ನಾಯಿ ಕಚ್ಚಿದ್ದಕ್ಕೆ ಪಶುವೈದ್ಯರ ಬಂಧನ, ಪೊಲೀಸರ ವಿರುದ್ಧ ಡಾಕ್ಟರ್ಸ್ ಗರಂ
ಬೆಂಗಳೂರು, ಸೆಪ್ಟಂಬರ್ 8, 2018: ಮಗುವಿಗೆ ನಾಯಿಗಳು ಕಚ್ಚಿದ ಕಾರಣಕ್ಕೆ ಪಶು ವೈದ್ಯರ ವಿರುದ್ಧ ಮೊಕದ್ದಮೆ ದಾಖಲಿಸಿ ಅವರನ್ನು ಬಂಧಿಸಿ ಬಿಡುಗಡೆ ಮಾಡಿರುವುದನ್ನು ಕರ್ನಾಟಕ ಪಶುವೈದ್ಯಕೀಯ ಸಂಘ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಬೆಂಗಳೂರಿನಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಪ್ರಧಾನ ಕಾರ್ಯದರ್ಶಿ ಡಾ. ಎ.ಡಿ. ಶಿವರಾಮು ಅವರು, ಮಕ್ಕಳಿಗೆ ಬೀದಿ ನಾಯಿ ಕಡಿದು ಗಾಯಗೊಳಿಸಿರುವುದಕ್ಕೆ ನಮಗೂ ನೋವುಂಟಾಗಿದೆ. ಇದೊಂದು ಅನಿರೀಕ್ಷಿತ ಮತ್ತು ಆಕಸ್ಮಿಕ ಸಂಗತಿಯಾಗಿದೆ. ಆದರೆ, ಈ ಅನಿರೀಕ್ಷಿತ ಘಟನೆಗೆ ಪಶುವೈದ್ಯರನ್ನು ಬಲಿಪಶು ಮಾಡುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಬೀದಿನಾಯಿಗಳೆಂದರೆ ಬಿಬಿಎಂಪಿಗೆ ಅಷ್ಟೇಕೆ ಅಚ್ಚುಮೆಚ್ಚು?
ನಾವು ಪಶುವೈದ್ಯರು. ಹಾಗೆಂದ ಮಾತ್ರಕ್ಕೆ ನಾವು ಪಶುಗಳಲ್ಲ. ನಾವುಗಳು ಉನ್ನತ ವ್ಯಾಸಂಗ ಮಾಡಿ, ಉತ್ತಮ ಅಂಕಗಳನ್ನು ಪಡೆದು 1 ನೇ ದರ್ಜೆಯ ಅಧಿಕಾರಿಗಳಾಗಿ ಸರ್ಕಾರದ ಸೇವೆಗೆ ಸೇರಿದ್ದೇವೆ. ಸರ್ಕಾರದ ಲಭ್ಯವಿರುವ ಕನಿಷ್ಠ ಸವಲತ್ತುಗಳೊಂದಿಗೆ ಹಗಲಿರುಳೂ ಜನರ ಸೇವೆ ಮಾಡುತ್ತಿದ್ದೇವೆ.
ನಮ್ಮ ಜೀವದ ಹಂಗನ್ನೂ ತೊರೆದು ಬೀದಿನಾಯಿಗಳಿಗೆ ಮತ್ತು ಇತರೆ ಪ್ರಾಣಿಗಳಿಗೆ ರೇಬೀಸ್, ಬ್ರುಸೆಲೊಸಿಸ್, ಲೆಪ್ಟೊಸ್ಪಿರೋಸಿಸ್ನಂತಹ ಚುಚ್ಚುಮದ್ದುಗಳನ್ನು ನೀಡುತ್ತಿದ್ದೇವೆ. ಈ ಮೂಲಕ ನಾವು ಪ್ರಾಣಿಜನ್ಯ ಆಹಾರ ಸೇವಿಸುವ ಸಾರ್ವಜನಿಕರಿಗೆ ಯಾವುದೇ ರೀತಿಯ ರೋಗಗಳು ಬಾರದಿರುವಂತೆ ಎಚ್ಚರ ವಹಿಸುತ್ತಿದ್ದೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಡಾ. ವಿ ರಮೇಶ್, ಡಾ. ಅಭಿಲಾಷ್, ಡಾ ಮಲ್ಲಪ್ಪ ಭಜಂತ್ರಿ, ಡಾ. ರವಿ, ಡಾ ಸಾಯಿರಾಮ್ ಮತ್ತು ಡಾ ಬಸವರಾಜ್ ಸೇರಿದಂತೆ ಹಲವರು ಭಾಗವಹಿಸಿದ್ದರು.
