ಉಕ್ಕಿನ ಸೇತುವೆ ನಿರ್ಮಾಣದಿಂದ ಜನರಿಗೆ ಹೆಚ್ಚು ಅನುಕೂಲ: ಡಿಕೆಶಿ
ಬೆಂಗಳೂರು, ಜನವರಿ 1: ಉಕ್ಕಿನ ಸೇತುವೆ ನಿರ್ಮಾಣದಿಂದ ಜನರಿಗೆ ಹೆಚ್ಚು ಅನುಕೂಲವಾಗಲಿದೆ ಹಾಗಾಗಿ ಯಾರೋ ವಿರೋಧ ಮಾಡುತ್ತಾರೆ ಎಂದು ನಾವು ಸುಮ್ಮನಿರಲು ಸಾಧ್ಯವಿಲ್ಲ ಎಂದು ಸಚಿವ ಡಿಕೆ ಶಿವಕುಮಾರ್ ಹೇಳಿದರು.
ಸಿದ್ದರಾಮಯ್ಯ ಸರ್ಕಾರವಿದ್ದಾಗ ಸಿದ್ದರಾಮಯ್ಯ ಅವರು ಬಿಜೆಪಿಗೆ ಗೌರವ ಕೊಟ್ಟು ಸ್ಟೀಲ್ ಬ್ರಿಡ್ಜ್ ಯೋಜನೆ ಸ್ಥಗಿತಗೊಳಿಸಿದ್ದರು. ನಾನು ಸಿದ್ದರಾಮಯ್ಯ ಅವರ ಜಾಗದಲ್ಲಿದ್ದಿದ್ದರೆ ಅದನ್ನು ಮಾಡಿಫೈ ಮಾಡಿ ಜಾರಿಗೊಳಿಸುತ್ತಿದ್ದೆ, ಸ್ಟೀಲ್ ಬ್ರಿಡ್ಜ್ ಯೋಜನೆಯಿಂದ ಜನರಿಗೆ ಅನುಕೂಲವಾಗಲಿದೆ ಎಂದರು.
ಚಾಲುಕ್ಯ ವೃತ್ತದ ವಿವಾದಿತ ಉಕ್ಕಿನ ಸೇತುವೆ ಯೋಜನೆಗೆ ಮರುಜೀವ
ಸಂಚಾರ ದಟ್ಟಣೆ ತೀವ್ರವಾಗಿರುವುದರಿಂದ ಜನರಿಗೆ ತೊಂದರೆಯಾಗುತ್ತಿದೆ, ಸ್ಟೀಲ್ ಬ್ರಿಡ್ಜ್ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಿದೆ. ಸಾರ್ವಜನಿಕರಿಗೆ ಸಹಾಯವಾಗುವ ಯೋಜನೆಯನ್ನು ರಾಜಕೀಯ ಕಾರಣಕ್ಕಾಗಿ ವಿರೋಧಿಸುವುದು ಸರಿಯಲ್ಲ ಎಂದು ಹೇಳಿದರು.
ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಭಾರೀ ವಿವಾದ ಹುಟ್ಟಿಸಿದ್ದ ಸ್ಟೀಲ್ ಬ್ರಿಡ್ಜ್ ಯೋಜನೆಗೆ ಸಮ್ಮಿಶ್ರ ಸರ್ಕಾರ ಮತ್ತೆ ಜೀವ ನೀಡಲು ಮುಂದಾಗಿದೆ. ಹೈಕಮಾಂಡ್ಗೆ ಕಪ್ಪಕಾಣಿಕೆ ಕಿಕ್ ಬ್ಯಾಕ್, ಸೇರಿ ಸರಣಿ ಆರೋಪಗಳಿಗೆ ಈ ಉಕ್ಕಿನ ಸೇತುವೆ ಗುರಿಯಾಗಿತ್ತು. ಕಳೆದ ವಿಧಾನಸಭೆಯ ಚುನಾವಣೆ ಪ್ರಚಾರದಲ್ಲಿಯೂ ಪ್ರಧಾನಿ ನರೇಂದ್ರ ಮೋದಿ ಸ್ಟೀಲ್ ಬ್ರಿಡ್ಜ್ ಕಿಕ್ ಬ್ಯಾಕ್ ಪ್ರಕರಣವನ್ನು ಉಲ್ಲೇಖಿಸಿದ್ದರು.