ಸುಕ್ರಿ ಬೊಮ್ಮಗೌಡ, ಸಾಕ್ಷಿ ಮಲಿಕ್ ಸೇರಿ ಐವರಿಗೆ ಚುಂಚಶ್ರೀ ಪ್ರಶಸ್ತಿ
ಮಂಡ್ಯ, ಸೆಪ್ಟೆಂಬರ್ 22: ಆದಿಚುಂಚನಗಿರಿ ಮಠದ ವತಿಯಿಂದ ನೀಡಲಾಗುವ 2017ನೇ ಸಾಲಿನ ಚುಂಚಶ್ರೀ ಪ್ರಶಸ್ತಿಗೆ ಐವರು ಗಣ್ಯರನ್ನು ಆಯ್ಕೆ ಮಾಡಲಾಗಿದೆ.
ಕ್ರೀಡಾ ಕ್ಷೇತ್ರದಿಂದ ಬೆಂಗಳೂರಿನ ಪದ್ಮಶ್ರೀ ಡಾ.ಮಾಲತಿ ಹೊಳ್ಳ, ಒಲಂಪಿಕ್ ಪದಕ ವಿಜೇತೆ ಸಾಕ್ಷಿ ಮಲ್ಲಿಕ್, ಕಲಾ ಕ್ಷೇತ್ರದಿಂದ ಪದ್ಮಶ್ರೀ ಪುರಸ್ಕೃತರಾದ ಜಾನಪದ ಕಲಾವಿದೆ ಅಂಕೋಲದ ಸುಕ್ರಿ ಬೊಮ್ಮಗೌಡ, ಶಿಕ್ಷಣ ಮತ್ತು ಸಾಹಿತ್ಯ ಕ್ಷೇತ್ರದಿಂದ ತುಮಕೂರಿನ ಡಾ.ಡಿ.ಕೆ.ರಾಜೇಂದ್ರ, ಸಂಸ್ಕೃತ ಮತ್ತು ಸಾಹಿತ್ಯ ಕ್ಷೇತ್ರದಿಂದ ಬೆಂಗಳೂರಿನ ಪ್ರೊ. ಶಿವರಾಮ್ ಅಗ್ನಿಹೋತ್ರಿಯವರನ್ನು ಚುಂಚಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಇದೇ ಭಾನುವಾರ ಆದಿಚುಂಚನಗಿರಿಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪೀಠಾಧ್ಯಕ್ಷರಾದ ಡಾ.ನಿರ್ಮಲಾನಂದನಾಥ ಸ್ವಾಮಿಗಳು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಸಮಾರಂಭದಲ್ಲಿ ಸಾರಿಗೆ ಸಚಿವ ಎಚ್.ಎಂ.ರೇವಣ್ಣ, ಲೋಕಸಭಾ ಸದಸ್ಯ ಕೆ.ಎಚ್.ಮುನಿಯಪ್ಪ, ಶಾಸಕ ಚೆಲುವರಾಯಸ್ವಾಮಿ, ನಿವೃತ್ತ ಐಎಎಸ್ ಅಧಿಕಾರಿ ಟಿ.ತಿಮ್ಮೇಗೌಡ ಮತ್ತಿತರರು ಭಾಗವಹಿಸಲಿದ್ದಾರೆ.
ಪ್ರಶಸ್ತಿಯು ತಲಾ 50ಸಾವಿರ ರೂಪಾಯಿ ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.