ಕೋಡಿಹಳ್ಳಿ ಚಂದ್ರಶೇಖರ್ ಸ್ಟಿಂಗ್ ಆಪರೇಷನ್: ತನಿಖೆಗೆ ರೈತ ಮುಖಂಡರ ಒತ್ತಾಯ
ಬೆಂಗಳೂರು, ಮೇ 28: ರೈತ ಚಳವಳಿಯ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಮಾಡಲಾಗಿರುವ ಸ್ಟಿಂಗ್ ಆಪರೇಷನ್ ಬಗ್ಗೆ ಸಮಗ್ರ ತನಿಖೆಯಾಗಬೇಕು, ರಾಜ್ಯದ ಜನತೆಗೆ ಸತ್ಯ ಗೊತ್ತಾಗಬೇಕು ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಹೇಳಿದ್ದಾರೆ.
ನಗರದ ಪ್ರಸ್ಕ್ಲಬ್ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶಾಂತಕುಮಾರ್, "ದೆಹಲಿ ರೈತ ಹೋರಾಟದ ಶಕ್ತಿಯನ್ನು ಸಹಿಸಲಾಗದೆ, ಹೋರಾಟವನ್ನು ಹತ್ತಿಕ್ಕಲು ಕಾಣದ ಕೈಗಳು ಪ್ರಯತ್ನ ಮಾಡುತ್ತಿವೆ. ಕೋಡಿಹಳ್ಳಿ ಚಂದ್ರಶೇಖರ್ ಸ್ಟಿಂಗ್ ಆಪರೇಷನ್ ಪ್ರಕರಣ ಸಾಕಷ್ಟು ಸುದ್ದಿ ಮಾಡುತ್ತಿದೆ. ಯಾರೇ ಆದರೂ ಹಸಿರು ಶಾಲು ಹಾಕಿ ರೈತರಿಗೆ ದ್ರೋಹ ಬಗೆಯಬಾರದು, ಹಾಗೆ ಮಾಡುವುದು ಹೆತ್ತ ತಾಯಿಗೆ ದ್ರೋಹ ಮಾಡುವುದಕ್ಕೆ ಸಮಾನ" ಎಂದು ಹೇಳಿದರು.
ಅರವಿಂದ್ ಕೇಜ್ರಿವಾಲ್ ಸಮ್ಮುಖದಲ್ಲಿ ಎಎಪಿ ಸೇರಿದ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್
ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಸ್ಟಿಂಗ್ ಆಪರೇಷನ್ ವೀಡಿಯೋ ಪ್ರಸಾರವಾಗುತ್ತಿದ್ದಂತೆ, ರೈತ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ತನ್ನ ಮೇಲಿನೆ ಆರೋಪದ ಬಗ್ಗೆ ಸಂಪೂರ್ಣ ತನಿಖೆಯಾಗಿ ನಿರ್ದೋಷಿ ಎಂದು ಸಾಬೀತಾಗುವವರೆಗೂ ಕೋಡಿಹಳ್ಳಿ ಹಸಿರುಶಾಲು ಧರಿಸಬಾರದು ಎಂದು ವಿವಿಧ ರೈತ ಸಂಘಟನೆಗಳು ಆಗ್ರಹಿಸಿವೆ.
ರಾಜ್ಯ ಸರ್ಕಾರ ಪ್ರಕರಣದ ಬಗ್ಗೆ ಸಮಗ್ರವಾಗಿ ತನಿಖೆ ನಡೆಸಬೇಕು. ಸ್ಟಿಂಗ್ ಆಪರೇಷನ್ ಸತ್ಯಾಸತ್ಯತೆ ರಾಜ್ಯದ ಜನತೆಗೆ ತಿಳಿಯಬೇಕು ಎಂದ ಅವರು ತನಿಖೆ ನಡೆಸಲು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.
ಮೀನುಗಾರರ ಸಹಕಾರ ಸಂಘಗಳ ಕಡೆಗಣನೆಗೆ ವಿರೋಧ
ಒಳನಾಡು ಪ್ರದೇಶದ ಸುಮಾರು 28,000 ಗ್ರಾಮ ಪಂಚಾಯಿತಿ ಅಧೀನಕ್ಕೆ ಬರುವ ಕೆರೆಗಳಲ್ಲಿ ಮೀನುಗಾರರ ಸಹಕಾರ ಸಂಘಗಳನ್ನು ದೂರವಿಟ್ಟು, ಬಹಿರಂಗ ಹರಾಜಿನ ಮೂಲಕ ಬಲಾಢ್ಯರಿಗೆ ಏತ ನೀರಾವರಿ ಕೆರೆಗಳನ್ನು ಮೀನು ಸಾಕಾಣಿಕೆಗಾಗಿ ಗುತ್ತಿಗೆ ನೀಡಲು ಮುಂದಾಗಿರುವ ಕ್ರಮವನ್ನು ಶಾಂತಕುಮಾರ್ ಖಂಡಿಸಿದರು.
2014ರ ನಿಯಮದಂತೆ ಸ್ಥಳೀಯ ಮೀನುಗಾರರ ಸಹಕಾರ ಸಂಘಗಳಿಗೆ ಕೆರೆಗಳನ್ನು ಗುತ್ತಿಗೆ ನೀಡಬೇಕು, ಇದರಿಂದ ರಾಜ್ಯದ ಒಂದೂವರೆ ಲಕ್ಷ ಮೀನುಗಾರರಿಗೆ ಅನುಕೂಲವಾಗಲಿದೆ ಎಂದ ಅವರು, ಕೂಡಲೇ ಈ ಕುರಿತು ಕ್ರಮ ಕೈಗೊಳ್ಳುವಂತೆ ಮೀನುಗಾರಿಕೆ ಸಚಿವ ಎಸ್.ಅಂಗಾರ ಅವರಿಗೆ ಒತ್ತಾಯಿಸಿದರು.
