ಬೆಂಗಳೂರಿಗರಿಗೆ ಭಾರಿ ಶಾಕ್ ನೀಡಲು ಬಿಬಿಎಂಪಿ ಸಿದ್ದತೆ
ಬೆಂಗಳೂರು, ಸೆ 24: ಜೋರು ಮಳೆ ಬಿದ್ದರೆ ಕೆರೆಯಂತಾಗುವ ಮಹಾನಗರ, ಗುಂಡಿಯೊಳಗೆ ರಸ್ತೆಯಿದೆಯೋ ರಸ್ತೆಯೊಳಗೆ ಗುಂಡಿಯಿದೆಯೇ ಎನ್ನುವಂತಿರುವ ರಸ್ತೆ ವ್ಯವಸ್ಥೆ, ಇದನ್ನೆಲ್ಲಾ ಮೊದಲು ಸರಿ ಪಡಿಸುವ ಬದಲು ಬೃಹತ್ ಬೆಂಗಳೂರು ಮಹಾನಗರಪಾಲಿಕೆ (ಬಿಬಿಎಂಪಿ) ಬೆಂಗಳೂರಿಗರಿಗೆ ಶಾಕ್ ನೀಡಲು ಮುಂದಾಗಿದೆ.
ರಾಜಾಕಾಲವೆ ಒತ್ತುವರಿ ವಿಚಾರದಲ್ಲಿ ಬಿಬಿಎಂಪಿ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿದ್ದರು ಎನ್ನುವ ಆರೋಪ ಕೇಳಿ ಬರುತ್ತಿದೆ. ಇದರ ಜೊತೆಗೆ, ಇತ್ತೀಚೆಗೆ ಸಮೀಕ್ಷಾ ವರದಿಯೊಂದರ ಪ್ರಕಾರ ಶೇ. 57% ರಷ್ಟು ಜನರು ನಗರದ ಒಟ್ಟಾರೆ ಆಡಳಿತದ ಬಗ್ಗೆ ತೃಪ್ತರಾಗಿಲ್ಲ ಎನ್ನುವ ಅಂಶ ಹೊರಬಿದ್ದಿತ್ತು.
ಬೆಂಗಳೂರು: ರಸ್ತೆಯಲ್ಲಿ ಕಾರ್ ಪಾರ್ಕಿಂಗ್ ಶೀಘ್ರವೇ ಪರವಾನಗಿ ಶುಲ್ಕ?
ಎರಡು ದಿನಗಳ ಕೆಳಗೆ, ಬಿಬಿಎಂಪಿ ಏಕಾಏಕಿ ಹೊಸ ಪಾರ್ಕಿಂಗ್ ಟೆಂಡರ್ ಕಾಯಿದೆ ಜಾರಿಗೊಳಿಸಲು ಮುಂದಾಗಿದ್ದು ನಗರದ ಎಂಟು ವಲಯಗಳಿಲ್ಲಿ ಟೆಂಡರ್ ಕರೆದಿದೆ ಎಂದು ವರದಿಯಾಗಿತ್ತು.
ಈ ಹಿಂದೆಯೂ ಸರಕಾರ ಇಂತಹ ಕ್ರಮಕ್ಕೆ ಮುಂದಾಗಿತ್ತು, ಆದರೆ, ವಿರೋಧ ಪಕ್ಷಗಳಿಂದ ಮತ್ತು ಸಾರ್ವಜನಿಕರಿಂದ ತೀವ್ರ ಟೀಕೆ ವ್ಯಕ್ತವಾದ ಹಿನ್ನಲೆಯಲ್ಲಿ ಸದ್ಯದ ಮಟ್ಟಿಗೆ ಮುಂದೂಡಿತ್ತು. ಈಗ ಸದ್ದಿಲ್ಲದೇ ನಲವತ್ತು ದಿನಗಳ ಟೆಂಡರ್ ಕಾನೂನನ್ನು ಮುರಿದು ಹದಿನೈದು ದಿನದೊಳಗೆ ಬಿಡ್ ಸಲ್ಲಿಸುವಂತೆ ಸೂಚಿಸಿದೆ. ಈ ಬಗ್ಗೆ, ಟ್ರಾವೆಲ್ ಸಂಸ್ಥೆಗಳು ತೀವ್ರ ಆಕ್ರೋಶ ವ್ಯಕ್ತ ಪಡಿಸಿವೆ.
