ಇಂದು ರಾಜ್ಯ ಸಚಿವ ಸಂಪುಟ ಸಭೆ, ಜಿಂದಾಲ್, ಐಎಂಎ, ವಾಲ್ಮೀಕಿಯದ್ದೇ ಚರ್ಚೆ
ಬೆಂಗಳೂರು, ಜೂನ್ 28: ಇಂದು ರಾಜ್ಯ ಸಮ್ಮಿಶ್ರ ಸರ್ಕಾರದ ಸಚಿವ ಸಂಪುಟ ಸಭೆ ನಡೆಯಲಿದ್ದು, ಜಿಂದಾಲ್, ಐಎಂಎ, ವಾಲ್ಮೀಕಿ ಸಮುದಾಯದ ಮೀಸಲು ಕುರಿತು ಚರ್ಚೆಯಾಗುವ ಸಾಧ್ಯತೆ ಇದೆ.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ಮಧ್ಯಾಹ್ನ 12.30ಕ್ಕೆ ನಡೆಯಲಿರುವ ರಾಜ್ಯ ಸಚಿವ ಸಂಪುಟ ಸಭೆಯು ಐಎಂಎ ಠೇವಣಿದಾರರು ವಂಚನೆಗೊಳಗಾದ ಪ್ರಕರಣದ ಹಿನ್ನೆಲೆಯಲ್ಲಿ ಭವಿಷ್ಯದಲ್ಲಿ ಈ ರೀತಿಯ ಠೇವಣಿದಾರರು ವಂಚನೆಗೊಳಗಾಗದಂತೆ ತಡೆಯಲು ಕಾನೂನು ರೂಪಿಸಲು ಮುಂದಾಗಿದೆ.
ಕುಮಾರಸ್ವಾಮಿ ಅಲ್ಲ, ಅವರಪ್ಪನೂ ಮಾತು ಕೇಳಬೇಕು: ಪ್ರಸನ್ನಾನಂದಪುರಿ ಸ್ವಾಮೀಜಿ
ಜಿಂದಾಲ್ಗೆ ಕಂಪೆನಿಗೆ ಭೂ ಪರಭಾರೆ ಹಾಗೂ ವಾಲ್ಮೀಕಿ ಸಮಾಜದ ಮೀಸಲಾತಿ ವಿಚಾರ ಪ್ರಸ್ತುತ ಇಡೀ ರಾಜ್ಯದ ಗಮನ ಸೆಳೆದಿರುವ ಪ್ರಮುಖ ವಿಚಾರಗಳು. ಈಗಾಗಲೇ ಜಿಂದಾಲ್ಗೆ ಭೂ ಪರಭಾರೆಯನ್ನು ವಿರೋಧಿಸಿ ಬಿಜೆಪಿ ಎರಡು ದಿನ ಅಹೋರಾತ್ರಿ ಧರಣಿ ನಡೆಸಿ ಇಡೀ ರಾಜ್ಯದ ಗಮನ ಸೆಳೆದಿತ್ತು.
ಐಎಂಎ ಜ್ಯುವೆಲ್ಸ್ ವಂಚನೆ ಪ್ರಕರಣದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ರಾಜ್ಯ ಸರಕಾರ ಕರ್ನಾಟಕ ಪ್ರೊಟೆಕ್ಷನ್ ಆಫ್ ಇಂಟರೆಸ್ಟ್ ಆಫ್ ಡಿಪಸಿಟರ್ಸ್ ಇನ್ ಫೈನಾನ್ಶಿಯನ್ ಇನ್ಸ್ಟಿಟ್ಯೂಷನ್ಸ್' (ಕೆಪಿಐಡಿ) ಕಾಯ್ದೆ-2004ಕ್ಕೆ ತಿದ್ದುಪಡಿ ತರುವ ಸಂಬಂಧ ಶುಕ್ರವಾರ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಸಮಾಲೋಚನೆ ನಡೆಯುವ ಎಲ್ಲಾ ಸಾಧ್ಯತೆಗಳಿವೆ.
ಜಿಂದಾಲ್ ವಿವಾದ : 4 ಸಚಿವರ ಸಂಪುಟ ಉಪ ಸಮಿತಿ ರಚನೆ
ಜುಲೈನಲ್ಲಿ ನಡೆಯಲಿರುವ ಮುಂಗಾರು ಅಧಿವೇಶನದ ದಿನಾಂಕ ನಿಗದಿ ಹಾಗೂ ಪರಿಶಿಷ್ಟ ಪಂಗಡದ ಮೀಸಲಾತಿ ಪ್ರಮಾಣವನ್ನು ಶೇ.3 ರಿಂದ ಶೇ.7.5ಕ್ಕೆ ಹೆಚ್ಚಿಸಬೇಕೆಂದು ಇತ್ತೀಚೆಗೆ ವಾಲ್ಮೀಕಿ ಸಮುದಾಯ ಬೆಂಗಳೂರಿನಲ್ಲಿ ನಡೆಸಿದ ಬೃಹತ್ ಪ್ರತಿಭಟನೆ ಹಿನ್ನೆಲೆಯಲ್ಲಿ ಪರಿಶಿಷ್ಟ ಪಂಗಡದ ಮೀಸಲಾತಿ ಪ್ರಮಾಣವನ್ನು ಯಾವ ರೀತಿ ಹೆಚ್ಚಳ ಮಾಡಬಹುದೆಂಬುದರ ಬಗ್ಗೆಯೂ ಚರ್ಚೆಯಾಗಲಿದೆ.
ಐಎಂಎ ವಂಚನೆ: ಮನ್ಸೂರ್ ಖಾನ್ಗೆ ಸೇರಿದ ಬಂದೂಕು ವಶ
ಶರಾವತಿ ಮತ್ತು ಅಘನಾಶಿನಿ ನದಿಯಿಂದ ಬೆಂಗಳೂರಿಗೆ ಕುಡಿಯುವ ನೀರು ಪೂರೈಕೆ ವಿಚಾರ ಹಾಗೂ ಮಳೆಗಾಲದ ಅಧಿವೇಶನಕ್ಕೆ ದಿನಾಂಕವನ್ನು ತುರ್ತಾಗಿ ನಿಗಧಿ ಮಾಡಬೇಕಾದ ಅವಶ್ಯಕತೆ ರಾಜ್ಯ ಸರ್ಕಾರದ ಮೇಲಿದ್ದು, ಈ ಕುರಿತು ಸಹ ಸಭೆಯಲ್ಲಿ ಮಹತ್ವದ ಚರ್ಚೆ ನಡೆಯಲಿದೆ ಎಂದು ತಿಳಿದುಬಂದಿದೆ.
ಒಟ್ಟಿನಲ್ಲಿ ಶರಾವತಿ, ಜಿಂದಾಲ್, ಐಎಂಎ, ವಾಲ್ಮೀಕಿ ಮೀಸಲಾತಿ ಇಂದಿನ ಸಚಿವ ಸಂಪುಟದ ಮುಖ್ಯ ವಸ್ತುವಿಷಯವಾಗಿರಲಿದೆ.