ಒಂದು ಮಳೆಯ ರಾತ್ರಿ, ಬೆಂಗಳೂರು ಪೊಲೀಸರಿಗೆ ಥ್ಯಾಂಕ್ಸ್ ಹೇಳಿದ ಅಪರ್ಣಾ
ಬೆಂಗಳೂರು, ಜೂನ್ 27: ಸರಕಾರಿ ಉದ್ಯೋಗಿಗಳು, ನೌಕರರ ಬಗ್ಗೆ ನಮ್ಮ ಆಕ್ಷೇಪ ಇದ್ದರೆ ಮುಖ-ಮೂತಿ ನೋಡದೆ ಅವರನ್ನು ತೊಳೆದು ಹಾಕಿಬಿಡ್ತೀವಿ. ಅಂದರೆ ಸಾಮಾಜಿಕ ಜಾಲತಾಣ, ಇತರ ಮಾಧ್ಯಮಗಳ ಮೂಲಕ ನಮಗಾದ ಕೆಟ್ಟ ಅನುಭವವನ್ನು ಹೊರಗೆ ಕಕ್ಕಿ ಹಗುರಾಗಿರ್ತೀವಿ. ಹಾಗಂತ ಅದು ತಪ್ಪು ಅಂತಲ್ಲ.
ಆದರೆ, ನಮಗೆ ಸಹಾಯ ಸಿಕ್ಕಾಗ ಕೂಡ ಥ್ಯಾಂಕ್ಸ್ ಹೇಳಬೇಕು ಅಲ್ವಾ? ಬೆಂಗಳೂರಿನ ಅಪರ್ಣಾ ವಿನೋದ್ ಈ ವಿಚಾರದಲ್ಲಿ ಮಾದರಿಯಾಗಿದ್ದಾರೆ. ಆಕೆಯ ನೆರವಿಗೆ ಬಂದ ಸಂಚಾರ ಪೊಲೀಸರನ್ನು ಮನಸಾರೆ ಶ್ಲಾಘಿಸಿದ್ದಾರೆ. ಆಟೋದವರ ಸಹಾಯವನ್ನು ಸ್ಮರಿಸಿದ್ದಾರೆ.
ಇಡೀ ಘಟನೆಯು ಮನುಷ್ಯತ್ವದ ಪಾಠವೊಂದನ್ನು ಹೇಳುತ್ತಿದೆ. ತಮ್ಮ ಅನುಭವವನ್ನು ಅವರು ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದಾರೆ. ಜತೆಗೆ ಬೆಂಗಳೂರು ಕಮಿಷನರ್ ಗೆ ಕೂಡ ಮಾಹಿತಿ ರವಾನಿಸಿದ್ದು, ಅವರು ಕೂಡ ಧನ್ಯವಾದವನ್ನು ತಿಳಿಸಿದ್ದಾರೆ. ಹೌದು, ಆಕೆಗೆ ಸಿಕ್ಕ ನೆರವೇನು, ಆ ಘಟನೆ ಏನು ಎಂಬುದನ್ನು ಫೇಸ್ ಬುಕ್ ನಲ್ಲಿ ವಿವರಿಸಿರುವಂತೆ ಇಡೀ ಘಟನೆಯ ಮಾಹಿತಿ ನಿಮ್ಮ ಮಂದಿದೆ.
" ಇಂದಿರಾನಗರದ ಹೋಟೆಲೊಂದರಲ್ಲಿ ರಾತ್ರಿ ಊಟ ಮುಗಿಸಿ ನಾನು-ನನ್ನ ಸ್ನೇಹಿತರು ಹೊರಗೆ ಬಂದಿವಿ. ವಿಪರೀತವಾದ ಮಳೆ ಸುರಿಯುತ್ತಿತ್ತು. ನಮ್ಮನ್ನು ದಾಟಿ ಸಂಚಾರ ಪೊಲೀಸರ ವಾಹನವೊಂದು ಹೋಯಿತು. ಆ ಮಳೆಯ ಮಧ್ಯೆಯೇ ನಾನು ಆ ವಾಹನದ ಕಡೆ ಓಡಿ ಹೋಗಿ, ನಮಗೆ ವಾಹನ ಹುಡುಕಲು ಸಹಾಯ ಮಾಡಿ ಅಂತ ಕೇಳಿಕೊಂಡೆ".
