ಸಚಿವರಾಗುವ ಮೊದಲೇ ತಿಮ್ಮಾಪುರಗೆ ಬಿಜೆಪಿ ವಿರೋಧ
ಬೆಂಗಳೂರು, ಆಗಸ್ಟ್ 1: ಸಚಿವರಾಗಲು ಇನ್ನೇನು ಕಾಲ ಕೂಡಿಬಂದಿತು ಎನ್ನುವಷ್ಟರಲ್ಲೇ ವಿಧಾನ ಪರಿಷತ್ ಸದಸ್ಯ ಆರ್.ಬಿ. ತಿಮ್ಮಾಪುರ ಅವರಿಗೆ ಬಿಜೆಪಿ ಅಡ್ಡಗಾಲು ಹಾಕಿದೆ.
2015ರಲ್ಲಿ ನಡೆದಿದ್ದ ಬಿಬಿಎಂಪಿ ಚುನಾವಣೆಯಲ್ಲಿ ಸುಳ್ಳು ವಿಳಾಸ ನೀಡಿ, ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದ ತಿಮ್ಮಾಪುರ ಅವರು, ಕಾಂಗ್ರೆಸ್ ಪರವಾಗಿ ಮತ ಚಲಾಯಿಸಿದ್ದಲ್ಲದೆ, ಬೇರೊಂದು ಊರಿನ ವಿಳಾಸ ನೀಡಿ ಚುನಾವಣಾ ಆಯೋಗದಿಂದ ಪ್ರಯಾಣ ಭತ್ಯೆಯಂಥ ಸೌಕರ್ಯಗಳನ್ನು ಪಡೆದಿದ್ದಾರೆಂದು ರಾಜ್ಯ ಬಿಜೆಪಿಯ ನಿಯೋಗವೊಂದು ರಾಜ್ಯಪಾಲರಿಗೆ ಸೆಪ್ಟಂಬರ್ 1ರಂದು ದೂರು ನೀಡಿದೆ.
ಅನರ್ಹತೆ ಭೀತಿಯಲ್ಲಿ ತಿಮ್ಮಾಪುರ, ಸಚಿವ ಸ್ಥಾನ ಕೈತಪ್ಪುವ ಸಾಧ್ಯತೆ
ನಿಯೋಗದಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಮಾಜಿ ಉಪ ಮುಖ್ಯಮಂತ್ರಿ ಆರ್. ಅಶೋಕ್, ಮಾಜಿ ಸಚಿವೆ ಶೋಭಾ ಕರಂದ್ಲಾಜೆ ಮುಂತಾದವರು ಇದ್ದರು.
2015ರಲ್ಲಿ ನಡೆದಿದ್ದ ಬಿಬಿಎಂಪಿ ಚುನಾವಣೆಯಲ್ಲಿ, ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ನಿರ್ಧರಿಸಿದ್ದ ಕಾಂಗ್ರೆಸ್ ನ ಐವರು ಎಂಎಲ್ಸಿಗಳು ಬೆಂಗಳೂರಿನ ವಿಳಾಸ ನೀಡಿ ಬಿಬಿಎಂಪಿ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೊಂದಾಯಿಸಿ ಮತ ಚಲಾಯಿಸಿದ್ದರು. ಆದರೆ, ಟಿಎ, ಡಿಎ ಪಡೆಯುವ ವಿಚಾರದಲ್ಲಿ ತಮ್ಮ ಊರುಗಳ ವಿಳಾಸಗಳನ್ನು ನೀಡಿ ಲಕ್ಷಾಂತರ ರು.ಗಳಷ್ಟು ಟಿಎ, ಡಿಎಗಳನ್ನು ಪಡೆದಿದ್ದಾರೆಂದು ಬಿಬಿಎಂಪಿಯ ಆಯುಕ್ತರು ಚುನಾವಣಾ ಆಯೋಗಕ್ಕೆ ಇತ್ತೀಚೆಗೆ ವರದಿ ನೀಡಿದ್ದಾರೆ. ಈ ಐವರು ಕಾಂಗ್ರೆಸ್ ಎಂಎಲ್ ಸಿಗಳಲ್ಲಿ ಆರ್.ಬಿ. ತಿಮ್ಮಾಪುರ ಕೂಡಾ ಒಬ್ಬರು ಎಂದು ಆರೋಪಿಸಲಾಗಿದೆ.
