'ಗಾಂಧಿ ಗ್ರಾಮ ಪುರಸ್ಕಾರ'ಕ್ಕೆ 176 ಗ್ರಾಮ ಪಂಚಾಯತಿ ಆಯ್ಕೆ
ಬೆಂಗಳೂರು, ಸೆಪ್ಟೆಂಬರ್, 30 : ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಇಲಾಖೆ ನೀಡುವ 2014-15ನೇ ಸಾಲಿನ 'ಗಾಂಧಿ ಗ್ರಾಮ ಪುರಸ್ಕಾರ'ಕ್ಕೆ ರಾಜ್ಯದ 176 ಗ್ರಾಮ ಪಂಚಾಯತಿ ಆಯ್ಕೆಯಾಗಿದ್ದು, ಇದರಲ್ಲಿ ಉತ್ತರ ಕನ್ನಡ ಜಿಲ್ಲೆ (11) ಮುಂಚೂಣಿಯಲ್ಲಿದೆ. ಬೆಂಗಳೂರು ನಗರ ಮತ್ತು ಗ್ರಾಮಾಂತರ ಸೇರಿದಂತೆ ಒಟ್ಟು 8 ಗ್ರಾಮ ಪಂಚಾಯತಿಗಳು ಈ ಪುರಸ್ಕಾರಕ್ಕೆ ಭಾಜನವಾಗಿವೆ.
ಗಾಂಧಿ ಗ್ರಾಮ ಪುರಸ್ಕಾರ ಸಮಾರಂಭವು ವಿಧಾನ ಸೌಧದ ಬ್ಯಾಕ್ವೆಂಟ್ ಹಾಲ್ ನಲ್ಲಿ ಅಕ್ಟೋಬರ್ 2ರ ಶುಕ್ರವಾರದಂದು ಮಧ್ಯಾಹ್ನ 12.30ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನೆರವೇರಲಿದ್ದು, ಗ್ರಾಮ ಪಂಚಾಯತಿಗೆ ಕಾರ್ಯ ಚಟುವಟಿಕೆಯ ಉತ್ಸಾಹವನ್ನು ಹೆಚ್ಚಿಸುವ ಸಲುವಾಗಿ ಸರ್ಕಾರ ಈ ಪುರಸ್ಕಾರ ನೀಡುತ್ತದೆ.[ಸ್ವಚ್ಛ ಭಾರತ ಅಭಿಯಾನ, ದೇಶಕ್ಕೆ ಮೈಸೂರು ನಂ 1]
ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾದ ಗ್ರಾಮ ಪಂಚಾಯತಿಗಳು :
ಬಾಗಲಕೋಟೆ ಜಿಲ್ಲೆಯ 6, ಬೆಂಗಳೂರು ನಗರ 4, ಬೆಂಗಳೂರು ಗ್ರಾಮಾಂತರ 4, ರಾಮನಗರ 4, ಬೆಳಗಾವಿ 10, ಬಳ್ಳಾರಿ 6, ಬೀದರ್ 5, ವಿಜಯಪುರ 5, ಚಾಮರಾಜ ನಗರ 4, ಚಿಕ್ಕಮಗಳೂರು 7, ಚಿತ್ರದುರ್ಗ 6, ದಕ್ಷಿಣ ಕನ್ನಡ 5, ದಾವಣಗೆರೆ 5, ಧಾರವಾಡ 5, ಗದಗ 5, ಕಲಬುರಗಿ 7, ಯಾದಗಿರಿ 3, ಹಾಸನ 8, ಹಾವೇರಿ 7, ಕೊಡಗು 3, ಚಿಕ್ಕಬಳ್ಳಾಪುರ 6, ಕೋಲಾರ 5, ಕೊಪ್ಪಳ 4, ಮಂಡ್ಯ 7, ಮೈಸೂರು 7, ರಾಯಚೂರು 5, ಶಿವಮೊಗ್ಗ 7, ತುಮಕೂರು 10, ಉಡುಪಿ 3, ಉತ್ತರಕನ್ನಡ 11 ಸೇರಿದಂತೆ ಒಟ್ಟು 176 ಗ್ರಾಮಪಂಚಾಯತಿಗಳು ಆಯ್ಕೆ ಆಗಿದೆ.
ಗಾಂಧಿ ಗ್ರಾಮ ಪುರಸ್ಕಾರ ಎಂದರೇನು?
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಗ್ರಾಮದ ಅಭಿವೃದ್ಧಿ ಕೆಲಸಗಳಲ್ಲಿ ಬಹಳ ಉತ್ಸಾಹದಿಂದ ಪಾಲ್ಗೊಳ್ಳುವ ಗ್ರಾಮ ಪಂಚಾಯತಿಗಳನ್ನು ಗುಉತಿಸಿ ಈ ಪುರಸ್ಕಾರ ನಿಡಲಾಗುತ್ತದೆ. ಬಳಿಕ ಇಂತಹ ಗ್ರಾಮ ಪಂಚಾಯಿತಿಗಳಿಗೆ ೫ ಲಕ್ಷ ಅನುದಾನ ಬಿಡುಗಡೆ ಮಾಡಲಾಗುತ್ತದೆ. ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳಲ್ಲಿ ಸ್ವಚ್ಛತೆ, ಘನ ತ್ಯಾಜ್ಯ ನಿರ್ವಹಣೆ,. ಅಗತ್ಯವಿರುವ ಉಪಕರಣಗಳ ಪೂರೈಕೆ ಸೇರಿದಂತೆ ನಾನಾ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಾಗಿ ಉತ್ತೇಜನ ನೀಡಲಾಗುತ್ತದೆ.[ಗಾಂಧಿ ಜಯಂತಿಯಂದು ಸ್ವಚ್ಛ ಭಾರತ ಅಭಿಯಾನ]
ಹೇಗೆ ಆಯ್ಕೆ ಮಾಡಲಾಗುತ್ತದೆ?
ಗ್ರಾಮಪಂಚಾಯತಿ ವ್ಯಾಪ್ತಿಗೆ ಬರುವ ಹಳ್ಳಿಗಳ ಪ್ರತಿ ಮನೆ, ಅಂಗನವಾಡಿ, ಶಾಲೆಗಳಲ್ಲಿ ಶೌಚಾಲಯವಿರಬೇಕು. ಒಟ್ಟಿನಲ್ಲಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ 80% ಶೌಚಗೃಹ ನಿರ್ಮಾಣ, 60% ಕಟ್ಟುನಿಟ್ಟಾದ ಕಂದಾಯ ವಸೂಲಿ, ನರೇಗಾ ಯೋಜನೆಯಲ್ಲಿ ಗಮನಾರ್ಹ ಸಾಧನೆ, ಗ್ರಾಮ ಸಭೆ, ಮಕ್ಕಳ ವಿಶೇಷ ಗ್ರಾಮ ಸಭೆ, ಕಡತಗಳ ಸಮರ್ಪಕ ನಿರ್ವಹಣೆ, ಕುಡಿಯುವ ನೀರಿನ ಸೌಕರ್ಯ, ವೈಯಕ್ತಿಕ ಶೌಚಗೃಹ ನಿರ್ಮಾಣಕ್ಕೆ ಪ್ರೋತ್ಸಾಹ, ವಸತಿ ಯೋಜನೆ ಅನುಷ್ಠಾನ ಮತ್ತಿತರ ಮಾನದಂಡಗಳ ಮೇಲೆ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ.