ಹೊಸಕೋಟೆ: ವಿದ್ಯಾರ್ಥಿಗಳನ್ನು ವಿವಸ್ತ್ರಗೊಳಿಸಿ ಥಳಿತ
ಬೆಂಗಳೂರು, ಜುಲೈ, 02: ಕಪಟ ಜ್ಯೋತಿಷಿ, ಹಣ ಲಪಟಾಯಿಸಿದ ಧಗಾಕೋರ, ಹೆಣ್ಣು ಮಕ್ಕಳ ಮೇಲೆ ಕಣ್ಣು ಹಾಕಿದವರಿಗೆ ಧರ್ಮದೇಟು ಸಿಗುವುದು ಪ್ರತಿದಿನದ ಸುದ್ದಿಯಾಗಿದೆ. ಆದರೆ ಚಿಲ್ಲರೆ ಅಂಗಡಿಯಲ್ಲಿ ಕಳ್ಳತನ ಮಾಡಿದ್ದಾರೆಂಬ ಆರೋಪಕ್ಕೆ ಮೂವರು ವಿದ್ಯಾರ್ಥಿಗಳು ಅಮಾನುಷ ರೀತಿಯಲ್ಲಿ ಥಳಿತಕ್ಕೆ ಒಳಗಾಗಿದ್ದಾರೆ.
ವಿದ್ಯಾರ್ಥಿಗಳನ್ನು ವಿವಸ್ತ್ರಗೊಳಿಸಿ ಮನಬಂದಂತೆ ಥಳಿಸಿರುವ ಘಟನೆ ಹೊಸಕೋಟೆಯಲ್ಲಿ ಜೂನ್ 30ರಂದು ನಡೆದಿದ್ದು ಇದೀಗ ಬೆಳಕಿಗೆ ಬಂದಿದೆ. ಮೂವರು ವಿದ್ಯಾರ್ಥಿಗಳ ಮೇಲೆ ಎರಗಿದ 7 ಮಂದಿ ಯುವಕರು ನಡೆದುಕೊಂಡ ರೀತಿ ಮಾನವ ಕುಲವನ್ನೇ ತಲೆ ತಗ್ಗಿಸುವಂತೆ ಮಾಡಿದೆ.[ಆಂಬುಲೆನ್ಸ್ ತಡೆದ ಪೊಲೀಸರು, ನಿಜಕ್ಕೂ ಆಗಿದ್ದೇನು?]
ಜೂನ್ 27ರಂದು ಹೊಸಕೋಟೆಯ ಮಸ್ತಾಕ್ ಎಂಬುವರ ಚಿಲ್ಲರೆ ಅಂಗಡಿಯಲ್ಲಿ ಕಳ್ಳತನವಾಗಿತ್ತು. ಪಟ್ಟಣದ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಮೂವರು ಬಾಲಕರು ಕಳ್ಳತನ ಮಾಡಿದ್ದಾರೆ ಎಂದು ಆರೋಪಿಸಿ ಮಸ್ತಾಕ್ ಅವರ ಪುತ್ರ ನೂರುದ್ದೀನ್ ಹಾಗೂ ಆತನ ಸ್ನೇಹಿತರು ಅಮಾನವೀಯ ಹಲ್ಲೆ ಮಾಡಿದ್ದಾರೆ.[ಹೊಸಕೋಟೆ ವೊಲ್ವೋ ಘಟಕ ವಿಸ್ತರಣೆ, 2 ಸಾವಿರ ಉದ್ಯೋಗ ಸೃಷ್ಟಿ]
ಮಧ್ಯಾಹ್ನದ ಬಿಡುವಿನ ವೇಳೆ ಶಾಲೆಯಿಂದ ಬಾಲಕರನ್ನು ಕರೆದುಕೊಂಡು ಬಂದ ನೂರುದ್ದೀನ್ ಹಾಗೂ ಆತನ ಸ್ನೇಹಿತರು ಪಟ್ಟಣದ ಹೊರವಲಯದ ತೋಪಿನಲ್ಲಿ ಮನಬಂದಂತೆ ಹಲ್ಲೆ ಮಾಡಿದ್ದಾರೆ. ಅಲ್ಲದೇ ಈ ದೃಶ್ಯಗಳನ್ನು ಮೊಬೈಲ್ ಚಿತ್ರೀಕರಣ ಮಾಡಿಕೊಳ್ಳಲಾಗಿದೆ. ಆರೋಪಿಗಳ ವಿರುದ್ಧ ಹೊಸಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದರೂ ಪೊಲೀಸರು ಇಲ್ಲಿಯವರೆಗೆ ಯಾವ ಕ್ರಮ ತೆಗೆದುಕೊಂಡಿಲ್ಲ ಎಂದು ಆರೋಪಿಸಲಾಗಿದೆ.