ಸುದ್ದಿ ವಾಹಿನಿಗಳ ಮೇಲೆ ಗರಂ ಆದ ನಟಿ ಶೃತಿ ಹರಿಹರನ್ !
ಬೆಂಗಳೂರು, ಮೇ. 02: ಖ್ಯಾತ ನಟಿ ಶೃತಿ ಹರಿಹರನ್ ಕನ್ನಡ ಸುದ್ದಿ ವಾಹಿನಿಗಳ ವಿರುದ್ಧ ಗರಂ ಆಗಿದ್ದಾಳೆ. ಜನರ ಹಾದಿ ತಪ್ಪಿಸುವ ಕೆಲಸ ಮಾಡಬೇಡಿ ಎಂದು ರೇಗಾಡಿದ್ದಾರೆ. ಕೊರೊನಾ ಸೋಂಕಿನಿಂದ ಬಳಲುತ್ತಿರುವ ಶೃತಿ ಹರಿಹರನ್ ಕುಟುಂಬ ಬೆಡ್ ಸಿಗದೇ ಕಂಗಾಲಾಗಿದೆ ಎಂಬ ಸುದ್ದಿ ಭಾರೀ ಚರ್ಚೆಗೆ ನಾಂದಿ ಹಾಡಿತ್ತು. ಈ ಕುರಿತು ತನ್ನ ಇನ್ಸ್ಟಾಗ್ರಾಮ್ನಲ್ಲಿ ಶೃತಿ ಹರಿಹರನ್ ಬರೆದುಕೊಳ್ಳುವ ಮೂಲಕ ಸಿಟ್ಟು ಹೊರ ಹಾಕಿದ್ದಾರೆ.
ನನ್ನ ಕುಟುಂಬ, ನನ್ನ ಸ್ನೇಹಿತರ ಕುಟುಂಬ ಸುರಕ್ಷಿತವಾಗಿಯೇ ಇದೆ. ಕೆಲವು ಅಗತ್ಯ ಇರುವರಿಗೆ ಸಹಾಯ ಮಾಡುತ್ತಿದ್ದೇನೆ. ಶೃತಿ ಹರಿಹರನ್ ಕುಟುಂಬಕ್ಕೆ ಬೆಡ್ ಸಿಕ್ಕಿಲ್ಲ, ಕೊರೊನಾ ಸೋಂಕಿನಿಂದ ಪರದಾಡುತ್ತಿದ್ದಾರೆ ಎಂದೆಲ್ಲಾ ಸುದ್ದಿ ಹಬ್ಬಿಸಬೇಡಿ. ಎಮ್ಮ ಎಲ್ಲಾ ಕುಟುಂಬ ಚೆನ್ನಾಗಿಯೇ ಇವೆ. ದೇವರ ದಯೆಯಿಂದ ಎಲ್ಲರೂ ಕ್ಷೇಮವಾಗಿದ್ದಾರೆ. ಆದರೆ ಇಲ್ಲಿಯವರೆಗೂ ಕೊರೊನಾ ಹೆಸರಿನಲ್ಲಿ ಭಯ ಹುಟ್ಟಿಸಿ ಜನರ ಹಾದಿ ತಪ್ಪಿಸಿದ್ದು ಸಾಕು. ಇನ್ನು ಮುಂದೆ ಈ ರೀತಿ ಸುಳ್ಳು ಸುದ್ದಿ ಮಾಡಿ ಭಯ ಹುಟ್ಟಿಸುವುದನ್ನು ಬಿಡಿ ಎಂದು ಮನವಿ ಮಾಡಿದ್ದಾರೆ. ಅಲ್ಲದೇ ತನ್ನ ಪೋಸ್ಟ್ನ್ನು ಕೆಲವು ಕನ್ನಡ ಸುದ್ದಿ ವಾಹಿನಿಗಳಿಗೆ ಟ್ಯಾಗ್ ಮಾಡಿದ್ದಾರೆ.
ಅರ್ಜುನ್ ಸರ್ಜಾ ವಿರುದ್ಧ ಮೀಟೂ ಆರೋಪ ಹೊರಿಸಿದ್ದ ಶೃತಿ ಹರಿಹರನ್ ಆನಂತರ ಕನ್ನಡದ ಸಿನಿಮಾ ರಂಗದಲ್ಲಿ ಎಲ್ಲೂ ನಟನೆ ಮಾಡಿರಲಿಲ್ಲ. ಇತ್ತೀಚೆಗೆ ಹೆಣ್ಣು ಮಗುವಿಗೆ ಶೃತಿ ಹರಿಹರನ್ ಜನ್ಮ ನೀಡಿದ್ದರಿಂದ ಸಿನಿಮಾ ರಂಗದಿಂದ ದೂರ ಉಳಿದಿದ್ದರು.