ವೈದ್ಯರನ್ನು ಹೊಣೆ ಮಾಡಬೇಡಿ
ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಬೀದಿ ನಾಯಿಗಳನ್ನು ನಿರ್ವಹಿಸುವ ರೀತಿಯ ಹಲವಾರು ಕ್ರಮಗಳನ್ನು ಚಾಚೂ ತಪ್ಪದೆ ಅನುಸರಿಸಬೇಕಾಗುತ್ತದೆ. ಬೀದಿ ನಾಯಿಗಳ ಸಂತಾನಹರಣ ಚಿಕಿತ್ಸೆಯ ನಂತರ ಆಯಾ ಪ್ರದೇಶದಲ್ಲೇ ಅವುಗಳನ್ನು ಬಿಡಬೇಕು.
ಸಂತಾನಹರಣ ಚಿಕಿತ್ಸೆ ಸೇರಿದಂತೆ ಈ ಎಲ್ಲಾ ಕಾರ್ಯಗಳನ್ನು ಸ್ವಯಂ ಸೇವಾ ಸಂಸ್ಥೆಗಳು ಮಾಡುತ್ತಿದ್ದು, ಪಶುವೈದ್ಯಕೀಯ ಅಧಿಕಾರಿಗಳು ಕೇವಲ ಮೇಲುಸ್ತುವಾರಿ ಮಾಡುವ ಜವಾಬ್ದಾರಿಯನ್ನೂ ಮಾತ್ರ ನೀಡಲಾಗಿದೆ. ಆಗಿರುವ ಆಕಸ್ಮಿಕ ಘಟನೆಗೆ ಸಂಬಂಧಿಸಿದಂತೆ ಪಶುವೈದ್ಯಕೀಯ ವೈದ್ಯರನ್ನು ಹೊಣೆ ಮಾಡಿ ಪೋಲೀಸ್ ದೂರು ದಾಖಲಿಸಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಇದು ಅಮಾನವೀಯ ಪ್ರಕರಣ ಕೃತ್ಯ
ಆದರೆ, ಬೆಂಗಳೂರಿನಲ್ಲಿ ಮಗುವಿಗೆ ನಾಯಿಗಳು ಕಚ್ಚಿದವು ಎಂಬ ಕಾರಣಕ್ಕೆ ಬಿಬಿಎಂಪಿ ಪಶುವೈದ್ಯ ವಿಭಾಗದ ಸಹಾಯಕ ನಿರ್ದೇಶಕರಾಗಿರುವ ಪಶುವೈದ್ಯ ಡಾ.ಶ್ರೀರಾಮ್ ಅವರು ಮತ್ತು ಅವರ ಸಿಬ್ಬಂದಿಯನ್ನು ಬಂಧಿಸಿ ಬಿಡುಗಡೆ ಮಾಡಲಾಗಿದೆ. ಇದು ಅಮಾನವೀಯ ಪ್ರಕರಣ. ನಾಯಿ ಕಚ್ಚಿದೆ ಎಂಬ ಕಾರಣಕ್ಕೆ ಪಶುವೈದ್ಯರಾಗಲಿ ಅಥವಾ ಅವರ ಇಲಾಖೆಯ ಸಿಬ್ಬಂದಿಯಾಗಲೀ ಹೇಗೆ ಕಾರಣರಾಗುತ್ತಾರೆ? ಎಂದು ಪೊಲೀಸರ ವಿರುದ್ಧ ಅವರು ಆಕ್ರೋಶ ವ್ಯಕ್ತಪಡಿಸಿದರು.
