ಮಳೆ; ತರಕಾರಿ ಆಯ್ತು ಈಗ ಸೊಪ್ಪುಗಳ ಬೆಲೆಯೂ ಏರಿಕೆ
ಬೆಂಗಳೂರು, ಅಕ್ಟೋಬರ್ 25; ಬಂಗಾಳಕೊಲ್ಲಿ ಮತ್ತು ಅರಬ್ಬೀ ಸಮುದ್ರದಲ್ಲಿ ಉಂಟಾದ ಚಂಡಮಾರುತದ ಪರಿಣಾಮ ಬೆಂಗಳೂರು ಮತ್ತು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ಇದರ ಪರಿಣಾಮ ತರಕಾರಿ ಮತ್ತು ಸೊಪ್ಪಿನ ದರದಲ್ಲಿ ಏರಿಕೆಯಾಗಿದೆ.
ಬೆಂಗಳೂರು ನಗರದ ಕಲಾಸಿಪಾಳ್ಯ, ಯಶವಂತಪುರ ಸೇರಿದಂತೆ ವಿವಿಧ ಮಾರುಕಟ್ಟೆಗಳಲ್ಲಿ ದಸರಾ ಸಂದರ್ಭದಿಂದಲೇ ತರಕಾರಿ ಬೆಲೆ ಏರಿಕೆಯಾಗಿತ್ತು. ಈಗ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಸೊಪ್ಪುಗಳ ಬೆಲೆಯೂ ಏರಿಕೆಯಾಗಿದೆ.
ಮಳೆ; ಟೊಮೆಟೋ, ಈರುಳ್ಳಿ ಬೆಲೆ ಭಾರೀ ಏರಿಕೆ
ಜನರು ತರಕಾರಿಕೊಂಡು 5 ರೂ. ಮತ್ತು 10 ರೂ. ಕೊತ್ತಂಬರಿ ಸೊಪ್ಪು ಕೊಡಿ ಎಂದರೆ ಅಂಗಡಿಯವರು ಕೊಡುತ್ತಿಲ್ಲ. ದಸರಾ ಸಂದರ್ಭದಲ್ಲಿ 10 ರಿಂದ 15 ರೂ. ಇದ್ದ ಒಂದು ಕಟ್ಟು ಕೊತ್ತಂಬರಿ ಸೊಪ್ಪಿನ ಬೆಲೆ ಈಗ 40 ರಿಂದ 45 ರೂ. ಆಗಿದೆ.
ಕರ್ನಾಟಕ; ಸತತ ಮಳೆ, ತರಕಾರಿ ಬೆಲೆಗಳಲ್ಲಿ ಏರಿಕೆ
"ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಬೆಳಗಳಿಗೆ ಹಾನಿಯಾಗಿದೆ. ಆದ್ದರಿಂದ ಮಾರುಕಟ್ಟೆಗೆ ಸೊಪ್ಪಿನ ಪೂರೈಕೆ ಆಗುತ್ತಿಲ್ಲ. ಇದರಿಂದಾಗಿ ಬೆಲೆಗಳು ಏರಿಕೆಯಾಗುತ್ತಿದೆ" ಎಂದು ತಳ್ಳುಗಾಡಿಯಲ್ಲಿ ಸೊಪ್ಪು ಮಾರುವ ವೆಂಕಟೇಶ್ ಹೇಳಿದ್ದಾರೆ.
ಕರ್ನಾಟಕ; ಅಕ್ಟೋಬರ್ 25ರಂದು ಜಲಾಶಯಗಳ ನೀರಿನ ಮಟ್ಟ
ಕೇವಲ ಕೊತ್ತೊಂಬರಿ ಸೊಪ್ಪಿನ ಬೆಲೆ ಏರಿಕೆಯಾಗಿಲ್ಲ. ಪಾಲಕ್, ದಂಟು, ಮೆಂತ್ಯ, ಸಬ್ಬಕ್ಕಿ ಮುಂತಾದ ಸೊಪ್ಪುಗಳ ಬೆಲೆ ಸಹ ಏರಿಕೆಯಾಗಿದೆ. ಈಗಾಗಲೇ ಕೋಲಾರ, ಚಿಕ್ಕಬಳ್ಳಾಪುರ ಭಾಗದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಟೊಮೆಟೋ ಸೇರಿದಂತೆ ವಿವಿಧ ಬೆಳೆಗೆ ಹಾನಿಯಾಗಿದೆ. ಮುಂದಿನ ದಿನಗಳಲ್ಲಿ ಬೆಲೆ ಇನ್ನಷ್ಟು ಏರಿಕೆಯಾಗುವ ನಿರೀಕ್ಷೆ ಇದೆ.
ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಮಳೆಯ ಅಬ್ಬರ ಇನ್ನೂ ಕಡಿಮೆಯಾಗಿಲ್ಲ. ಮುಂದಿನ ವಾರ ದೀಪಾವಳಿ ಹಬ್ಬವಿದ್ದು, ಹಣ್ಣು ಮತ್ತು ತರಕಾರಿಗಳ ಬೆಲೆ ಮತ್ತಷ್ಟು ಏರಿಕೆಯಾಗಲಿದೆ. ಒಂದು ಕಡೆ ಮಳೆ ಮತ್ತೊಂದು ಕಡೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದಾಗಿ ಬೆಲೆಗಳು ನಿರಂತರವಾಗಿ ಏರಿಕೆಯಾಗುತ್ತಲೇ ಇದೆ.
