ಉ.ಕರ್ನಾಟಕ ಜಿಲ್ಲೆಗಳಲ್ಲಿ ಬಂದ್ ಯಶಸ್ವಿ, ಬೆಂಗಳೂರು ಮಿಶ್ರ, ಉಳಿದೆಡೆ ನೀರಸ
ಬೆಂಗಳೂರು, ಜನವರಿ 25: ಮಹದಾಯಿ ಯೋಜನೆ ವಿವಾದ ಬಗೆಹರಿಸಲು ಪ್ರಧಾನಿ ಮಧ್ಯಸ್ಥಿಕೆ ವಹಿಸುವಂತೆ ಒತ್ತಾಯಿಸಿ ಕನ್ನಡ ಸಂಘಟನೆಗಳ ಒಕ್ಕೂಟವು ಗುರುವಾರ ಕರೆನೀಡಿದ್ದ 'ಕರ್ನಾಟಕ ಬಂದ್'ಗೆ ರಾಜ್ಯದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಉತ್ತರ ಕರ್ನಾಟಕದ ಧಾರವಾಡ, ಗದಗ, ಹುಬ್ಬಳ್ಳಿ ನಗರಗಳಲ್ಲಿ ಬಂದ್ ಕಾವೇರಿತ್ತು. ಬೆಂಗಳೂರಿನಲ್ಲಿಯೂ ಬಂದ್ ಬಿಸಿ ಇತ್ತಾದರೂ ಹೊಟೆಲ್ಗಳು ತೆಗೆದಿತ್ತು, ವಾಹನ ಸಂಚಾರವೂ ಪೂರ್ಣ ಬಂದ್ ಆಗಿರಲಿಲ್ಲ. ಉಳಿದಂತೆ ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಗ್ರಾಮಾಂತರ ಜಿಲ್ಲೆಗಳಲ್ಲಿ ಬಂದ್ ಬಿಸಿ ತಾಗಿಯೇ ಇಲ್ಲ ಎನ್ನುವಷ್ಟು ನೀರಸ ಪ್ರತಿಕ್ರಿಯೆ ಇತ್ತು.
ಚಿತ್ರಗಳು: ಮಹದಾಯಿಗಾಗಿ ಹೋರಾಟ, ಕರ್ನಾಟಕ ಬಂದ್
ಉತ್ತರ ಕರ್ನಾಟಕ ಭಾಗದ ಹುಬ್ಬಳ್ಳಿ, ದಾರವಾಡ, ಗದಗದಲ್ಲಿ ಬಂದ್ ತೀವ್ರ ಕಾವು ಪಡೆದುಕೊಂಡಿತ್ತು. ಮೈಸೂರು ಭಾಗ, ಮಧ್ಯಕರ್ನಾಟಕ, ಕರಾವಳಿ ಕರ್ನಾಟಕ, ಹೈದ್ರಾಬಾದ್ ಕರ್ನಾಟಕ, ಮುಂಬೈ ಕರ್ನಾಟಕದಲ್ಲಿ ಬಂದ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಗೋವಾ ಗಡಿ ಭಾಗ ಹೊರತು ಪಡಿಸಿದರೆ ರಾಜ್ಯದ ಉಳಿದ ಗಡಿ ಭಾಗಗಳಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಬೆಂಗಳೂರಿನಲ್ಲಿ ಬೆಳಿಗ್ಗೆ 6 ಗಂಟೆಯಿಂದಲೇ ಜನರಿಗೆ ಬಂದ್ ಬಿಸಿ ತಟ್ಟಲಾರಂಭಿಸಿತು. ಜನಜೀವನವೂ ಭಾಗಶಃ ಅಸ್ತವ್ಯಸ್ತವಾಗಿತ್ತು. ಮಲ್ಲೇಶ್ವರದಲ್ಲಿ ಹೊಟೆಲ್ ಒಂದರ ಮೇಲೆ ಕಲ್ಲೂ ತೂರಾಟ ಮಾಡಲಾಗಿದೆ.
ಕನ್ನಡ ಸಂಘಟನೆಗಳ ಕಾರ್ಯಕರ್ತರು ಪುರಭವನ ವೃತ್ತದಿಂದ ಸ್ವಾತಂತ್ರ್ಯ ಉದ್ಯಾನದ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಪ್ರಧಾನಿ ನರೇಂದ್ರ ಮೋದಿಯವರ ಪ್ರತಿಕೃತಿ ದಹಿಸಿ, ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.
ಹುಬ್ಬಳ್ಳಿಯ ಚೆನ್ನಮ್ಮ ವೃತ್ತದಲ್ಲಿ ಹೋರಾಟಗಾರರು ಸೇರಿಕೊಂಡು 'ಕಳಸಾ' ಪದದ ಆಕೃತಿಯಲ್ಲಿ ಮಾನವ ಸರಪಳಿ ರಚನೆ ಮಾಡಿದರು. ಹೋಲ್ಡಿಂಗ್ಸ್ ಹಿಡಿದು ಕಳಸಾ ಪದ ಸೃಷ್ಟಿಸಿದ ಮಹದಾಯಿ ಹೋರಾಟಗಾರರು ಕೇಂದ್ರದ ವಿರುದ್ಧ ಪ್ರತಿಭಟನೆ ಮಾಡಿದರು. ಮಧ್ಯಸ್ಥಿಕೆ ವಹಿಸಿ ವಿವಾದ ಬಗೆಹರಿಸುವಂತೆ ಪ್ರಧಾನಿಗಳಿಗೆ ಒತ್ತಾಯ ಮಾಡಿದರು.
ಕರ್ನಾಟಕ ಬಂದ್: ಮಂಗಳೂರಿನಲ್ಲಿ 'ಕರವೇ' ಕಾರ್ಯಕರ್ತರ ಬೆವರಿಳಿಸಿದ 'ತುರವೇ'
ಚಿಕ್ಕಮಗಳೂರಿನಲ್ಲಿ ವಿವಿಧ ಕನ್ನಡ ಪರ ಸಂಘಟನೆಗಳಿಂದ ಉರುಳು ಸೇವೆ ಮಾಡಿ ಹಾಗೂ ತಲೆ ಬೋಳಿಸಿಕೊಂಡು ವಿಭಿನ್ನವಾಗಿ ಪ್ರತಿಭಟನೆ ಮಾಡಿದರು. ಚಿಕ್ಕಮಗಳೂರು ನಗರದ ಹನುಮಂತಪ್ಪ ವೃತ್ತದಲ್ಲಿ ಪ್ರತಿಭಟನೆ ಗಣಪತಿ ದೇವಾಲಯದಿಂದ ಹನುಮಂತಪ್ಪ ವೃತ್ತದವರೆಗೆ ಉರುಳು ಸೇವೆ ಮಾಡಿದರು.
ವಿಜಯಪುರ ಜಿಲ್ಲೆಯಲ್ಲಿ ಪ್ರತಿಭಟನಾಕಾರರು ರೈಲು ನಿಲ್ಲಿಸಿ ಪ್ರತಿಭಟನೆ ನಡೆಸಿದರು, ಪೊಲೀಸರು 15 ಜನ ಹೋರಾಟಗಗಾರರನ್ನು ಬಂಧಿಸಿ ಆ ನಂತರ ಬಿಡುಗಡೆ ಮಾಡಿದರು. ರಾಯಚೂರಿನಲ್ಲಿ ಪ್ರತಿಭಟನಾಕಾರರು, ಗೋವಾ ಮುಖ್ಯಮಂತ್ರಿ ಮನೋಹರ ಪರಿಕ್ಕರ್ ಹಾಗೂ ಪ್ರಧಾನಿ ಮೋದಿ ಅವರ ಅಣಕು ಶವಯಾತ್ರೆ ಮಾಡಿದರು.
ಮೈಸೂರಿನಲ್ಲಿ ಬಂದ್ ನಡುವೆಯೂ ಪರಿವರ್ತನಾ ಯಾತ್ರೆಗೆ ಉತ್ತಮ ಸಂಖ್ಯೆಯಲ್ಲಿ ಜನ ಸೇರಿದ್ದು ವಿಶೇಷ. ಪರಿವರ್ತನಾ ಯಾತ್ರೆ ನಡೆಯುತ್ತಿದ್ದ ಜಾಗದಿಂದ ಸ್ವಲ್ಪ ದೂರದಲ್ಲೇ ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ಮಾಡಿದವಾದರೂ ಸಮಾವೇಶದ ಮೇಲೆ ಅದು ಪರಿಣಾಮ ಬೀರಲಿಲ್ಲ.
ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಕಲ್ಲು ತೂರಾಟ ಪ್ರಕರಣಗಳನ್ನು ನಡೆದಿವೆ, ಟೈರ್ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಲಾಗಿದೆ ಆದರೆ ಯಾವುದೇ ಅಹಿತಕರ ಘಟನೆಗಳು ನಡೆದ ಬಗ್ಗೆ ವರದಿಯಾಗಿಲ್ಲ.
ಸಂಜೆ ಮೇಲೆ ರಾಜ್ಯಾದ್ಯಂತ ಜನಜೀವನ ಸಾಮಾನ್ಯ ಸ್ಥಿತಿಗೆ ಬಂತು, ಸರ್ಕಾರಿ ಬಸ್ ಸಂಚಾರ ಎಂದಿನಂತೆ ಆರಂಭವಾಯಿತು.