ಅಭಿಗೆ ವಿಶ್ ಮಾಡಿದ ನಿಖಿಲ್, ಇದೆ ಸರಿಯಾದ ಹಾದಿ ಎಂದ ಸುಮಲತಾ
Recommended Video
ರಾಜಕೀಯದಲ್ಲಿ ಯಾರು ಶತ್ರುಗಳಿಲ್ಲ, ಯಾರು ಮಿತ್ರರೂ ಇರುವುದಿಲ್ಲ ಎಂಬ ಮಾತಿದೆ. ಆಪ್ತ ಸ್ನೇಹಿತರ ನಡುವೆ ರಾಜಕೀಯ ಕದನ, ವೈಮನಸ್ಯದ ಹೊಗೆಯಾಡಿದ್ದು ಈಗ ತಿಳಿಕೊಂಡಿದೆ. ಮಂಡ್ಯ ಲೋಕಸಭಾ ಚುನಾವಣೆ ಸೋಲಿನ ಬಳಿಕ ನಿಖಿಲ್ ಕುಮಾರಸ್ವಾಮಿ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.
ರೆಬಲ್ ಸ್ಟಾರ್ ಅಂಬರೀಷ್ ಅವರ ಪುತ್ರ ಅಭಿಷೇಕ್ ಅವರ ಚೊಚ್ಚಲ ಸಿನಿಮಾ 'ಅಮರ್' ಗೆ ಶುಭ ಹಾರೈಸಿದ್ದಾರೆ. ಮಂಡ್ಯ ಚುನಾವಣೆ ಸಂದರ್ಭದಲ್ಲಿ ಎರಡು ಬಣಗಳ ಕುರಿತು ಸಾಮಾಜಿಕ ಜಾಲ ತಾಣಗಳಲ್ಲಿ ಅನಗತ್ಯ ನಿಂದನೆ, ಟೀಕೆ, ಟ್ರಾಲ್ ಕಂಡು ಬಂದಿತ್ತು. ಆದರೆ, ಇದೆಲ್ಲವನ್ನು ಮರೆತು ನಿಖಿಲ್ ಅವರು ಸೌಹಾರ್ದತೆಯ, ಭ್ರಾತೃತ್ವದೆಡೆ ಪಥದಲ್ಲಿ ಹೆಜ್ಜೆ ಇಟ್ಟು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಅಭಿಷೇಕ್ ಗೆ ಶುಭ ಹಾರೈಸಿದ್ದಾರೆ. ಇದಕ್ಕೆ ಅಭಿ ಕೂಡಾ ಪ್ರತಿಕ್ರಿಯಿಸಿದ್ದಾರೆ. ಇವರಿಬ್ಬರ ಪೋಸ್ಟ್ ಗಳನ್ನು ಟ್ವೀಟ್ ಮಾಡಿರುವ ಸಂಸದೆ ಸುಮಲತಾ, ಮುಂದೆ ಸಾಗಲು ಇದೇ ಸರಿಯಾದ ಮಾರ್ಗ ಎಂದಿದ್ದಾರೆ.
ಮಂಡ್ಯ ಜನರ ಜೊತೆಗಿರ್ತೇನೆ ಅಂಬರೀಶ್ ಮೇಲಾಣೆ: ಸುಮಲತಾ
ಮಂಡ್ಯ ಚುನಾವಣೆ ಬಳಿಕ ನಿಖಿಲ್ ಮತ್ತು ಅಭಿಷೇಕ್ ನಡುವಿನ ಸ್ನೇಹ ಮುಂದುವರಿಯುತ್ತಾ? ಇಲ್ಲವಾ? ಒಬ್ಬರಿಗೊಬ್ಬರು ಮಾತನಾಡುವುದಿಲ್ಲವಾ? ಎಂಬೆಲ್ಲ ಕೆಟ್ಟ ಕುತೂಹಲ ಅಭಿಮಾನಿಗಳಲ್ಲಿತ್ತು. ಈಗ ಇವರಿಬ್ಬರ ಆತ್ಮೀಯ ಮಾತುಕತೆ ಪೋಸ್ಟ್ ನೋಡಿದಮೇಲೆ ಇಬ್ಬರ ನಡುವಿನ ಬಾಂಧವ್ಯಕ್ಕೆ ಕವಿದಿದ್ದ ಕಾರ್ಮೋಡ ಸರಿದಿದೆ ಎನ್ನಬಹುದು.
2019ರ ಲೋಕಸಭೆ ಚುನಾವಣೆ ಫಲಿತಾಂಶ ಮೇ 23ರಂದು ಪ್ರಕಟವಾಗಿದ್ದು, ಬಿಜೆಪಿ ಬೆಂಬಲದಿಮ್ದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸುಮಲತಾ ಅವರು ಜೆಡಿಎಸ್ -ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರನ್ನು 1.26 ಲಕ್ಷಕ್ಕೂ ಅಧಿಕ ಮತಗಳಿಂದ ಸೋಲಿಸಿ ಸಂಸದೆಯಾಗಿ ಆಯ್ಕೆಯಾಗಿದ್ದಾರೆ.