ಆಟೋಗಳು ಗುಜರಿಗೆ: ಚಾಲಕರಿಂದ ಒಂದು ಅರ್ಜಿಯೂ ಸಲ್ಲಿಕೆಯಾಗಿಲ್ಲ
ಬೆಂಗಳೂರು, ಜನವರಿ 25 : ಕಳೆದ ವರ್ಷ ಬಜೆಟ್ ನಲ್ಲಿ ಘೋಷಿಸಿದಂತೆ 2018 ರ ಏಪ್ರಿಲ್ 1 ರಿಂದ ನಗರದಲ್ಲಿ2 ಸ್ಟ್ರೋಕ್ ಆಟೋಗಳನ್ನು ನಿಷೇಧಿಸಲು ಸಾರಿಗೆ ಇಲಾಖೆ ತಯಾರಿಯೇನೋ ನಡಿಸಿದೆ ಆದರೆ ಇದುವರೆಗೂ ಆಟೋ ಚಾಲಕರಿಂದ ಒಂದು ಅರ್ಜಿಯೂ ಸಲ್ಲಿಕೆಯಾಗಿಲ್ಲ.
ಆಟೋ ಚಾಲಕರು 2 ಸ್ಟ್ರೋಕ್ ಆಟೋಗಳನ್ನು ಗುಜರಿಗೆ ಹಾಕುವ ವಿಚಾರದಲ್ಲಿ ನಿರಾಸಕ್ತಿ ತೋರಿದ್ದಾರೆ. ಆಟೋಗಳನ್ನು ಗುಜರಿಗೆ ಹಾಕುವ ಚಾಲಕರಿಗೆ ಹೊಸ ಆಟೋ ಖರೀದಿಸಲು 30 ಸಾವಿರ ಸಹಾಯಧನ ನೀಡಲು ಸಾರಿಗೆ ಇಲಾಖೆ ತೀರ್ಮಾನಿಸಿದೆ. ಹಣ ಮಂಜೂರು ಮಾಡಲು ಇಲಾಖೆಯ ಕೆಲ ನಿಯಮಗಳನ್ನು ರೂಪಿಸಿದೆ. ಅವುಗಳಿಗೆ ಆಟೋ ಚಾಲಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಏಪ್ರಿಲ್ ನಿಂದ 2 ಸ್ಟ್ರೋಕ್ ಆಟೋಗಳು ರಸ್ತೆಗಿಳಿಯುವಂತಿಲ್ಲ
ನೆಲಮಂಗಲ, ರಾಜಾಜಿನಗರ, ಪೀಣ್ಯದಲ್ಲಿ ಗುಜರಿ ಕೇಂದ್ರಗಳ ಸ್ಥಾಪನೆಗಾಗಿ ಖಾಸಿ ಕಂಪನಿಗಳಿಗೆ ಅನುಮತಿ ನೀಡಿದ್ದೇವೆ. ಚಾಲಕರು ಮೊದಲು ಆಟೋ ನೋಂದಣಿ ರದ್ದುಪಡಿಸಬೇಕು. ಅದಕ್ಕೆ ಪ್ರತಿಯಾಗಿ ಆರ್ ಡಿ ಓ ನೀಡುವ ಪ್ರಮಾಣ ಪತ್ರವನ್ನು ಕೇಂದ್ರಕ್ಕೆ ಕೊಟ್ಟು ಆಟೋವನ್ನು ಗುಜರಿಗೆ ಹಾಕಬೇಕು.
ಬಳಿಕ ಕೇಂದ್ರ ನೀಡುವ ಪ್ರಮಾಣಪತ್ರದ ಸಮೇತ ಸಹಾಯಧನಕ್ಕೆ ಅರ್ಜಿ ಸಲ್ಲಿಸಬೇಕು. ಆದರೆ, ನೋಂದಣಿ ರದ್ದತಿಗಾಗಿ ಇದುವರೆಗೂ ಒಂದು ಅರ್ಜಿಯೂ ಸಲ್ಲಿಕೆಯಾಗಿಲ್ಲ ಎಂದು ಸಾರಿಗೆ ಇಲಾಖೆ ಸಿಬ್ಬಂದಿಗಳು ತಿಳಿಸಿದ್ದಾರೆ.