ಬಕ್ರೀದ್ಗೆ ಬಲಿಯಾಗಲಿರುವ ಜಾನುವಾರುಗಳ ಜೀವ ಕಾಪಾಡಿ
ಬೆಂಗಳೂರು, ಸೆ. 27 : ಜಾನುವಾರುಗಳನ್ನು ನಿರ್ದಾಕ್ಷಿಣ್ಯವಾಗಿ ಕಸಾಯಿ ಖಾನೆಗೆ ಬಲಿ ಕೊಡುವುದನ್ನು ತಡೆಯುವಂತೆ ಒತ್ತಾಯಿಸಿ ಗೋ ಜ್ಞಾನ ಪೌಂಢೇಷನ್ ಜೋಶೈನ್ ಅಂಥೋಣಿ ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದಾರೆ.
ಇನ್ನೇನು ಬಕ್ರೀದ್ ಮತ್ತು ಆಯುಧ ಪೂಜೆ ಹಬ್ಬಗಳು ಎದುರಾಗಲಿದ್ದು ಬೆಂಗಳೂರು ಮಹಾನಗರಕ್ಕೆ ಒಂದು ಲಕ್ಷಕ್ಕೂ ಅಧಿಕ ಜಾನುವಾರುಗಳನ್ನು ತರಿಸಿಕೊಳ್ಳಲಾಗಿದೆ ಎಂಬ ಮಾಹಿತಿ ಇದೆ. ಇವೆಲ್ಲವೂ ಸೂಕ್ತ ಆಹಾರ ಮತ್ತು ಆಶ್ರಯವಿಲ್ಲದೇ ಬಳಲುತ್ತಿವೆ ಎಂದು ದೂರಿನಲ್ಲಿ ಹೇಳಲಾಗಿದೆ.(ರಾಮನಗರ : ಹಸುಗಳ ಸಾವು, ಜನರಿಗೆ ಸಂಕಷ್ಟ)
ಬೆಂಗಳೂರಿನ ಡಿಜಿ ಹಳ್ಳಿ, ಶಿವಾಜಿನಗರ, ಹೆಣ್ಣೂರು ಭಾಗದಲ್ಲಿ ಅನೇಕ ಜಾನುವಾರುಗಳು ಬಲಿಗಾಗಿ ಕಾಯುತ್ತಿವೆ. ಇದು 1964ರ ಜಾನುವಾರು ಸಂರಕ್ಷಣೆ ಕಾಯ್ದೆಗೆ ವಿರುದ್ಧವಾಗಿದೆ ಎಂದು ಆರೋಪಿಸಲಾಗಿದೆ.
ಇದಕ್ಕೆ ಸಂಬಂಧಿಸಿದ ಪಶುಸಂಗೋಪನಾ ಇಲಾಖೆ ಅಧಿಕಾರಿಗಳು, ಬಿಬಿಎಂಪಿ ಆಯುಕ್ತರು, ಮತ್ತಿತರ ಅಧಿಕಾರಿಗಳು ನಿದ್ರೆ ಮಾಡುತ್ತಿದ್ದಾರೆ. ಲೋಕಾಯುಕ್ತರಿಗೆ ಈ ಬಗ್ಗೆ ಅರ್ಜಿ ಸಲ್ಲಿಸಲಾಗಿದ್ದು ಅವರು ಸಂಬಂಧಿಸಿದವರಿಗೆ ನೋಟಿಸ್ ಸಹ ಜಾರಿ ಮಾಡಿದ್ದಾರೆ. ಅಲ್ಲದೇ ಈ ಬಗ್ಗೆ ಅಕ್ಟೋಬರ್ 1 ರೊಳಗೆ ಮಾಹಿತಿ ನೀಡುವಂತೆ ತಿಳಿಸಲಾಗಿದೆ.
ಈ ಬಗ್ಗೆ ಸೂಕ್ತ ಕ್ರಮಗಳು ಜಾರಿಯಾಗದಿದ್ದರೆ ಸಂಘಟನೆ ಪರ್ಯಾಯ ಮಾರ್ಗ ಹಿಡಿಯಬೇಕಾಗುತ್ತದೆ ಎಂದು ಸಂಘಟನೆ ಎಚ್ಚರಿಸಿದೆ.