ಪೊಲೀಸರ ವಿರುದ್ಧ ಕೇಸ್ ದಾಖಲಿಸಿ ಬಂಧಿಸಬೇಕಲ್ಲವೇ
ಬೀದಿ ನಾಯಿ ಕಚ್ಚಿದ್ದಕ್ಕೆ ಪಶುವೈದ್ಯರನ್ನು ಹೊಣೆ ಮಾಡುವುದಾದರೆ, ಕುಡಿದು ಅಪರಾಧ ಮಾಡಿದರೆ ಅಬಕಾರಿ ಇಲಾಖೆ ಅಧಿಕಾರಿಗಳನ್ನು, ವಾಹನ ಸವಾರರು ಅಪಘಾತ ಮಾಡಿದರೆ ಸಾರಿಗೆ ಇಲಾಖೆ ಅಧಿಕಾರಿಗಳ ವಿರುದ್ಧ, ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಕೊಲೆ, ಸುಲಿಗೆಯಂತಹ ಅಪರಾಧ ಕೃತ್ಯಗಳು ನಡೆದರೆ ಅದಕ್ಕೆ ಆಯಾ ಪೊಲೀಸ್ ಠಾಣೆಗಳ ಪೊಲೀಸರ ವಿರುದ್ಧ ಕೇಸ್ ದಾಖಲಿಸಿ ಬಂಧಿಸಬೇಕಲ್ಲವೇ? ಹಾಗಾದರೆ, ಇದುವರೆಗೆ ಎಷ್ಟು ಜನರನ್ನು ಬಂಧಿಸಲಾಗಿದೆ? ಅಥವಾ ಹೀಗೆ ಬಂಧಿಸಿರುವ ಉದಾಹರಣೆಗಳಿವೆಯೇ? ಎಂದು ವಾಗ್ದಾಳಿ ನಡೆಸಿದರು.
ರಾಜ್ಯಾದ್ಯಂತ ಉಗ್ರ ಹೋರಾಟ
ಹೀಗೆ ಇಲಾಖೆಯ ಅಧಿಕಾರಿಗಳನ್ನು ಬಂಧಿಸಲು ಯಾವ ಕಾನೂನಿನಲ್ಲಿ ಅವಕಾಶವಿದೆ? ಅಧಿಕಾರಿಗಳನ್ನು ಬಂಧಿಸುವ ಮೂಲಕ ಪೊಲೀಸ್ ಇಲಾಖೆ ಇಡೀ ಪಶುವೈದ್ಯಕೀಯ ಸಮೂಹವನ್ನೇ ಅವಮಾನಿಸಿದೆ. ಇದೊಂದು ಬಾಲಿಶವಾದ ಕ್ರಮವಾಗಿದೆ. ನಾಯಿಗಳು ಮಾಡಿದ ತಪ್ಪಿಗೆ ವೈದ್ಯರನ್ನು ಬಂಧಿಸುವ ಮೂಲಕ ಪೊಲೀಸರು ಉದ್ಧಟತನ ಪ್ರದರ್ಶಿಸಿದ್ದಾರೆ. ಅವರ ಈ ಕ್ರಮದಿಂದ ಪಶುವೈದ್ಯರು ಸಮಾಜದಲ್ಲಿ ತಲೆ ತಗ್ಗಿಸುವಂತಾಗಿದೆ.
ಈ ರೀತಿ ಬಂಧಿಸಿದ್ದರಿಂದ ಪಶುವೈದ್ಯರು ತೀವ್ರ ಆಘಾತಕ್ಕೆ ಒಳಗಾಗಿದ್ದಾರೆ. ಆದ್ದರಿಂದ ಕೂಡಲೇ ಇಂತಹ ಉದ್ಧಟತನದಿಂದ ಪಶುವೈದ್ಯರನ್ನು ಬಂಧಿಸಿ ಬಿಡುಗಡೆ ಮಾಡಿರುವ ಪೊಲೀಸರ ವಿರುದ್ಧ ಕೂಡಲೇ ಶಿಸ್ತುಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ ಅವರು, ಶಿಸ್ತುಕ್ರಮ ಜರುಗಿಸದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.