಲ್ಲ ಎಂದು ಬಿಬಿಎಂಪಿ ಯೋಜನಾ ವಿಭಾಗದ ಮುಖ್ಯ ಎಂಜಿನಿಯರ್ ಲೋಕೇಶ್ ಮಾಹಿತಿ ನೀಡಿದ್ದಾರೆ.
ಐಐಎಸ್ಸಿ ತಜ್ಞರಿಗೆ ಪಾಲಿಕೆ ಪತ್ರ
ಶಿವಾನಂದ ಮೇಲ್ಸೇತುವೆ ಬಗ್ಗೆ ಕೆಲವರಿಗೆ ಇನ್ನೂ ಅನುಮಾನ ಹೋಗಿಲ್ಲ. ಈ ಬಗ್ಗೆ ಕೆಲವರು ಇನ್ನೂ ಕಳವಳ ವ್ಯಕ್ತಪಡಿಸಿದ್ದರಿಂದ, ನಾವು ಲೆಕ್ಕಪರಿಶೋಧನೆ ನಡೆಸಲು ಐಐಎಸ್ಸಿ ತಜ್ಞರಿಗೆ ಪತ್ರ ಬರೆದಿದ್ದೇವೆ. ಸಂಚಾರದ ವೇಳೆ ಉಂಟಾಗುವ ಕಂಪನಗಳನ್ನು ಸರಿಪಡಿಸಿದ ನಂತರ ತಜ್ಞರ ಸಲಹೆ ಮೇರೆಗೆ ಕಾರ್ಯಗತಗೊಳಿಸಲಾಗುವುದು ಎಂದು ಬಿಬಿಎಂಪಿ ಯೋಜನಾ ವಿಭಾಗದ ಮುಖ್ಯ ಎಂಜಿನಿಯರ್ ಲೋಕೇಶ್ ಮಾಹಿತಿ ನೀಡಿದ್ದಾರೆ.
ವಿವಿಧ ಅಡತಡೆಗಳ ಮಧ್ಯೆ ಶಿವಾನಂದ ವೃತ್ತದ ಉಕ್ಕಿನ ಮೇಲ್ಸೇತುವೆ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಉದ್ದೇಶದಂತೆ ಆಗಸ್ಟ್ 15ರಂದೇ ಮೇಲ್ಸೇತುವೆಯ ಸಂಚಾರ ಮುಕ್ತಕ್ಕೆ ಮಳೆ ಅಡ್ಡಿ ಪಡಿಸಿತ್ತು. ನಂತರ ಆಗಸ್ಟ್ 30ರಂದು ಸಾರ್ವಜನಿಕರ ಓಡಾಟಕ್ಕೆ ಮುಕ್ತಗೊಳಿಸಲಾಗುವುದು ಎಂದು ಬಿಬಿಎಂಪಿ ಹೇಳಿತ್ತು. ಇದೀಗ ಇನ್ನೊಂದು ವಾರದಲ್ಲಿ ಶಿವಾನಂದ ಮೇಲ್ಸೇತುವೆ ಉದ್ಘಾಟನೆಗೆ ಬಿಬಿಎಂಪಿ ಸಜ್ಜಾಗಿದೆ.