ವಿವಿಧ ಜಿಲ್ಲೆಗಳಲ್ಲಿಯೂ ಬೆಲೆ ಏರಿಕೆ; ಬೆಂಗಳೂರು ಮಾತ್ರವಲ್ಲ ಶಿವಮೊಗ್ಗ, ಕಲಬುರಗಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ದಸರಾ ಸಂದರ್ಭದಿಂದಲೇ ತರಕಾರಿಗಳ ಬೆಲೆಗಳು ಏರಿಕೆಯಾಗಿವೆ. ಅಕ್ಟೋಬರ್ ಮೊದಲ ವಾರ ಆರಂಭವಾದ ಮಳೆ ಇನ್ನೂ ನಿಂತಿಲ್ಲ ಹಲವು ಜಿಲ್ಲೆಗಳಲ್ಲಿ ಮಳೆಯ ಅಬ್ಬರಕ್ಕೆ ಬೆಳೆಗಳಿಗೆ ಹಾನಿಯಾಗಿದೆ.
ಈರುಳ್ಳಿ, ಕ್ಯಾರೆಟ್, ಟೊಮೆಟೋ, ಆಲೂಗೆಡ್ಡಿ, ಬೀನ್ಸ್ ಮುಂತಾದ ತರಕಾರಿಗಳ ಬೆಲೆ ಏರುತ್ತಲೇ ಇದೆ. ಕಳೆದ ವಾರ ಬೆಂಗಳೂರಿನಲ್ಲಿ ಕೆಜಿ ಟೊಮೆಟೋ ಬೆಲೆ 60 ರೂ. ಗಡಿ ದಾಟಿತ್ತು. ಈ ವಾರ ಬೆಲೆ ಸ್ವಲ್ಪ ಇಳಿಕೆ ಕಂಡರೂ ಉತ್ತಮ ಗುಣಮಟ್ಟದ ಟೊಮೆಟೋ ಮಾರುಕಟ್ಟೆಗೆ ಆಗಮಿಸುತ್ತಿಲ್ಲ.
ಕೊಪ್ಪಳ ಜಿಲ್ಲೆಗಳಲ್ಲಿ ಸುರಿದ ಮಳೆಯಿಂದಾಗಿ ಈರುಳ್ಳಿ, ಮೆಣಸಿನಕಾಯಿ ಕಟಾವು ಮಾಡಲಾಗದೇ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಜಿಲ್ಲೆಯಲ್ಲಿ ಸುಮಾರು 100 ಹೆಕ್ಟೇರ್ನಷ್ಟು ಬೆಳೆ ಹಾನಿಯಾಗಿದೆ ಎಂದು ಕೃಷಿ ಇಲಾಖೆ ಅಂದಾಜಿಸಿದೆ.
ಚಿತ್ರದುರ್ಗದ ವಿವಿಧ ಭಾಗಗಳಲ್ಲಿ ಕಳೆದ ತಿಂಗಳು ತರಕಾರಿ ಬೆಳೆಗಳು ನೀರಿಲ್ಲದೇ ಒಣಗುತ್ತಿದ್ದವು. ಈ ತಿಂಗಳು ಮಳೆಯಿಂದಾಗಿ ಹೊಲದಲ್ಲಿಯೇ ತರಕಾರಿಗಳು ಕೊಳೆಯುವ ಆತಂಕ ಎದುರಾಗಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆ ರೈತರಿಗೆ ಸಂಕಷ್ಟ ತಂದಿದೆ.
ಯೆಲ್ಲೊ ಅಲರ್ಟ್; ಕರ್ನಾಟಕದ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮಳೆ ಕಡಿಮೆಯಾಗುವ ಸೂಚನೆ ಇಲ್ಲ. ಅಕ್ಟೋಬರ್ 25 ಮತ್ತು 26ರಂದು ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ಇದ್ದು 8 ಜಿಲ್ಲೆಗಳಲ್ಲಿ ಯೆಲ್ಲೊ ಅಲರ್ಟ್ ಘೋಷಣೆ ಮಾಡಲಾಗಿದೆ.
ಮುಂದಿನ 48 ಗಂಟೆಗಳಲ್ಲಿ ಕರ್ನಾಟಕಕ್ಕೆ ಹಿಂಗಾರು ಪ್ರವೇಶವಾಗಲಿದೆ. ತಮಿಳುನಾಡಿನ ಕರಾವಳಿ ಭಾಗದಲ್ಲಿ ಮೇಲ್ಮೈ ಸುಳಿಗಾಳಿ ಇರುವುದರಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಲಾಗಿದೆ.
Recommended Video
ತುಮಕೂರು, ಶಿವಮೊಗ್ಗ, ಮೈಸೂರು, ಮಂಡ್ಯ, ಕೊಡಗು, ಹಾಸನ, ಚಿಕ್ಕಮಗಳೂರು, ಚಾಮರಾಜನಗರ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎರಡು ದಿನ ಮುಂದುವರೆಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.