ನೆರೆ ಸಂತ್ರಸ್ತರಿಗೆ 10 ಕೋಟಿ ರೂ. ನೆರವು ನೀಡಲು ಮುಂದಾದ ಸುಧಾಮೂರ್ತಿ
ಬೆಂಗಳೂರು, ಆಗಸ್ಟ್ 08: ಉತ್ತರ ಕರ್ನಾಟಕ, ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಭಾರೀ ಮಳೆಯಿಂದ ಉಂಟಾಗಿರುವ ಪ್ರವಾಹದಿಂದ ಸಂಕಷ್ಟ ಅನುಭವಿಸುತ್ತಿರುವ ಸಂತ್ರಸ್ತರಿಗೆ 10 ಕೋಟಿ ರೂ. ನೆರವು ನೀಡಲು ಇನ್ಫೋಸಿಸ್ ಫೌಂಡೇಶನ್ ನ ಸುಧಾ ಮೂರ್ತಿ ನಿರ್ಧರಿಸಿದ್ದಾರೆ. ಜೊತೆಗೆ ನಿರಾಶ್ರಿತರಿಗೆ ಮನೆ ಕಟ್ಟಿಕೊಡುವುದಕ್ಕೂ ನೆರವು ನೀಡುವುದಾಗಿ ಅವರು ಹೇಳಿದ್ದಾರೆ.
ದಕ್ಷಿಣ ಕನ್ನಡ, ಕೊಡಗು, ಉತ್ತರ ಕನ್ನಡ, ಗದಗ, ಚಿಕ್ಕಮಗಳೂರು, ಹಾವೇರಿ, ಶಿವಮೊಗ್ಗ, ಬೀದರ್, ಬೆಳಗಾವಿ, ಚಿಕ್ಕೋಡಿ, ರಾಯಚೂರು, ಬಾಗಲಕೋಟೆ , ಯಾದಗಿರಿ, ವಿಜಯಪುರ, ಕೊಪ್ಪಳ, ಧಾರವಾಡ, ಬಳ್ಳಾರಿ, ಹಾಸನ, ಉಡುಪಿ ಹಾಗೂ ಕಲಬುರಗಿ ಜಿಲ್ಲೆಗಳಲ್ಲಿ ಸುರಿಯುತ್ತಿರುವ ಅತಿಯಾದ ಮಳೆಯಿಂದಾಗಿ ಪ್ರವಾಹ ತಲೆದೂರಿದೆ.
ನೆರೆ ಪೀಡತರ ನೆರವಿಗೆ ದಾನಕ್ಕಾಗಿ ಮನವಿ ಮಾಡಿದ ಯಡಿಯೂರಪ್ಪ
ಪ್ರವಾಹ ಸಂತ್ರಸ್ತರಿಗೆ ನೆರವು ನೀಡಲು ಈಗಾಗಲೇ ಹಲವು ಸಂಘ-ಸಂಸ್ಥೆಗಳು ಮುಂದೆ ಬಂದಿದ್ದು, ಮುಖ್ಯಮಂತ್ರಿ ಪರಿಹಾರ ನಿಧಿಗೂ ಧನಸಹಾಯ ಮಾಡಬಹುದಾಗಿದೆ. ಸಂಘ ಸಂಸ್ಥೆಗಳ ಮೂಲಕ ಬಟ್ಟೆ, ಆಹಾರಗಳನ್ನೂ ಸಂತ್ರಸ್ತರಿಗೆ ತಲುಪಿಸಬಹುದಾಗಿದೆ. ಪ್ರವಾಹ ಪೀಡಿತ ಎಲ್ಲಾ ಜಿಲ್ಲೆಗಳಿಗೂ ಪ್ರತ್ಯೇಕ ಸಹಾಯವಾಣಿ ಸಂಖ್ಯೆಯಗಳನ್ನು ಈಗಾಗಲೇ ನೀಡಲಾಗಿದ್ದು, ನೆರವಿನ ಅಗತ್ಯವಿರುವವರು ಆ ಸಂಖ್ಯೆಗಳಿಗೆ ಕರೆ ಮಾಡಬಹುದಾಗಿದೆ.
ಫೆಬ್ರವರಿಯಲ್ಲಿ ಪುಲ್ವಾಮಾ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ಎಲ್ಲಾ 40 ಯೋಧರ ಕುಟುಂಬಗಳಿಗೂ ಇನ್ಫೋಸಿಸ್ ಪ್ರತಿಷ್ಠಾನದ ಸುಧಾ ಮೂರ್ತಿ 10 ಲಕ್ಷ ರೂ. ನೆರವು ನೀಡಿದ್ದರು.
ಕರ್ನಾಟಕ ಪ್ರವಾಹ: ಸಂತ್ರಸ್ತರಿಗೆ ನೆರವು ನೀಡುವುದು ಹೇಗೆ?
ಕಳೆದ ವರ್ಷ ಕೊಡಗಿನಲ್ಲಿ ಉಂಟಾದ ಪ್ರವಾಹದ ಸಂದರ್ಭದಲ್ಲೂ ಸುಧಾಮೂರ್ತಿ ಅವರು ಸಂತ್ರಸ್ಥರಿಗೆ ಇನ್ಫೋಸಿಸ್ ವತಿಯಿಂದ ಹಣದ ನೆರವು ಮಾತ್ರವಲ್ಲದೆ, ಆಹಾರ, ಬಟ್ಟೆಗಳನ್ನು ಖುದ್ದಾಗಿ ಕೂತು ಪ್ಯಾಕ್ ಮಾಡಿ ಕಳಿಸಿದ್ದ ವಿಡಿಯೋ ಸಹ ವೈರಲ್ ಆಗಿದ್ದನ್ನು ಇಲ್ಲಿ ಸ್ಮರಿಸಬಹುದು