ಬೆಂಗಳೂರಲ್ಲಿ ಉಕ್ಕಿನ ಸೇತುವೆ ನಿರ್ಮಾಣಕ್ಕೆ ಮುಂದಾದರೆ ಮರು ಹೋರಾಟ
ಬೆಂಗಳೂರು, ಜನವರಿ 2: ಚಾಲುಕ್ಯ ವೃತ್ತದಿಂದ ಎಸ್ಟೀಮ್ ಮಾಲ್ವರೆಗೆ ಉಕ್ಕಿನ ಸೇತುವೆ ನಿರ್ಮಾಣ ವಿರೋಧಿಸಿ 201ರಲ್ಲೇ ಪ್ರತಿಭಟನೆ ನಡೆಸಿದ್ದರು. ಒಂದೊಮ್ಮೆ ಸಮ್ಮಿಶ್ರ ಸರ್ಕಾರ ಉಕ್ಕಿನ ಸೇತುವೆ ನಿರ್ಮಾಣಕ್ಕೆ ಮುಂದಾದರೆ ಹೋರಾಟ ತೀವ್ರಗೊಳ್ಳುವ ಎಲ್ಲಾ ಸಾಧ್ಯತೆಗಳಿವೆ.
ಸುಮಾರು ಒಂದೂವರೆ ವರ್ಷದ ಹಿಂದೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕೈಬಿಟ್ಟಿದ್ದ ಉಕ್ಕಿನ ಸೇತುವೆ ಯೋಜನೆ ಆರಂಭಿಸುವ ಇಂಗಿತವನ್ನು ಸಮ್ಮಿಶ್ರ ಸರ್ಕಾರ ವ್ಯಕ್ತಪಡಿಸಿರುವುದು ಮತ್ತೆ ಚರ್ಚೆಗೆ ಗ್ರಾಸವಾಗಿದೆ.
ಚಾಲುಕ್ಯ ವೃತ್ತದ ವಿವಾದಿತ ಉಕ್ಕಿನ ಸೇತುವೆ ಯೋಜನೆಗೆ ಮರುಜೀವ
ಈ ಹಿಂದೆ 2016ರ ಜೂನ್-ಜುಲೈನಲ್ಲಿ ಘೋಷಿಸಿದ್ದ ಉಕ್ಕಿನ ಸೇತುವೆ ನಿರ್ಮಾಣ ಯೋಜನೆ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು. ಯೋಜನೆಯಿಂದ ಕಾಂಗ್ರೆಸ್ ಹೈಕಮಾಂಡ್ಗೆ ಕಿಕ್ಬ್ಯಾಕ್ ಹೋಗಿದೆ ಎಂಬ ಆರೋಪ ಕೇಳಿಬಂದಿತ್ತು.
ಅಷ್ಟೇ ಅಲ್ಲ ವಿಧಾನ ಪರಿಷತ್ ಕಾಂಗ್ರೆಸ್ ಸದಸ್ಯ ಕೆ ಗೋವಿಂದರಾಜು ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿದಾಗ, ವಶಪಡಿಸಿಕೊಂಡಿದ್ದ ಡೈರಿಯಲ್ಲಿ ಕೂಡ ಸ್ಟೀಲ್ ಬ್ರಿಡ್ಜ್ ಪ್ರಸ್ತಾಪ ಇತ್ತು. ಸರ್ಕಾರವೇ ಯೋಜನೆ ಕೈಬಿಟ್ಟಿದ್ದರಿಂದ ಎನ್ಜಿಟಿಯಲ್ಲಿದ್ದ ಪ್ರಕರಣ ತಾನಾಗಿಯೇ ವಜಾಗೊಂಡಿತ್ತು.
ಈಗ ಮತ್ತೆ ಸರ್ಕಾರ ಅದೇ ಯೋಜನೆ ಕೈಗೆತ್ತಿಕೊಂಡರೆ, ನಾವು ಪುನಃ ಎನ್ಜಿಟಿ ಮೊರೆ ಹೋಗಬೇಕಾಗುತ್ತದೆ, ಆಗ ಕಾನೂನು ಸಮರ ಮತ್ತೆ ಶುರುವಾಗಲಿದೆ ಎಂದು ನಿವೃತ್ತ ಐಎಎಸ್ ಅಧಿಕಾರಿ ವಿ ಬಾಲಸುಬ್ರಮಣಿಯನ್ ಹೇಳಿದ್ದಾರೆ.
ಸುಮಾರು 1800 ಕೋಟಿ ರೂ ವೆಚ್ಚದಲ್ಲಿ 6.7 ಕಿ.ಮೀ ಉದ್ದದ ಉಕ್ಕಿನ ಸೇತುವೆ ನಿರ್ಮಿಸುವುದಾಗಿ ಅಂದು ಬೆಂಗಳೂರು ಅಭಿವೃದ್ಧಿ ಸಚಿವರಾಗಿದ್ದ ಕೆಜೆ ಜಾರ್ಜ್ ತಿಳಿಸಿದ್ದರು. ಇದಾಗಿ ಕೆಲವೇ ದಿನಗಳಲ್ಲಿ ಯೋಜನಾ ವೆಚ್ಚ 200 ಕೋಟಿ ರೂ ಹೆಚ್ಚಳವಾಗಿತ್ತು. ಇದನ್ನು ವಿರೋಧಿಸಿ ಪರಿಸರವಾದಿಗಳು, ರಂಗಕರ್ಮಿಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು.