ಅಂಬರೀಶ್ ಸಮಾಧಿಗೆ ನಮಿಸಿ ಮಂಡ್ಯದತ್ತ ತೆರಳಿದ ಸುಮಲತಾ
Recommended Video
ಬೆಂಗಳೂರು, ಮೇ 29: ದಿವಂಗತ ಅಂಬರೀಶ್ ಅವರ ಜಯಂತಿಯಾದ ಇಂದು ಪತ್ನಿ ಹಾಗೂ ಮಂಡ್ಯ ಸಂಸದೆ ಸುಮಲತಾ ಅವರು ಇಂದು ಕಂಠೀರವ ಸ್ಟುಡಿಯೋದಲ್ಲಿ ಅಂಬರೀಶ್ ಅವರ ಸ್ಮಾರಕಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ಮಂಡ್ಯ ಸಂಸದರಾಗಿ ಆಯ್ಕೆ ಆಗಿರುವ ಸುಮಲತಾ ಅವರು ಇಂದು ಬೆಳಿಗ್ಗೆಯೇ ಕಂಠೀರವ ಸ್ಟುಡಿಯೋಕ್ಕೆ ತೆರಳಿ ಅಂಬರೀಶ್ ಸ್ಮಾರಕಕ್ಕೆ ಮಗ ಅಭಿಶೇಕ್ ಅವರೊಂದಿಗೆ ಸೇರಿ ಪೂಜೆ ಸಲ್ಲಿಸಿದರು.
'ಅಮ್ಮನ ಭರ್ಜರಿ ಜಯ': ಸಾಯುವವರೆಗೂ ಮಂಡ್ಯಕ್ಕೆ ಋಣಿ ಎಂದ ದರ್ಶನ್
ನೆರೆದಿದ್ದ ಅಭಿಮಾನಿಗಳೊಂದಿಗೂ ಸುಮಲತಾ ಅವರು ಕೆಲ ಕಾಲ ಮಾತನಾಡಿದರು. ಅಭಿಶೇಕ್, ರಾಕ್ಲೈನ್ ವೆಂಕಟೇಶ್ ಇನ್ನೂ ಹಲವು ಅಭಿಮಾನಿಗಳು, ಚಿತ್ರರಂಗದ ಪ್ರಮುಖರು ಈ ಸಂದರ್ಭದಲ್ಲಿ ಅಲ್ಲಿ ಹಾಜರಿದ್ದರು.
ಇಂದು ಅಂಬರೀಶ್ ಅವರ 62 ನೇ ಜನ್ಮದಿನೋತ್ಸವವಾಗಿದೆ. ಅಂಬರೀಶ್ ಅವರು ಕಳೆದ ವರ್ಷ ನವೆಂಬರ್ ತಿಂಗಳ 24 ರಂದು ಅನಾರೋಗ್ಯದ ಕಾರಣದಿಂದ ಅಸುನೀಗಿದರು. ಅವರ ಹುಟ್ಟುಹಬ್ಬವನ್ನು ಅಭಿಮಾನಿಗಳು ವರ್ಷಗಳಿಂದಲೂ ಭಾರಿ ಅದ್ದೂರಿಯಾಗಿ ಆಚರಿಸಿಕೊಂಡು ಬರುತ್ತಿದ್ದಾರೆ.
ಸುಮಲತಾ ಸೇರಿ, 2019ರ ಪಕ್ಷೇತರ ಸಂಸದರು ಯಾರು ಯಾರು?
ರಕ್ತದಾನ, ಅನ್ನದಾನ ಆಯೋಜನೆ
ಅಂಬರೀಶ್ ಜನ್ಮದಿನದ ಪ್ರಯುಕ್ತ ಕಂಠೀರವ ಸ್ಟುಡಿಯೋದಲ್ಲಿ ಅಭಿಮಾನಿಗಳು ರಕ್ತದಾನ ಶಿಬಿರ ಏರ್ಪಡಿಸಿದ್ದರು. ಇದನ್ನು ಸುಮಲತಾ ಅವರು ಉದ್ಘಾಟಿಸಿದರು. ಅನ್ನಸಂತರ್ಪಣೆ ಸಹ ಆಯೋಜಿಸಲಾಗಿತ್ತು. ರಕ್ತದಾನ ಮಾಡಿದವರಿಗೆ ಸುಮಲತಾ ಅವರು ಪ್ರಮಾಣ ಪತ್ರಗಳನ್ನು ವಿತರಿಸಿದರು.
ಹಲವು ಗಣ್ಯರು ಭಾಗಿ
ದೊಡ್ಡಣ್ಣ, ಬಾಬು ರಾಜೇಂದ್ರ ಪ್ರಸಾದ್, ರಾಕ್ ಲೈನ್ ವೆಂಕಟೇಶ್, ಅಂಬರೀಶ್ ಅವರ ಸಹೋದರ ಇನ್ನೂ ಹಲವು ಪ್ರಮುಖರು ಜನ್ಮದಿನ ಆಚರಣೆ ಸಂದರ್ಭದಲ್ಲಿ ಹಾಜರಿದ್ದರು. ಇದೇ ದಿನ ಮಂಡ್ಯದಲ್ಲಿ ಸ್ವಾಭಿಮಾನಿ ಅಭಿನಂದನ ಸಮಾವೇಶದಲ್ಲಿ ಅಂಬರೀಶ್ ಹುಟ್ಟುಹಬ್ಬವನ್ನು ಆಚರಿಸಲಾಗುತ್ತದೆ.
ಮಂಡ್ಯದಲ್ಲಿ ಭಾರಿ ಸಮಾವೇಶ
ಭಾರಿ ನಿರೀಕ್ಷೆಯನ್ನು ಈ ಸಮಾವೇಶ ಹುಟ್ಟುಹಾಕಿದ್ದು, ಸುಮಲತಾ ಅವರೊಂದಿಗೆ ದರ್ಶನ್, ಯಶ್ ಅವರೂಗಳೂ ಸಹ ಭಾಗವಹಿಸುತ್ತಿದ್ದಾರೆ. ಮಂಡ್ಯದ ಜಿದ್ದಾ-ಜಿದ್ದಿನ ಲೋಕಸಮರದಲ್ಲಿ ಭಾರಿ ಅಂತರದಲ್ಲಿ ಜಯಿಸಿ ಎದುರಾಳಿಗಳಿಗೆ ಕೃತಿಯ ಮೂಲಕ ಈಗಾಗಲೇ ಉತ್ತರಿಸಿರುವ ಸುಮಲತಾ ಅವರು ಮಾತಿನ ಮೂಲಕ ಇಂದು ಉತ್ತರಿಸಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ.
ಮಂಡ್ಯದತ್ತ ತೆರಳಿದ ಸುಮಲತಾ
ಸ್ಮಾರಕಕ್ಕೆ ಪೂಜೆ ಸಲ್ಲಿಸಿದ ಬಳಿಕ, ಸುಮಲತಾ, ಅಭಿಶೇಖ್, ರಾಕ್ಲೈನ್ ವೆಂಕಟೇಶ್ ಅವರುಗಳು ಮಂಡ್ಯದತ್ತ ತೆರಳಿದರು. ಮಂಡ್ಯದಲ್ಲಿ ಇಂದು ಸ್ವಾಭಿಮಾನಿ ಅಭಿನಂದನಾ ಸಮಾವೇಶ ಆಯೋಜನೆ ಮಾಡಲಾಗಿದ್ದು, ಸುಮಲತಾ ಅವರು ಇಂದು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.