ಕೆಎಸ್ಒಯು ವಿದ್ಯಾರ್ಥಿಗಳಿಗೆ ತಾತ್ಕಾಲಿಕ ನೆಮ್ಮದಿ ನೀಡಿದ ಹೈಕೋರ್ಟ್
ಬೆಂಗಳೂರು, ಫೆಬ್ರವರಿ 02: ಕೆಎಸ್ಒಯು ನ 2013-14, 2014-15 ಸಾಲಿನ ಸಾವಿರಾರು ವಿದ್ಯಾರ್ಥಿಗಳು ಹೈಕೋರ್ಟ್ ಆದೇಶದಿಂದಾಗಿ ನೆಮ್ಮದಿಯ ಉಸಿರು ಬಿಡುವಂತಾಗಿದೆ. ಉದ್ಯೋಗ, ಉನ್ನತ ಶಿಕ್ಷಣದ ಆಸೆಯಿಂದ ಪದವಿ ಪಡೆದಿದ್ದ ವಿದ್ಯಾರ್ಥಿಗಳು ಯುಜಿಸಿ ಮಾನ್ಯತೆ ರದ್ದು ಮಾಡಿದ ಬಳಿಕ ದಾರಿ ದೋಚಂತಾಗಿದ್ದರು ಆದರೆ ಈಗ ಹೈಕೋರ್ಟ್ ವಿದ್ಯಾರ್ಥಿಗಳ ಸಮಸ್ಯೆಗೆ ಪರಿಹಾರ ಒದಗಿಸಿದೆ.
ಕೆಎಸ್ಒಯು ವಿದ್ಯಾರ್ಥಿಗಳ ಪದವಿ (ತಾಂತ್ರಿಕವಲ್ಲದ) ಮಾನ್ಯತೆಗೆ ಸಂಬಂಧಿಸಿದಂತೆ ಕೆ.ರತ್ನಪ್ರಭಾ ಸಮಿತಿಯ ವರದಿ ಜಾರಿಗೊಳಿಸಲು ಅವಕಾಶ ನೀಡುವಂತೆ ಕೋರಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಮಾನ್ಯ ಮಾಡಿದೆ.
ಮುಕ್ತ ವಿವಿ ಮಾನ್ಯತೆ ರದ್ದಿಗೆ ವಾಸ್ತು ದೋಷ ಕಾರಣವೇ!?
ಹೈಕೋರ್ಟ್ ಆದೇಶದಂತೆ 2013-14, 2014-15 ಸಾಲಿನ ವಿದ್ಯಾರ್ಥಿಗಳ (ತಾಂತ್ರಿಕವಲ್ಲದ ಕೋರ್ಸ್) ಅಂಕಪಟ್ಟಿಗಳು ಉದ್ಯೋಗಕ್ಕೆ ಮಾನ್ಯವಾಗುವ ಸಾಧ್ಯತೆ ಇದೆ. ಸರ್ಕಾರದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಅವರ ಏಕಸದಸ್ಯ ಪೀಠ ಸಮಿತಿಯು ನೀಡಿದ್ದ ಉಳಿದ ಶಿಫಾರಸ್ಸುಗಳ ಹೊರತಾಗಿ ಕೇವಲ 'ವಿದ್ಯಾರ್ಥಿಗಳ ಹಿತದೃಷ್ಠಿ ಇಂದ ನೀಡಲಾಗಿರುವ ಶಿಫಾರಸ್ಸುಗಳನ್ನಷ್ಟೆ' ಅನುಷ್ಠಾನಕ್ಕೆ ತರುವಂತೆ ಆದೇಶ ನೀಡಿದೆ.
ಹೈಕೋರ್ಟ್ ಆದೇಶದ ಪ್ರಕಾರ 2013-14, 2014-15ರಲ್ಲಿ ಕೆಎಸ್ಒಯು ನಲ್ಲಿ ಕಲಿತ (ತಾಂತ್ರಿಕವಲ್ಲದ ಕೋರ್ಸ್) ವಿದ್ಯಾರ್ಥಿಗಳ ಅಂಕಪಟ್ಟಿಗಳನ್ನು ಸಾರ್ವಜನಿಕ ಉದ್ಯೋಗಕ್ಕೆ, ಉದ್ಯೋಗ ಬಡ್ತಿಗೆ, ಹೆಚ್ಚಿನ ಓದಿಗೆ ಮಾನ್ಯವಾಗುವಂತೆ ಸರ್ಕಾರ ಆದೇಶ ಹೊರಡಿಸಬಹುದಾಗಿದೆ. ಈ ಆದೇಶವನ್ನು 15 ದಿನಗಳ ಒಳಗೆ ಮಾಡಬೇಕೆಂದು ಹೈಕೋರ್ಟ್ ಸೂಚಿಸಿದೆ.
