ಬೆಂಗಳೂರು ಟ್ರಾಫಿಕ್ ಜಾಮ್; ರಸ್ತೆಯಲ್ಲೇ ಕಾರ್ ಇಳಿದು ಆಸ್ಪತ್ರೆಗೆ ಓಡಿದ ವೈದ್ಯ!
ಬೆಂಗಳೂರು, ಸೆಪ್ಟೆಂಬರ್ 12: ಅದು ಸಾವು ಬದುಕಿನ ಹೋರಾಟ. ಆಸ್ಪತ್ರೆಯ ಬೆಡ್ ಮೇಲೆ ಆ ರೋಗಿ ನರಳುತ್ತಿದ್ದ. ಅದೇ ರೋಗಿಗೆ ಶಸ್ತ್ರಚಿಕಿತ್ಸೆ ನೀಡಬೇಕಿದ್ದ ವೈದ್ಯ ಬೆಂಗಳೂರಿನ ಟ್ರಾಫಿಕ್ ಜಾಮ್ನಲ್ಲಿ ಸಿಲುಕಿಕೊಂಡಿದ್ದ. ಅಲ್ಲಿಂದ ಮುಂದೆ ನಡೆದಿದ್ದೇ ರೋಚಕ ಕಥೆ.
ವೈದ್ಯೋ ನಾರಾಯಣ ಹರಿಃ ಎನ್ನುವ ಮಾತನ್ನು ಕೇಳಿದ್ದೀರಿ ಅಲ್ಲವೇ. ನಮ್ಮಲ್ಲಿ ಜೀವ ಉಳಿಸುವ ವೈದ್ಯರನ್ನು ಆ ದೇವರಿಗೆ ಹೋಲಿಕೆ ಮಾಡಿ ನೋಡಲಾಗುತ್ತದೆ. ಈಗ ಬೆಂಗಳೂರಿನ ಈ ವೈದ್ಯರೂ ಸಹ ಅದೇ ರೀತಿಯಲ್ಲಿ ಸುದ್ದಿ ಆಗಿದ್ದಾರೆ.
ಬೆಂಗಳೂರಿಗರ ಪ್ರಯಾಣದ ಸಮಯ 62% ಹೆಚ್ಚಳವಾಯ್ತು! ಯಾಕೆ?
ಬೆಂಗಳೂರಿನ ಟ್ರಾಫಿಕ್ ದಾಟಿಕೊಂಡು ಹೋದ ಮಣಿಪಾಲ್ ಆಸ್ಪತ್ರೆಯ ಗ್ಯಾಸ್ಟ್ರೋಎಂಟರಾಲಜಿ ತಜ್ಞ ಡಾ. ಗೋವಿಂದ ನಂದಕುಮಾರ್ ರೋಗಿಯ ಜೀವ ಕಾಪಾಡುವಲ್ಲಿ ಯಶಸ್ವಿಯಾಗಿದ್ದಾರೆ. ಅದಕ್ಕಾಗಿ ನಡುರಸ್ತೆಯಲ್ಲೇ ಕಾರು ಇಳಿದ ವೈದ್ಯ 3 ಕಿಲೋ ಮೀಟರ್ ವರೆಗೂ ಓಡಿಕೊಂಡೇ ಹೋಗಿರುವ ಘಟನೆ ಇದೀಗ ಸಖತ್ ಟ್ರೆಂಡ್ ಕ್ರಿಯೇಟ್ ಮಾಡಿದೆ.
ಬೆಂಗಳೂರು ವಾಹನ ದಟ್ಟಣೆ ಮಧ್ಯೆ ಸಿಲುಕಿದ್ದ ವೈದ್ಯ
ಕಳೆದೊಂದು ವಾರದಿಂದಲೂ ಸಿಲಿಕಾನ್ ಸಿಟಿಯಲ್ಲಿ ಮಳೆ ಅಬ್ಬರ ಜೋರಾಗಿದೆ. ಮಳೆಗೆ ಜನರು ಹೈರಾಣಾಗಿದ್ದಾರೆ. ರಸ್ತೆಗಳು ಜಲಾವೃತಗೊಂಡಿವೆ. ಅದೇ ರಸ್ತೆಗಳಲ್ಲಿ ಸಂಚರಿಸುವುದಕ್ಕೆ ಜನರು ಪರಿತಪಿಸುವಂತಾ ಪರಿಸ್ಥಿತಿ ನಿರ್ಮಾಣವಾಗಿದೆ. ಇಂಥ ಸಂದರ್ಭದಲ್ಲಿ ಸಿಲುಕಿನ ಸಾರ್ವಜನಿಕರಿಂದ ಮಣಿಪಾಲ್ ಆಸ್ಪತ್ರೆಯ ಗ್ಯಾಸ್ಟ್ರೋಎಂಟರಾಲಜಿ ತಜ್ಞ ಡಾ. ಗೋವಿಂದ ನಂದಕುಮಾರ್ ಕೂಡ ಹೊರತಾಗಿರಲಿಲ್ಲ. ಒಂದು ಕಡೆ ಬೆಂಗಳೂರಿನ ಟ್ರಾಫಿಕ್ ಜಾಮ್ ಕಾಡುತ್ತಿದ್ದರೆ, ಇನ್ನೊಂದು ಕಡೆ ಕರ್ತವ್ಯದ ಬದ್ಧತೆಯು ವೈದ್ಯನನ್ನು ಕೈ ಬೀಸಿ ಕರೆಯುತ್ತಿತ್ತು.
ಸರ್ಜಾಪುರ್ ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿದ ಡಾ.ಗೋವಿಂದ್ ನಂದಕುಮಾರ್
ಬೆಂಗಳೂರಿನ ಸರ್ಜಾಪುರ್ ಮಾರ್ಗವಾಗಿ ಮಾರತಹಳ್ಳಿ ಕಡೆಗೆ ಹೊರಟಿದ್ದ ಗ್ಯಾಸ್ಟ್ರೋಎಂಟರಾಲಜಿ ತಜ್ಞ ಡಾ. ಗೋವಿಂದ ನಂದಕುಮಾರ್ ಟ್ರಾಫಿಕ್ ಜಾಮ್ನಲ್ಲಿ ಸಿಲುಕಿಕೊಂಡರು. ಪಿತ್ತಕೋಶದ ಶಸ್ತ್ರಚಿಕಿತ್ಸೆ ಮಾಡುವುದಕ್ಕಾಗಿ ಹೊರಟಿದ್ದ ವೈದ್ಯನಿಗೆ ಟ್ರಾಫಿಕ್ ಜಾಮ್ ತಲೆನೋವು ತಂದಿಟ್ಟಿತು. ಆ ರಸ್ತೆಯಲ್ಲಿನ ವಾಹನ ದಟ್ಟಣೆಯನ್ನು ದಾಟಿಕೊಂಡು ಹೋಗುವುದು ಅಷ್ಟು ಸುಲಭದ ಕೆಲವಾಗಿರಲಿಲ್ಲ. 10 ನಿಮಿಷದಲ್ಲಿ ಆಸ್ಪತ್ರೆಗೆ ಸೇರಬೇಕಿದ್ದ ವೈದ್ಯರು, ಕಾರಿನಲ್ಲೇ ಹೋದರೂ 45 ನಿಮಿಷ ಬೇಕಾಗುತ್ತದೆ ಎಂಬುದು ಅರಿವಿಗೆ ಬಂದಿತು. ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ದಿಟ್ಟತನ ಪ್ರದರ್ಶಿಸಿದ ಗ್ಯಾಸ್ಟ್ರೋಎಂಟರಾಲಜಿ ತಜ್ಞ ಡಾ. ಗೋವಿಂದ ನಂದಕುಮಾರ್, ನಡುರಸ್ತೆಯಲ್ಲೇ ಇಳಿದು ಓಡುವುದಕ್ಕೆ ಶುರು ಮಾಡಿದರು.
|
ಪಿತ್ತಕೋಶ ಶಸ್ತ್ರಚಿಕಿತ್ಸೆಗೆ ಮಣಿಪಾಲ್ ಆಸ್ಪತ್ರೆಯಲ್ಲಿ ಸಿದ್ಧತೆ
ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಪಿತ್ತಕೋಶದ ಶಸ್ತ್ರಚಿಕಿತ್ಸೆಗೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿತ್ತು. ಗ್ಯಾಸ್ಟ್ರೋಎಂಟರಾಲಜಿ ತಜ್ಞ ಡಾ. ಗೋವಿಂದ ನಂದಕುಮಾರ್ ಈ ಶಸ್ತ್ರಚಿಕಿತ್ಸೆಯನ್ನು ಮಾಡಬೇಕಿತ್ತು. ಅದಕ್ಕಾಗಿಯೇ ಹೊರಟಿದ್ದ ವೈದ್ಯ ಡಾ. ಗೋವಿಂದ ನಂದಕುಮಾರ್, ಟ್ರಾಫಿಕ್ ಜಾಮ್ ನಡುವೆ 3 ಕಿಲೋ ಮೀಟರ್ ದೂರದಲ್ಲಿದ್ದ ಆಸ್ಪತ್ರೆಗೆ ಓಡಿಕೊಂಡು ಹೋದರು. 45 ನಿಮಿಷಗಳ ದೂರವನ್ನು ಓಡಿಕೊಂಡೇ ಕೇವಲ 10 ನಿಮಿಷದಲ್ಲಿ ತಲುಪಿದರು. ಅಂದುಕೊಂಡಂತೆ ರೋಗಿಯ ಶಸ್ತ್ರಚಿಕಿತ್ಸೆಯನ್ನು ನಡೆಸಿದರು.
ವೈದ್ಯ ಡಾ. ಗೋವಿಂದ ನಂದಕುಮಾರ್ ಹೇಳಿದ್ದೇನು?
"ಅಂದು 10 ನಿಮಿಷದಲ್ಲೇ ನಾನು ಆಸ್ಪತ್ರೆಗೆ ತಲುಪಬೇಕಿತ್ತು. ನಾನು ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿಕೊಂಡಿದ್ದು, ನನ್ನಲ್ಲಿ ಮಾನಸಿಕ ಒತ್ತಡವನ್ನು ಹೆಚ್ಚಿಸಿತ್ತು. ಗೂಗಲ್ ಮ್ಯಾಪ್ ಅನ್ನು ನೋಡಿದಾಗ ಆಗಿನ ವಾಹನ ದಟ್ಟಣೆ ಮಧ್ಯೆ ನಾನು ಆಸ್ಪತ್ರೆ ಸೇರುವುದಕ್ಕೆ ಇನ್ನೂ 45 ನಿಮಿಷಗಳು ಬೇಕಾಗುತ್ತದೆ ಎಂಬುದು ಗಮನಕ್ಕೆ ಬಂತು. ತಕ್ಷಣ ಕಾರನ್ನು ಅಲ್ಲಿಯೇ ಬಿಟ್ಟು ಹೊರಡುವುದಕ್ಕೆ ನಿರ್ಧರಿಸಿದೆನು. ನಾನು ಪ್ರತಿನಿತ್ಯ ಜಿಮ್ ಮಾಡುವುದರಿಂದ ಓಡಿಕೊಂಡು ಹೋಗುವುದು ನನಗೆ ಅಸಾಧ್ಯ ಎಂದು ಅನ್ನಿಸಿರಲಿಲ್ಲ. ಹೀಗಾಗಿ 3 ಕಿಲೋ ಮೀಟರ್ ದೂರದಲ್ಲಿದ್ದ ಆಸ್ಪತ್ರೆಗೆ ಓಡಿಕೊಂಡೇ ಹೋದೆನು. ಇದರಿಂದ ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ತಲುಪಿ ಶಸ್ತ್ರಚಿಕಿತ್ಸೆಯನ್ನು ನೀಡುವುದಕ್ಕೆ ಸಾಧ್ಯವಾಯಿತು," ಎಂದು ಹೇಳಿದರು.