ನಾಡಗೀತೆ 2 ನಿಮಿಷ 50 ಸೆಕೆಂಡ್ ಹಾಡಿದರೆ ಸಾಕು: ತಜ್ಞರ ನಿರ್ಧಾರ
ಬೆಂಗಳೂರು, ನವೆಂಬರ್ 15: ರಾಷ್ಟ್ರಕವಿ ಕುವೆಂಪು ರಚಿತ ಜೈ ಭಾರತ ಜನನಿಯ ತನುಜಾತೆ ನಾಡಗೀತೆಯನ್ನು ಯಾವುದೇ ಧಾಟಿಯಲ್ಲಿ ಹಾಡಿದರೂ ಎರಡೂವರೆ ನಿಮಿಷದಲ್ಲಿ ಮುಗಿಸಬೇಕು ಎಂಬ ಪ್ರಸ್ತಾವನೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ಸರ್ಕಾರಕ್ಕೆ ಸಲ್ಲಿಸಲು ನಿರ್ಧರಿಸಿದೆ.
ಈಗಾಗಲೇ ಸ್ವೀಕೃತವಾದ ನಾಡಗೀತೆಯನ್ನು ಅಪಭ್ರಂಶವಿಲ್ಲದೇ, ಯಾವುದೇ ಪದಗಳನ್ನು ತೆಗೆಯದೆ ಎರಡೂವರೆ ನಿಮಿಷದಲ್ಲಿ ಹಾಡಬಹುದು ಎಂಬುದನ್ನು ಬುಧವಾರ ನಡೆದ ತಜ್ಞರ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಕುವೆಂಪು, ನಾಡಗೀತೆಯನ್ನು ಟೀಕಿಸಿದ ಸಾಹಿತಿ ಪಾಟೀಲ ಪುಟ್ಟಪ್ಪ
ಧಾಟಿ ಯಾವುದು: 2003ರ ಜನವರಿ 7ರಂದು ಕುವೆಂಪು ರಚಿತ ಕವನವನ್ನು ನಾಡಗೀತೆಯಾಗಿ ಅಂಗೀಕರಿಸಿ ಸರ್ಕಾರ ಆದೇಶ ಹೊರಡಿಸಿತ್ತು. ನಂತರ ಹಿರಿಯ ಸಾಹಿತಿ ದಿ ಜಿಎಸ್ ಶಿವರುದ್ರಪ್ಪ ಅವರ ಅಧ್ಯಕ್ಷತೆಯಲ್ಲಿ ಸಂಗೀತ ನಿರ್ದೇಶಕ ಎಚ್ಕೆ ನಾರಾಯಣ, ವಸಂತ ಕನಕಾಪುರ, ಡಾ ಸಿದ್ದಲಿಂಗಯ್ಯ ಅವರ ಸಮಿತಿ ರಚಿಸಿ ಧಾಟಿ ಯಾವುದಿರಬೇಕು ಎಂಬುದರ ವರದಿ ನೀಡುವಂತೆ ಸರ್ಕಾರ ಸೂಚಿಸಿತ್ತು.
ಬಳಿಕ 2013ರಲ್ಲಿ ವಸಂತ ಕನಕಾಪುರ ಅವರ ಅಧ್ಯಕ್ಷತೆಯಲ್ಲಿ ಮತ್ತೊಂದು ಸಮಿತಿ ರಚನೆ ಮಾಡಿತ್ತು, ಆದರೆ ವರದಿ ಸಲ್ಲಿಸುವುದಕ್ಕೂ ಮೊದಲೇ ಕನಕಾಪು ಅವರು ನಿಧನ ಹೊಂದಿದರು. ಬಳಿಕ ಚೆನ್ನವೀರ ಕಣವಿ ಅವರ ಅಧ್ಯಕ್ಷತೆಯಲ್ಲಿ ಸರ್ಕಾರ ಸಮಿತಿ ರಚಿಸಿತ್ತು .2014ರ ಮೇ ತಿಂಗಳಲ್ಲಿ ಸಮಿತಿ ವರದಿ ನೀಡಿತ್ತು. ಆದರೆ ಇದುವರೆಗೂ ಅದು ಅನುಷ್ಠಾನಕ್ಕೆ ಬಂದಿಲ್ಲ.
ನಾಡಗೀತೆ ಧಾಟಿ ಹೇಗಿರಬೇಕು? ನವೆಂಬರ್ 14ಕ್ಕೆ ಮಹತ್ವದ ಸಭೆ
ಈ ಕುರಿತು ಬುಧವಾರ ಬೆಳಗ್ಗೆ ನಡೆದ ಸಭೆಯಲ್ಲಿ ಪ್ರೊ. ಚಂದ್ರಶೇಖರ ಪಾಟೀಲ, ನಾಡೋಜ ಕಮಲಾ ಹಂಪನಾ, ವೈಕೆ ಮುದ್ದುಕೃಷ್ಣ, ಕಿಕ್ಕೇರಿ ಶ್ರೀನಿವಾಸ್ ಸಮ್ಮುಖದಲ್ಲಿ ನಾಡಗೀತೆಯ ಅವಧಿ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಯಿತು.