ಶೀಘ್ರವೇ ರಾಜ್ಯ ಸರ್ಕಾರದಿಂದ 'ಟಿವಿ ವಾಹಿನಿ' ಆರಂಭ
ಕರ್ನಾಟಕ ರಾಜ್ಯ ಸರ್ಕಾರದಿಂದ ಹೊಸ ವಾಹಿನಿ. ಗ್ರಾಮೀಣಾಭಿವೃದ್ಧಿ ಇಲಾಖೆ ಅಡಿಯಲ್ಲಿ 'ಗ್ರಾಮ ಸ್ವರಾಜ್ ಟಿವಿ' ಎಂಬ ವಾಹಿನಿ ಆರಂಭಕ್ಕೆ ಸಜ್ಜು.
ಬೆಂಗಳೂರು, ಸೆಪ್ಟೆಂಬರ್ 7: ತನ್ನ ಯೋಜನೆಗಳು, ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವುದು ಹಾಗೂ ಸಾಧನೆಗಳನ್ನು ಜನರಿಗೆ ಮನವರಿಕೆ ಮಾಡಿಕೊಡುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಸರ್ಕಾರ ತನ್ನದೇ ಆದ ಹೊಸತೊಂದು ವಾಹಿನಿಯನ್ನು ಆರಂಭಿಸಲಿದೆ.
ರಾಜ್ಯದಲ್ಲಿ ದೇಶದ ಪ್ರಪ್ರಥಮ ಕೃಷಿ ಬೆಲೆ ಆಯೋಗ ಅಸ್ತಿತ್ವಕ್ಕೆ
ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ವಾಹಿನಿಯನ್ನು ಆರಂಭಿಸಲಾಗುತ್ತಿದೆ. ಅಂದಹಾಗೆ, ಈ ವಾಹನಿಯ ಹೆಸರು 'ಗ್ರಾಮ ಸ್ವರಾಜ್ ಟಿವಿ'.
ಈಗಾಗಲೇ, ಟಿಆರ್ ಮೀಡಿಯಾ ಎಂಟರ್ ಟೈನ್ ಮೆಂಟ್ ಪ್ರೈವೇಟ್ ಲಿಮಿಟೆಡ್ ನೊಂದಿಗೆ ಒಪ್ಪಂದ ಮಾಡಿಕೊಂಡಿರುವ ರಾಜ್ಯ ಸರ್ಕಾರ ವಾಹಿನಿ ಆರಂಭದ ಪ್ರಕ್ರಿಯೆಗೆ ಚಾಲನೆ ನೀಡಿದೆ. ಈ ವಾಹಿನಿಯ ಉಸ್ತುವಾರಿಯನ್ನು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ (ಆರ್ ಡಿಪಿಆರ್) ಇಲಾಖೆಗೆ ನೀಡಲಾಗಿದೆ.
2016ರ ಆಗಸ್ಟ್ ನಲ್ಲೇ ಈ ಆಲೋಚನೆಗೆ ಹೊಳೆದಿತ್ತು. ಮೈಸೂರಿನಲ್ಲಿರುವ ಅಬ್ದುಲ್ ನಜೀರ್ ಸಬ್ ಸ್ಟೇಟ್ ಇನ್ಸ್ ಟಿಟ್ಯೂಟ್ ಆಫ್ ರೂರಲ್ ಡೆವೆಲಪ್ ಮೆಂಟ್ (ಎಎನ್ಎಸ್ಎಸ್ಐಆರ್ ಡಿ) ಯಲ್ಲಿ ಈಗಾಗಲೇ ಕಾರ್ಯ ನಿರ್ವಹಿಸುತ್ತಿರುವ ಪುಟ್ಟದೊಂದು ಟಿವಿ ವಾಹಿನಿಯು ಉಪಗ್ರಹ ಸಂವಹನ ತಂತ್ರಜ್ಞಾನದ ಆಧಾರದಲ್ಲಿ ಸುಮಾರು 176 ತಾಲೂಕುಗಳಲ್ಲಿ ತನ್ನ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿದೆ. ಇದನ್ನೇ ಈಗ ಗ್ರಾಮ ಸ್ವರಾಜ್ ಟಿವಿಯನ್ನಾಗಿ ಮೇಲ್ದರ್ಜೆಗೆ ಏರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ವಾಹಿನಿಯ ಆರಂಭಕ್ಕೆ 10 ಕೋಟಿ ರು.ಗಳನ್ನು ರಾಜ್ಯ ಸರ್ಕಾರ ನಿಗದಿಗೊಳಿಸಿದ್ದು, ಇದರ ನಿರ್ವಹಣೆಗೆ ಪ್ರತಿ ತಿಂಗಳೂ ತಗುಲುವ ಸುಮಾರು 1.5 ಕೋಟಿ ರು. ವೆಚ್ಛವನ್ನು ನೀಡಲು ರಾಜ್ಯ ಸರ್ಕಾರವೇ ಭರಿಸಲಿದೆ.