ಅಷ್ಟೆ ಅಲ್ಲದೆ, 2013 ಹಾಗೂ ಅದಕ್ಕಿಂತಲೂ ಮೊದಲು ಕೆಎಸ್ಒಯು ನಲ್ಲಿ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿಗಳು ಯಾರು ಅಂಕಪಟ್ಟಿ ಪಡೆದಿಲ್ಲವೊ ಅವರು ಅಂಕಪಟ್ಟಿ ಪಡೆಯುವಂತೆ ಹಾಗೂ ಯಾರು ಇನ್ನೂ ತಮ್ಮ ಪದವಿ ಪೂರೈಸಿಲ್ಲವೊ ಅವರು ಮತ್ತೆ ಪರೀಕ್ಷೆ ಕಟ್ಟಿ ಪದವಿ ಪೂರೈಸುವ ಅವಕಾಶ ಇದೆ ಎಂದು ವಿದ್ಯಾರ್ಥಿಗಳಿಗೆ ಕೆಎಸ್ಒಯು ಮಾಹಿತಿ ನೀಡಲು ಹೈಕೋರ್ಟ್ ತಿಳಿಸಿದೆ.
ರತ್ನಪ್ರಭಾ ಸಮಿತಿಯ ವರದಿಯನ್ನು ಹೆಚ್ಚುವರಿ ಅಡ್ವೊಕೇಟ್ ಜನರಲ್ ಎ.ಎಸ್.ಪೊನ್ನಣ್ಣ ಅವರು ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಅವರಿದ್ದ ಏಕಸದಸ್ಯ ನ್ಯಾಯಪೀಠಕ್ಕೆ ಸಲ್ಲಿಸಿದರು.'ಅಭ್ಯರ್ಥಿಗಳ ಉದ್ಯೋಗ ಭವಿಷ್ಯಕ್ಕೆ ಅನುಕೂಲ ಕಲ್ಪಿಸಲು ಸರ್ಕರ ಬದ್ಧವಾಗಿದೆ. ಈ ವರದಿ ಅನುಷ್ಠಾನಗೊಳಿಸಲು ಅನುವು ಮಾಡಿ ನಿರ್ದೇಶಿಸಿ' ಎಂದು ಅವರು ಮನವಿ ಮಾಡಿದರು.
ರಾಜ್ಯ ಸರ್ಕಾರ ಕೆಎಸ್ಒಯು ಸಮಸ್ಯೆ ಕುರಿತು ಅಧ್ಯಯನ ನಡೆಸಿ ವರದಿ ಸಲ್ಲಿಸಲು ಇತ್ತೀಚೆಗೆ ರತ್ನಪ್ರಭಾ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿತ್ತು. ಇತ್ತೀಚೆಗಷ್ಟೆ ಕೇಂದ್ರದ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್ ಅವರು ಮೈಸೂರಿಗೆ ಬಂದಿದ್ದರೂ ಅವರು ಕೆಎಸ್ಒಯು ಸಮಸ್ಯೆ ಬಗೆಹರಿಸಲು ನಿರಾಸಕ್ತಿ ತೋರಿದ್ದರು.
ಇದರ ಬೆನ್ನಲ್ಲೆ ಈಗ ರಾಜ್ಯ ಸರ್ಕಾರ ಹೈಕೋರ್ಟ್ಗೆ ಅರ್ಜಿ ಹಕಿರುವುದು ಕೆಎಸ್ಒಯು ಮತ್ತು ಯುಜಿಸಿ ತಿಕ್ಕಾಟದಿಂದ ತೊಂದರೆಗೆ ಸಿಲುಕಿರುವ ಲಕ್ಷಾಂತರ ವಿದ್ಯಾರ್ಥಿಗಳಿಗೆ ಸಣ್ಣ ಆಶಾ ಭಾವನೆ ಮೂಡಿಸಿದೆ.