ಇಂದಿನಿಂದಲೇ ಎಸಿ ಬಸ್ ಸಂಚಾರಕ್ಕೆ ರಾಜ್ಯ ಸರ್ಕಾರದಿಂದ ಗ್ರೀನ್ ಸಿಗ್ನಲ್
ಬೆಂಗಳೂರು, ಜೂನ್ 3: ಕೊರೊನಾ ವೈರಸ್ ಲಾಕ್ಡೌನ್ ಹಿನ್ನೆಲೆ ರಾಜ್ಯಾದ್ಯಂತ ಹವಾನಿಯಂತ್ರಿತ ಬಸ್ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಇದೀಗ, ಎಸಿ ಬಸ್ ಸಂಚಾರಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡಿದೆ.
ಈ ಕುರಿತು ಸಿಎಂ ಯಡಿಯೂರಪ್ಪ ಜೊತೆ ಸಾರಿಗೆ ಸಚಿವ ಲಕ್ಷ್ಮಣ ಸವದಿ ಸಭೆ ನಡೆಸಿದರು. ಸಭೆ ಬಳಿಕ ಮಾತನಾಡಿದ ಸವದಿ ''ಎಸಿ ಬಸ್ಗಳನ್ನು ಸಂಚಾರಕ್ಕೂ ಅವಕಾಶ ಕೊಡ್ತಿದ್ದೇವೆ. ಇಂದಿನಿಂದಲೇ ಎಸಿ ಬಸ್ ಗಳ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಎಸಿ ವ್ಯವಸ್ಥೆಯನ್ನು 25 ರಿಂದ 26 ಡಿಗ್ರಿ ತಾಪಮಾನ ಇಟ್ಕೊಂಡು ಬಸ್ ಸಂಚಾರ ಮಾಡಲು ನಿರ್ಧರಿಸಿದ್ದೇವೆ'' ಎಂದಿದ್ದಾರೆ.
ಕೆಂಪೇಗೌಡ ಏರ್ಪೋರ್ಟ್ ಗೆ 5 ಮಾರ್ಗಗಳಿಂದ 23 ವಾಯುವಜ್ರ ಬಸ್ ಸೇವೆ
ಇನ್ನು ಕೇಂದ್ರ ಸರ್ಕಾರ ಅಂತರರಾಜ್ಯ ಸಂಚಾರಕ್ಕೆ ಅನುಮತಿ ನೀಡಿರುವ ಹಿನ್ನೆಲೆ, ಹೊರರಾಜ್ಯಗಳಿಗೆ ಬಸ್ ಸಂಚಾರ ಮಾಡಲಿದ್ಯಾ ಎಂಬ ಪ್ರಶ್ನೆ ಮೂಡಿದೆ. ಈ ಬಗ್ಗೆಯೂ ಸಿಎಂ ಜೊತೆ ನಡೆದ ಸಭೆಯಲ್ಲಿ ಚರ್ಚಿಸಲಾಗಿದೆ. ಮುಂದೆ ಓದಿ...
ಐದು ಮಾರ್ಗಗಳಲ್ಲಿ ಎಸಿ ಬಸ್ ಸಂಚಾರ
ನಗರದ ಒಟ್ಟು ಐದು ಮಾರ್ಗಗಳಿಂದ ಕೆಐಎಎಲ್ ಗೆ ವಾಯುವಜ್ರ ಬಸ್ ಸಂಚರಿಸಲಿದೆ. ಮೈಸೂರು ಸ್ಯಾಟಲೈಟ್ ಬಸ್ ನಿಲ್ದಾಣದಿಂದ ಕೆಐಎಎಲ್, ಮೆಜೆಸ್ಟಿಕ್ ನಿಂದ ಕೆಐಎಎಲ್, ಬನಶಂಕರಿಯಿಂದ ಕೆಐಎಎಲ್, ಬಿಟಿಎಂ ಲೇಔಟ್ ನಿಂದಲೂ ಬಸ್ ಸಂಚರಿಸಲಿದೆ. ಒಟ್ಟು ಬೆಂಗಳೂರಿನಾದ್ಯಂತ 75 ಬಸ್ ಗಳು ಸಂಚರಿಸಲಿವೆ. ಮೆಜೆಸ್ಟಿಕ್, ಕಾಡುಗೋಡಿ, ಸರ್ಜಾಪುರ ರಸ್ತೆ, ಸಿಲ್ಕ ಬೋರ್ಡ್, ಐಟಿಪಿಎಲ್, ಎಲೆಕ್ಟ್ರಾನಿಕ್ ಸಿಟಿ, ಅತ್ತಿಬೆಲೆ, ಹೆಬ್ಬಾಳಕ್ಕೆ ಬಸ್ ಸಂಚರಿಸಲಿದೆ.