ಶೇ. 57 ಮಂದಿಗೆ ಬಿಬಿಎಂಪಿ ಕಾರ್ಯವೈಖರಿ ತೃಪ್ತಿಯಿಲ್ಲ: ವರದಿ
"ಭೂಮಿಯ ಮಾರುಕಟ್ಟೆ ಮೌಲ್ಯ ಮತ್ತು ಕ್ಯಾರೇಜ್ ವೇ ಅಗಲದ ಆಧಾರದ ಮೇಲೆ ರಸ್ತೆಗಳನ್ನು ಎ, ಬಿ ಮತ್ತು ಸಿ ಎಂದು ವರ್ಗೀಕರಿಸಲಾಗಿದೆ. ಸ್ಥಳದ ಲಭ್ಯತೆಯ ಆಧಾರದ ಮೇಲೆ ಪ್ರತಿಯೊಂದು ವಲಯಗಳಲ್ಲಿ ಪಾರ್ಕಿಂಗ್ ಸ್ಥಳವನ್ನು ಗುರುತಿಸಲಾಗಿದೆ" ಎಂದು ಬಿಬಿಎಂಪಿ ಕಾರ್ಯನಿರ್ವಾಹಕ ಎಂಜಿನಿಯರ್ ಹೆಚ್.ಎನ್. ಜಯಸಿಂಹ ಹೇಳಿದ್ದಾರೆ.
ಬೆಂಗಳೂರಿಗರಿಗೆ ಭಾರಿ ಶಾಕ್ ನೀಡಲು ಬಿಬಿಎಂಪಿ ಸಿದ್ದತೆ
ಬಿಬಿಎಂಪಿಯ ಕಾಯಿದೆ ಜಾರಿಗೆ ಬಂದರೆ, ಸಾರ್ವಜನಿಕರು ಬಾಡಿಗೆ ಮತ್ತು ಇತರ ಖರ್ಚುಗಳ ಜೊತೆಗೆ ಪಾರ್ಕಿಂಗ್ ದರವನ್ನೂ ತಿಂಗಳ ಖರ್ಚುಲೆಕ್ಕದ ಪಟ್ಟಿಗೆ ಸೇರಿಸಬೇಕಾಗುತ್ತದೆ. ರೋಡ್ ಟ್ಯಾಕ್ಸ್ ಪಾವತಿಸಿದ್ದರೂ, ಇದ್ಯಾವುದು ಹೊಸ ತೆರಿಗೆ ಎನ್ನುವ ವಿಚಾರ ಸಾರ್ವಜನಿಕ ವಲಯದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಲಾರಂಭಿಸಿದೆ. ಮೊದಲೇ ಪಾರ್ಕಿಂಗ್ ಸಮಸ್ಯೆ ಬೆಂಗಳೂರಿನಲ್ಲಿ ಕಾಡುತ್ತಿದೆ, ಈಗ ತೆರಿಗೆಯ ರೂಪದಲ್ಲಿ ಸಾರ್ವಜನಿಕ ರಸ್ತೆಗಳನ್ನು ಬಳಸಲೂ ಟ್ಯಾಕ್ಸ್ ಪಾವತಿಸುವ ಅನಿವಾರ್ಯತೆಗೆ ಸಾರ್ವಜನಿಕರು ಸಿಲುಕುವ ಸಾಧ್ಯತೆಯಿದೆ.
ಬನಶಂಕರಿ ನಿವಾಸಿಯೊಬ್ಬರ ಅಳಲು
ಪೇ ಎಂಡ್ ಪಾರ್ಕ್ ನಿಯಮದ ಪ್ರಕಾರ ವಾಹನ ಮಾಲೀಕರು ಮಾಸಿಕ 3-5ಸಾವಿರ ಹಣ ಕಟ್ಟಿ ಲೈಸೆನ್ಸ್ ಪಡೆದುಕೊಳ್ಳಬೇಕಾಗುತ್ತದೆ. ಎ,ಬಿ ಮತ್ತು ಸಿ ಎನ್ನುವ ಮೂರು ವರ್ಗವನ್ನಾಗಿ ಮಾಡಿ ವಾರ್ಷಿಕ 188ಕೋಟಿ ಆದಾಯದ ನಿರೀಕ್ಷೆಯಲ್ಲಿದೆ ಬಿಬಿಎಂಪಿ. "ವಾಹನ ತೆರಿಗೆಯನ್ನು ನಾವು ಪಾವತಿಸುತ್ತೇವೆ ಇದರ ಜೊತೆಗೆ ಇತರ ಟ್ಯಾಕ್ಸ್ ಗಳನ್ನೂ ಸಮಯಕ್ಕೆ ಸರಿಯಾಗಿ ಸಂದಾಯ ಮಾಡಲಾಗುತ್ತದೆ. ಈಗ ಪಾರ್ಕಿಂಗಿಗೂ ಹಣ ಪಾವತಿಸಬೇಕಾಗುತ್ತದೆ ಎಂದರೆ ಸರಕಾರಕ್ಕೆ ಯಾವ ರೀತಿಯ ದಾರಿದ್ರ್ಯ ಅಂಟಿದೆ"ಎಂದು ಬನಶಂಕರಿ ನಿವಾಸಿಯೊಬ್ಬರು ಅಳಲು ವ್ಯಕ್ತ ಪಡಿಸಿದ್ದಾರೆ.
ಕರ್ನಾಟಕ ರಾಜ್ಯ ಟ್ರಾವೆಲ್ಸ ಮಾಲಿಕರ ಸಂಘದ ಅಧ್ಯಕ್ಷ ರಾಧಾಕೃಷ್ಣ ಹೊಳ್ಳ
"ಸ್ಮಾರ್ಟ್ ಸಿಟಿ ಸೌಲಭ್ಯವನ್ನು ನೀಡಬೇಕಾಗಿತ್ತು, ಪೇ ಎಂಡ್ ಟ್ಯಾಕ್ಸ್ ಮೂಲಕ ಸರಕಾರ ದೊಡ್ಡ ತಪ್ಪನ್ನು ಮಾಡುತ್ತಿದೆ. ಮಹಾನಗರಪಾಲಿಕೆಯ ಬಿಲ್ಡಿಂಗ್ ಗಳಲ್ಲಿನ ಪಾರ್ಕಿಂಗ್ ವ್ಯವಸ್ಥೆಯನ್ನು ಬಳಸಿಕೊಳ್ಳದೇ ಇದ್ದ ಪಕ್ಷದಲ್ಲಿ ಮಾತ್ರ ಸರಕಾರ ಹಣ ಸಂಗ್ರಹಿಸಬಹುದು. ಬೇಕಾಗಿರುವ ಪಾರ್ಕಿಂಗ್ ವ್ಯವಸ್ಥೆ ಇಲ್ಲದೆಯೇ ಬಿಲ್ಡಿಂಗ್ ಕಟ್ಟಲು ಅನುಮತಿ ನೀಡಿ, ಈಗ ರಸ್ತೆ ಬದಿಯಲ್ಲಿ ನಿಲ್ಲಿಸುವ ವಾಹನಗಳಿಗೆ ಶುಲ್ಕ ವಿಧಿಸುವ ಮೂರ್ಖ ನಿರ್ಧಾರವನ್ನು ಸರಕಾರ ತೆಗೆದುಕೊಂಡಿದೆ. ಇದನ್ನು ನಾವು ವಿರೋಧಿಸುತ್ತೇವೆ"ಎಂದು ಕರ್ನಾಟಕ ರಾಜ್ಯ ಟ್ರಾವೆಲ್ಸ ಮಾಲೀಕರ ಸಂಘದ ಅಧ್ಯಕ್ಷ ಕೆ ರಾಧಾಕೃಷ್ಣ ಹೊಳ್ಳ ಆಕ್ರೋಶ ಹೊರ ಹಾಕಿದ್ದಾರೆ.
ಜನರ ರಕ್ತ ಹಿಂಡುವುದಕ್ಕೂ ಒಂದು ರೀತಿ ನೀತಿ ಬೇಡವೇ
"ಜನರ ರಕ್ತ ಹಿಂಡುವುದಕ್ಕೂ ಒಂದು ರೀತಿ ನೀತಿ ಬೇಡವೇ, ಮನೆ ಕಂಪೌಂಡ್ ಒಳಗೆ ಗಾಡಿ ನಿಲ್ಲಿಸುವ ಲೇಔಟ್ ಗಳು ಬೆಂಗಳೂರಿನಲ್ಲಿ ಬೆರಳಣಿಕೆಯಷ್ಟು ಮಾತ್ರ, ಮಿಕ್ಕೆಲ್ಲರೂ ಮನೆ ಬದಿಯ ರಸ್ತೆಯಲ್ಲೇ ಗಾಡಿಯನ್ನು ನಿಲ್ಲಿಸುವುದು ಸಾಮಾನ್ಯ. ಇದಕ್ಕೂ ಸರಕಾರದ ಕಣ್ಣು ಬಿದ್ದಿದೆ ಎಂದರೆ ಏನರ್ಥ, ಪ್ರತಿ ತಿಂಗಳೂ ವೆಹಿಕಲ್ ಬಜೆಟ್ ಎಂದು ಪ್ರತ್ಯೇಕವಾಗಿ ತೆಗೆದಿಡಬೇಕಾಗುತ್ತದೆ. ಇದಕ್ಕೆ ನಮ್ಮ ತೀವ್ರ ವಿರೋಧವಿದೆ"ಎಂದು ಬೆಂಗಳೂರು ಚಾಲಕರ ಸಂಘ ಬೇಸರವನ್ನು ವ್ಯಕ್ತ ಪಡಿಸಿವೆ.