ನೈತಿಕ ಅಧಿಕಾರವಿಲ್ಲ
ರಾಜಭವನದಿಂದ ಹೊರಬಂದ ನಂತರ, ಸುದ್ದಿಗಾರರೊಂದಿಗೆ ಮಾತನಾಡಿದ ಶೆಟ್ಟರ್, ''ಸುಳ್ಳು ದಾಖಲೆ, ಪ್ರಮಾಣ ಪತ್ರಗಳನ್ನು ನೀಡಿ, ಬಿಬಿಎಂಪಿ ಚುನಾವಣೆಯಲ್ಲಿ ಆರ್.ಬಿ. ತಿಮ್ಮಾಪುರ ಅವರು ಅಕ್ರಮ ಎಸಗಿದ್ದಾರೆ. ಇವರಿಗೆ ಸಚಿವರಾಗಲು ಯಾವುದೇ ನೈತಿಕ ಅಧಿಕಾರವಿಲ್ಲ'' ಎಂದರು.
ಮಾಡಿದ ತಪ್ಪನ್ನು ಸಿಎಂ ಒಪ್ಪಿಕೊಳ್ಳಲಿ
ಬಿಬಿಎಂಪಿ ಚುನಾವಣೆಯಲ್ಲಿನ ಎಲ್ಲಾ ಅಕ್ರಮಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ನೇತೃತ್ವ ವಹಿಸಿದ್ದರು. ಹಾಗಾಗಿ, ಈ ಅಕ್ರಮದಲ್ಲಿ ಅವರ ಪಾಲೂ ಇದೆ. ಅವರಿಗೆ ನೈತಿಕತೆ ಇದ್ದರೆ ತಮ್ಮ ತಪ್ಪುಗಳನ್ನು ಒಪ್ಪಿಕೊಳ್ಳಲಿ ಎಂದು ಜಗದೀಶ್ ಶೆಟ್ಟರ್ ಆಗ್ರಹಿಸಿದರು.
ಸರ್ಕಾರ ಆ ಸುಳ್ಳು ಭತ್ಯೆ ವಸೂಲಿ ಮಾಡಲಿ
ಸುದ್ದಿಗಾರರೊಂದಿಗೆ ಮಾತನಾಡಿದ ಆರ್. ಅಶೋಕ್, ''ತಪ್ಪು ವಿಳಾಸವನ್ನು ನೀಡುವ ಮೂಲಕ ಆಯೋಗದಿಂದ ಲಕ್ಷಾಂತರ ರು. ಗಳನ್ನು ಪ್ರಯಾಣ ಭತ್ಯೆ, ದೈನಂದಿನ ಖರ್ಚು ವೆಚ್ಛಗಳ ಭತ್ಯೆಗಳನ್ನು ಪಡೆದಿದ್ದಾರೆ. ಈ ಮೂಲಕ, ಜನರ ತೆರಿಗೆ ಹಣದಲ್ಲಿ ಲಕ್ಷಾಂತರ ರು.ಗಳನ್ನು ಲೂಟಿ ಮಾಡಿದ್ದಾರೆ. ಇದೆಲ್ಲವನ್ನೂ ಅವರಿಂದ ಸರ್ಕಾರ ವಸೂಲಿ ಮಾಡಬೇಕು ಎಂದು ಆಗ್ರಹಿಸಿದರು.
ತಪ್ಪು ಮಾಡದಿದ್ದರೆ ಪತ್ರವೇಕೆ?
ತಮ್ಮ ಮಾತಿನ ವೇಳೆ, ಮತ್ತೊಂದು ವಿಚಾರ ಹೇಳಿದ ಅಶೋಕ್, ''ಲಕ್ಷಾಂತರ ರು.ಗಳಷ್ಟು ಟಿಎ, ಡಿಎ ಪಡೆದಿದ್ದನ್ನು ಆರೋಪಿತ ಎಂಎಲ್ ಸಿಯೊಬ್ಬರು ಒಪ್ಪಿಕೊಂಡಿರುವ ಮಾಹಿತಿ ಇದೆ. ಅವರು ತಮ್ಮ ಲೆಟರ್ ಪ್ಯಾಡ್ ನಲ್ಲಿ ವಿಧಾನ ಪರಿಷತ್ ಸಭಾಪತಿಗೆ ಪತ್ರ ಬರೆದು ತಾವು ಅಕ್ರಮವಾಗಿ ಪಡೆದ ಟಿಎ, ಡಿಎಯನ್ನು ಹಿಂದಿರುಗಿಸುವುದಾಗಿ ಸಭಾಪತಿಗೆ ತಿಳಿಸಿದ್ದಾರೆ. ಇದು ಅವರ ಮೇಲಿನ ಆರೋಪವನ್ನು ಪುಷ್ಟೀಕರಿಸಿದೆ. ಅವರು ತಪ್ಪು ಮಾಡದಿದ್ದರೆ ಏಕೆ ಹಾಗೆ ಪತ್ರ ಬರೆಯುತ್ತಿದ್ದರು?'' ಎಂದು ಅಶೋಕ್ ಪ್ರಶ್ನಿಸಿದರು.