Breaking: ರೈತರನ್ನು ಬದುಕಲು ಬಿಡಿ, ಇನ್ಮುಂದೆ ನಿಮ್ಮ ಆಟ ನಡೆಯಲ್ಲ: ಕೋಡಿಹಳ್ಳಿ ಚಂದ್ರಶೇಖರ್ ಗುಡುಗು
ರೈತರಿಗೆ ಸಾಲ ನೀಡಲು ಸಿಬಿಲ್ ಸ್ಕೋರ್ ಅವೈಜ್ಞಾನಿಕ
ರೈತರು ಬ್ಯಾಂಕುಗಳಲ್ಲಿ ಕೃಷಿ ಸಾಲ ಪಡೆಯಲೂ ಸಿಬಿಲ್ ಸ್ಕೋರ್ ಪರಿಗಣನೆ ಮಾಡುತ್ತಿರುವುದು ಅವೈಜ್ಞಾನಿಕ. ಅತಿವೃಷ್ಟಿ, ಅನಾವೃಷ್ಟಿ, ಬರಗಾಲಕ್ಕೆ ತುತ್ತಾದಾಗ ಸಕಾಲಕ್ಕೆ ಸಾಲ ಮರುಪಾವತಿ ಮಾಡಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಸರ್ಕಾರ ಕೂಡಲೇ ಈ ನಿಯಮ ರದ್ದುಗೊಳಿಸಬೇಕು. ಸಾಲ ವಸೂಲಿಗಾಗಿ ಬ್ಯಾಂಕ್ಗಳು ರೈತರಿಗೆ ಕಿರುಕುಳ ನೀಡುವುದನ್ನುನಿಲ್ಲಿಸಬೇಕು, ಇಲ್ಲದಿದ್ದರೆ ರಾಜ್ಯದ ರೈತರು ರಿಸರ್ವ್ ಬ್ಯಾಂಕ್ ಮುಂದೆ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಅತಿಯಾದ ಮಳೆಯಿಂದ ಆಗಿರುವ ಹಾನಿ, ಬೆಳೆ ನಷ್ಟದ ಬಗ್ಗೆ ಪರಿಶೀಲನೆ ನಡೆಸಿ ಸಂಪೂರ್ಣ ಪರಿಹಾರ ಕೊಡಿಸಲು ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.
ಸಕ್ಕರೆ ರಫ್ತು ಮಿತಿಗೆ ವಿರೋಧ
ಗೋಧಿ, ಸಕ್ಕರೆ ರಫ್ತು ನಿಷೇಧ ಮಾಡುವ ಮೂಲಕ ಕೇಂದ್ರ ಸರ್ಕಾರ ರೈತರಿಗೆ ಹಾಗೂ ಕಬ್ಬು ಬೆಳೆಗಾರರಿಗೆ ಗಾಯದ ಮೇಲೆ ಬರೆ ಎಳೆಯುತ್ತಿದೆ ಎಂದು ಆರೋಪಿಸಿದ ಅವರು, ಸಕ್ಕರೆ ರಫ್ತು ಮೇಲಿ ವಿಧಿಸಿರುವ ಮಿತಿ ತೆರವುಗೊಳಿಸಬೇಕು ಎಂದು ಆಗ್ರಹಿಸಿದರು.
ಪ್ರಸಕ್ತ ಸಾಲಿನ ಕಬ್ಬಿನ ಎಫ್ಆರ್ಪಿ ದರವನ್ನು ಕನಿಷ್ಠ ಟನ್ಗೆ 3500 ರೂ. ನಿಗದಿ ಮಾಡಬೇಕು. ಸಕ್ಕರೆ ಕಾರ್ಖಾನೆಗಳ ಆರಂಭಕ್ಕೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದರು. ರಾಜ್ಯದಲ್ಲಿ ಕಬ್ಬಿನ ಇಳುವರಿ ಹೆಚ್ಚಾಗಿದ್ದು, ಬೆಲೆ ನಿಗದಿ ಬಗ್ಗೆ ಕ್ರಮ ಅಗತ್ಯ ಎಂದರು.
35 ಕೋಟಿ ಲಂಚದ ಆರೋಪ
ಕಳೆದ 2021ರ ಏಪ್ರಿಲ್ನಲ್ಲಿ ಸಾರಿಗೆ ಇಲಾಖೆಯ ನಾಲ್ಕು ನಿಗಮಗಳ ನೌಕರರು ವಿವಿಧ ಬೇಡಿಕೆ ಈಡೇರಿಕೆಗಾಗಿ ಮುಷ್ಕರ ಹೂಡಿದ್ದರು. ಇದರ ನೇತೃತ್ವವನ್ನು ಕೋಡಿಹಳ್ಳಿ ಚಂದ್ರಶೇಖರ್ ವಹಿಸಿಕೊಂಡಿದ್ದರು. ಮುಷ್ಕರ ನಿಲ್ಲಿಸಲು ಕೋಡಿಹಳ್ಳಿ ಚಂದ್ರಶೇಖರ್ ಅವರಿಗೆ 35 ಕೋಟಿ ರೂ. ಲಂಚ ನೀಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಸಾರಿಗೆ ಇಲಾಖೆಯ ನೌಕರರು ಈ ವಿಚಾರವನ್ನು ಸಿಬಿಐಗೆ ವಹಿಸುವಂತೆ ಆಗ್ರಹಿಸಿದ್ದಾರೆ.
Recommended Video