ಅಮಿತ್ ಶಾ ಭೇಟಿ ಮಾಡಲು ನಾವು ದೆಹಲಿಗೆ ಹೋಗುತ್ತಿಲ್ಲ: ಕೆ ಸುಧಾಕರ್
ಬೆಂಗಳೂರು, ಆಗಸ್ಟ್ 23: ನಾವು ಅಮಿತ್ ಶಾ ಅವರನ್ನು ಭೇಟಿ ಮಾಡಲು ದೆಹಲಿಗೆ ಹೋಗುತ್ತಿಲ್ಲ, ಕೋರ್ಟ್ ವಿಚಾರಣೆ ಇದೆ ಹಾಗಾಗಿ ಹೋಗುತ್ತಿದ್ದೇವೆ ಎಂದು ಅನರ್ಹ ಶಾಸಕ ಕೆ ಸುಧಾಕರ್ ಹೇಳಿದ್ದಾರೆ.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ದೆಹಲಿಗೆ ಹೋಗುತ್ತಿರುವುದು ಕೋರ್ಟಿಗೆ ಸಲ್ಲಿಸಿರುವ ಅರ್ಜಿ ವಿಚಾರಣೆಗೆ ಮಾತ್ರ. ಬಿಜೆಪಿ ನಾಯಕರನ್ನು ಭೇಟಿ ಮಾಡುವುದಕ್ಕಲ್ಲ. ಶನಿವಾರ ವಕೀಲರ ಜೊತೆ ಅರ್ಜಿ ವಿಚಾರವಾಗಿ ಚರ್ಚೆ ಮಾಡುತ್ತೇವೆ ಎಂದರು.
ರಮೇಶ್ ಕುಮಾರ್ ಅವರದ್ದು ಸ್ಯಾಡಿಸ್ಟ್ ಮನೋಭಾವ: ಸುಧಾಕರ್
ಮಾಜಿ ಪ್ರಧಾನಿಗಳು, ಹಿರಿಯರು, ಅವರ ಹೇಳಿಕೆ ಬಗ್ಗೆ ಏನು ಉತ್ತರ ಕೊಡುವುದಿಲ್ಲ. ದೇವೇಗೌಡ ಅವರು ಆರೋಪ ಮಾಡುತ್ತಿರುವುದು ಸಿಎಲ್ಪಿ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಅವರ ಮೇಲೆ. ಈ ಆರೋಪಕ್ಕೆ ಸಿದ್ದರಾಮಯ್ಯನವರೇ ಉತ್ತರ ಕೊಟ್ಟರೆ ಉತ್ತಮ ಎಂದರು.
ನಾನು ಪಕ್ಷದ ಬಗ್ಗೆ ಯಾವತ್ತೂ ಮಾತನಾಡಿಲ್ಲ. ಆದರೂ ನನ್ನನ್ನು ಅನರ್ಹಗೊಳಿಸಿದ್ದಾರೆ.ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಬೇಡ, ಬೇರೆ ಯಾರಾದರೂ ಸರ್ಕಾರ ರಚಿಸಲಿ ಅಂತ ನಾವು ರಾಜೀನಾಮೆ ನೀಡಿದ್ದೇವೆ. ಈ ವಿಚಾರವಾಗಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದೇನೆ. ಸುಪ್ರೀಂ ತೀರ್ಪು ಏನು ಬರುತ್ತೆ ಅಂತ ಕಾದು ನೋಡುಬೇಕಿದೆ ಎಂದರು.
ಅಸಮಾಧಾನ ಎಲ್ಲಾ ಪಕ್ಷದಲ್ಲೂ ಇದೆ, ಕೆಲವರು ಹೊ ಹಾಕುತ್ತಾರೆ, ಕೆಲವರು ಮನಸ್ಸಿನಲ್ಲಿಯೇ ಇಟ್ಟುಕೊಳ್ಳುತ್ತಾರೆಷ್ಟೆ, ಅದು ಹೇಗೆ ಪರಿಣಾಮ ಬೀರುತ್ತೆ ಎನ್ನುವುದು ಮುಖ್ಯವೆಂದರು.