"ಪ್ರಾಮಾಣಿಕವಾಗಿ ಹೇಳಬೇಕು ಅಂದರೆ ಅವರು ಸಹಾಯ ಮಾಡುವ ಯಾವ ನಂಬಿಕೆಯೂ ಇರಲಿಲ್ಲ. ಆದರೆ ನಮ್ಮ ಎಣಿಕೆ ತಪ್ಪು ಎಂದು ಸಾಬೀತಾಯಿತು. ನಿಮ್ಮ ತಂಡ ನಮಗಾಗಿಯೇ ಒಂದು ಆಟೋ ಕಳಿಸಿತು" ಎಂದು ಆಕೆ ಬರೆದುಕೊಂಡಿದ್ದಾರೆ.
ಬೆಂಗಳೂರಿನ 'ಒಂಟಿ' ಮಹಿಳೆಗೆ ರೂಂ ನಿರಾಕರಿಸಿದ ಹೋಟೆಲ್
"ನೀವು ಮತ್ತು ಆ ಆಟೋ ಡ್ರೈವರ್ ಕಳೆದ ರಾತ್ರಿಯಲ್ಲಿ ನಿಜವಾದ ಹಿರೋಗಳಾದಿರಿ. ನಮ್ಮ ಅಗತ್ಯ ಎಷ್ಟರ ಮಟ್ಟಿಗಿತ್ತು, ಆ ಸಮಯದಲ್ಲಿ ನೀವು ಮಾಡಿದ ಸಹಾಯವನ್ನು ಮರೆಯಲು ಸಾಧ್ಯವೇ ಇಲ್ಲ" ಎಂದು ಅಪರ್ಣಾ ಬರೆದುಕೊಂಡಿದ್ದಾರೆ.
ಇದರ ಜತೆಗೆ, ನಾವು ಆನ್ ಲೈನ್ ಮೂಲಕ ಟ್ಯಾಕ್ಸಿಗಳನ್ನು ಬುಕ್ ಮಾಡುವುದಕ್ಕೆ ಹೊಂದಿಕೊಂಡು ಬಿಟ್ಟಿದ್ದೇವೆ. ಅವರು ಸ್ಪರ್ಧೆಯೇ ಇಲ್ಲದ ಹಾಗೆ ಮಾಡಿಬಿಟ್ಟರು. ಅವರು ಕೊಡುವ ಸೇವೆಯ ಮೇಲೆ ಅವಲಂಬಿಸುವಂತೆ ಮಾಡಿದರು. ಈ ಹಿಂದೆ ಆಟೋದಲ್ಲಿ ಹೋಗುತ್ತಿದ್ದೆ. ಅವರ ಜತೆ ವಾದ ಮಾಡಿಯೋ ಹೇಗೋ ಆಟೋ ಸಿಗ್ತಿತ್ತು. ಆದರೀಗ ಆಟೋ ಸಿಗ್ತಾನೇ ಇಲ್ಲ ಎಂದಿದ್ದಾರೆ.
ಆ ದಿನ ಪೊಲೀಸರು ಸಿಗಲಿಲ್ಲ ಅಂದಿದ್ದರೆ, ಆ ಆಟೋ ಕಳಿಸಲಿಲ್ಲ ಅಂದರೆ ನಾವು ಹೇಗೆ ಮನೆ ಸೇರುತ್ತಿದ್ದೆವೋ ಗೊತ್ತಿಲ್ಲ. ಆ ರಾತ್ರಿಯಲ್ಲಿ ಹತ್ತು ಕಿಲೋಮೀಟರ್ ದೂರದ ಸ್ಥಳಕ್ಕೆ ತಲುಪಿಸಿದ ಆಟೋ ಡ್ರೈವರ್ ಕೂಡ ಹೆಚ್ಚಿನ ಹಣ ಪಡೆಯಲಿಲ್ಲ ಎಂಬುದನ್ನು ಕೂಡ ಅಪರ್ಣಾ ಮನಸಾರೆ ನೆನೆಯುತ್ತಾರೆ.