ಪ್ರಯಾಣಿಕರ ಕೊರತೆ ಇದೆ
''ಬಸ್ ಪ್ರಯಾಣಿಕರ ಸಂಖ್ಯೆಯಲ್ಲಿ ಕೊರತೆ ಇದೆ. ಇಡೀ ರಾಜ್ಯದಲ್ಲಿ ಐದಾರು ಲಕ್ಷ ಪ್ರಯಾಣಿಕರು ಮಾತ್ರ ಸಂಚರಿಸುತ್ತಿದ್ದಾರೆ. ಇದರಿಂದ ಸಾರಿಗೆ ಇಲಾಖೆಗೆ ನಷ್ಟ ಹೆಚ್ಚುತ್ತಾ ಹೋಗುತ್ತಿದೆ. ಹಿಂದೆ ಒಂದು ಕೋಟಿ ಪ್ರಯಾಣಿಕರು ನಿತ್ಯ ಸಂಚರಿಸ್ತಿದ್ರು. ಆದರೂ ನಾವು ಸಾರಿಗೆ ಸಂಚಾರ ನಿಲ್ಸಲ್ಲ'' ಎಂದಿದ್ದಾರೆ. ''ಸಾರಿಗೆ ನಷ್ಟದ ಬಗ್ಗೆ ಚರ್ಚೆ ನಡೆಸಿದ್ದೇವೆ. ಕಳೆದ ತಿಂಗಳು, ಈತಿಂಗಳ ವೇತನವನ್ನು ಸರ್ಕಾರ ಅರ್ಧ ಕೊಟ್ಟಿದೆ. ಮುಂದಿನ ತಿಂಗಳ ವೇತನವನ್ನೂ ಅರ್ಧ ಕೇಳಿದ್ದೇವೆ. ಸಿಬ್ಬಂದಿ ವೇತನಕ್ಕೆ ಒಟ್ಟು 326 ಕೋಟಿ ರೂ ವೆಚ್ಚ ಆಗಲಿದೆ'' ಎಂದು ಮಾಹಿತಿ ನೀಡಿದ್ದಾರೆ.
ಟಿಕೆಟ್ ದರ ಏರಿಕೆ ಇಲ್ಲ
ಇನ್ನು ಬಸ್ ಟಿಕೆಟ್ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಸಾರಿಗೆ ಸಚಿವ ''ಸದ್ಯಕ್ಕೆ ಬಸ್ ಟಿಕೆಟ್ ದರ ಏರಿಕೆ ಇಲ್ಲ, ಅದರ ಪ್ರಸ್ತಾಪ, ಚಿಂತನೆ ಇಲ್ಲ. ಬೇರೆ ರಾಜ್ಯದಲ್ಲಿ ಬಸ್ ಟಿಕೆಟ್ ದರ ಹೆಚ್ಚಳ ಮಾಡಲಾಗಿದೆ. ಆದ್ರೆ ನಮ್ಮಲ್ಲಿ ಟಿಕೆಟ್ ದರ ಹೆಚ್ಚಳ ಸದ್ಯಕ್ಕೆ ಇಲ್ಲ'' ಎಂದು ತಿಳಿಸಿದ್ದಾರೆ.
ಅಂತರ್ ಬಸ್ ಸಂಚಾರಕ್ಕೆ ಸಿದ್ಧತೆ
ಅಂತರ್ ರಾಜ್ಯ ಬಸ್ ಸಂಚಾರದ ಕುರಿತು ಮಾತನಾಡಿದ ಸವದಿ 'ಬೇರೆ ರಾಜ್ಯಗಳಿಗೆ ಸಂಚಾರಕ್ಕೆ ಅವಕಾಶ ಕೋರಿ ಪತ್ರ ಬರೆಯಲಾಗಿದೆ. ಕೆಲವು ರಾಜ್ಯಗಳಿಂದ ಉತ್ತರ ಬರಬೇಕಿದೆ. ತಮಿಳುನಾಡು, ಆಂಧ್ರ ಮತ್ತು ತೆಲಂಗಾಣ ರಾಜ್ಯಗಳಿಂದ ನಾಳೆ ಉತ್ತರ ಸಿಗಲಿದೆ. ಆ ರಾಜ್ಯಗಳು ಒಪ್ಪಿದರೆ ಅಂತರ್ ರಾಜ್ಯ ಬಸ್ ಸಂಚಾರ ಆರಂಭ ಮಾಡ್ತೇವೆ. ಮಹಾರಾಷ್ಟ್ರಕ್ಕೆ ಅಂತರ್ ರಾಜ್ಯ ಬಸ್ ಸಂಚಾರಕ್ಕೆ ಅವಕಾಶ ಕೊಡಲ್ಲ. ಕೊರೋನಾ ಹಿನ್ನೆಲೆಯಲ್ಲಿ ಮಹಾರಾಷ್ಟ್ರಕ್ಕೆ ಬಸ್ ಸಂಚಾರ ಬಿಡಲ್ಲ'' ಎಂದಿದ್ದಾರೆ.