ಉಪನಗರ ರೈಲು ಯೋಜನೆ: ಸರ್ಕಾರದ ಷರತ್ತು ತಿರಸ್ಕರಿಸಿದ ರೈಲ್ವೆ ಮಂಡಳಿ
ಬೆಂಗಳೂರು, ಫೆಬ್ರವರಿ 16: ಉಪನಗರ ರೈಲು ಯೋಜನೆಗೆ ಸಂಬಂಧಿಸಿದಂತೆ ಸರ್ಕಾರ ವಿಧಿಸಿದ್ದ ಷರತ್ತುಗಳನ್ನು ರೈಲ್ವ ಮಂಡಳಿ ತಿರಸ್ಕರಿಸಿದೆ.
ಷರತ್ತು ವಿಧಿಸಿರುವುದನ್ನು ಗಮನಿಸಿದರೆ ರಾಜ್ಯ ಸರ್ಕಾರಕ್ಕೆ ಯೋಜನೆ ಅನುಷ್ಠಾನಕ್ಕೆ ಆಸಕ್ತಿ ಇಲ್ಲದಂತೆ ಕಾಣುತ್ತಿದೆ ಎಂದು ಟೀಕಿಸಿದೆ. ರೈಲ್ವೆ ಮಂಡಳಿ ಅಧ್ಯಕ್ಷ ವಿನೋದ್ ಕುಮಾರ್ ಯಾದವ್ ಫೆ. 8ರಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿಎಂ ವಿಜಯಭಾಸ್ಕರ್ 8 ಪುಟಗಳ ಪತ್ರ ರವಾನಿಸಿದ್ದಾರೆ.
ರೇಲ್ ಇಂಡಿಯಾ ಟೆಕ್ನಿಕಲ್ ಅಂಡ್ ಎಕಾನಮಿಕ್ ಸರ್ವೀಸ್ ಸಂಸ್ಥೆ ಸಿದ್ಧಪಡಿಸಿರುವ ಕಾರ್ಯಸಾಧ್ಯತಾ ವರದಿಯಲ್ಲಿನ 161 ಕಿ.ಮೀ ಕಾರಿಡಾರ್ಗೆ ಆದ್ಯತೆ ನೀಡಲಾಗುವುದು.
ಎಲ್ಲೆಲ್ಲಿಗೆ ಉಪನಗರ ರೈಲು ವಿಸ್ತರಣೆ
ರೈಟ್ಸ್ ಸೂಚಿಸಿದ ಕಾರಿಡಾರ್ ಜೊತೆಗೆ ಸ್ಯಾಟಲೈಟ್ ನಗರಗಳಾದ ತುಮಕೂರು, ದೊಡ್ಡಬಳ್ಳಾಪುರ, ಹೊಸೂರು, ಮಾಲೂರು, ಬಂಗಾರಪೇಟೆ, ಬಿಡದಿ, ರಾಮನಗರಕ್ಕೂ ಉಪನಗರ ರೈಲು ಸಂರ್ಕಕ್ಕೆ ರಾಜ್ಯ ಸರ್ಕಾರ ಆಸಕ್ತಿ ವಹಿಸಿರುವುದು ಸ್ವಾಗತಾರ್ಹ, ಆದರೆ 161 ಕಿ.ಮೀ ಮಾರ್ಗ ಪೂರ್ಣವಾಗಿ ರೈಲು ಕಾರ್ಯಚರಣೆ ಆರಮಭವಾದ ಬಳಿಕ ವಿಸ್ತರಣೆ ಕುರಿತು ನಿರ್ಧಾರ ಕೈಗೊಳ್ಳುವುದು ಒಳ್ಳೆಯದು ಎಂದು ತಿಳಿಸಿದ್ದಾರೆ.
ರಾಜ್ಯ ಸರ್ಕಾರವೇ ಜವಾಬ್ದಾರಿ
ಯೋಜನೆಗೆ ಅಗತ್ಯವಾಗಿರುವ ಖಾಸಗಿ ಭೂಸ್ವಾಧೀನಕ್ಕೆ 2,180 ಕೋಟಿ ರೂಗಿಂತ ಹೆಚ್ಚಿನ ಮೊತ್ತ ನೀಡಲು ಸಾಧ್ಯವಿಲ್ಲ ಎಂದು ರಾಜ್ಯ ಸರ್ಕಾರ ಷರತ್ತು ವಿಧಿಸಿತ್ತು. ಈ ಕುರಿತು ಪ್ರತಿಕ್ರಿಯೆ ನೀಡಿರುವ ರೈಲ್ವೆ ಮಂಡಳಿ ಉಪನಗರ ರೈಲು ನೀತಿ ಅನ್ವಯ ಭೂಸ್ವಾಧೀನ ವೆಚ್ಚ ಹಾಗೂ ವೆಚ್ಚದ ವ್ಯಾತ್ಯಾಸವನ್ನೂ ರಾಜ್ಯ ಸರ್ಕಾರವೇ ಭರಿಸಬೇಕು ಎಂದು ಸೂಚಿಸಿದೆ.
ಮೋನೋ ರೈಲು ನಮ್ಮ ವ್ಯಾಪ್ತಿಗೆ ಬರುವುದಿಲ್ಲ
ಹೋಳಲಿಗೆ-ದೇವನಹಳ್ಳಿ ಕಾರಿಡಾರ್ ಬದಲು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ-ದೇವನಹಳ್ಳಿ ಕಾರಿಡಾರ್ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಸಲಹೆ ನೀಡಿದೆ. ಈ ಸಲಹೆಯನ್ನು ರೈಲ್ವೆ ಇಲಾಖೆ ಒಪ್ಪಿದೆ. ವಿಮಾನ ನಿಲ್ದಾಣಕ್ಕೆ ಮೋನೋ ರೈಲು ಸಂಪರ್ಕದ ಕುರಿತು ರಾಜ್ಯ ಸರ್ಕಾರ ಆಸಕ್ತಿ ವಹಿಸಿದೆ. ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಮಂಡಳಿ ತಿಳಿಸಿದೆ.
ಭೂಸ್ವಾಧೀನವೇ ಯೋಜನೆಗೆ ಅಡ್ಡಿ
ಯೋಜನೆಗೆ ಬಳಸಿಕೊಳ್ಳುವ ಭೂಮಿಯನ್ನು ಎಕೆರೆಗೆ 1 ರೂನಂತೆ ಭೋಗ್ಯಕ್ಕೆ ನೀಡಬೇಕು ಎನ್ನುವ ಷರತ್ತನ್ನೂ ರೈಲ್ವೆ ಮಂಡಳಿ ತಿರಸ್ಕರಿಸಿದೆ. ಯೋಜನೆಗೆ ಅಂದಾಜು 650 ಎಕರೆ ರೈಲ್ವೆ ಭೂಮಿ ಬಳಕೆಯಾಗಲಿದೆ.