ಶಾಸಕ ಸ್ಥಾನಕ್ಕೆ ಬಿ ಶ್ರೀರಾಮುಲು ರಾಜೀನಾಮೆ
ಇಂದು ಬೆಳಗ್ಗೆ ವಿಧಾನಸೌಧದಲ್ಲಿ ವಿಧಾನ ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಅವರನ್ನು ಭೇಟಿಯಾದ ರಾಮುಲು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರು. ನಂತರ ಸುದ್ದಿಗಾರೊಂದಿಗೆ ಮಾತನಾಡಿದ ಅವರು ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿರುವುದಾಗಿ ಘೋಷಿಸಿದರು.
ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರನ್ನು ವಿಧಾನಸೌಧದ ಮೊದಲ ಮಹಡಿಯಲ್ಲಿರುವ ಅವರ ಕಚೇರಿಯಲ್ಲಿ ಭೇಟಿ ಮಾಡಿದ ರಾಮುಲು ಬೆಳಗ್ಗೆ 10.40ಕ್ಕೆ ತಮ್ಮ ತ್ಯಾಗಪತ್ರ ಸಲ್ಲಿಸಿದರು. ದೇಶದ ಭವ್ಯ ಭವಿಷ್ಯಕ್ಕಾಗಿ ತಾವು ಬಿಜೆಪಿ ಸೇರುತ್ತಿರುವುದಾಗಿಯೂ, ಬಿಜೆಪಿ ಪ್ರಧಾನಿ ನರೇಂದ್ರ ಮೋದಿ ಅವರ ಕೈಬಲಪಡಿಸುವುದಾಗಿಯೂ ಶ್ರೀರಾಮುಲು ಇದೇ ಸಂದರ್ಭದಲ್ಲಿ ಹೇಳಿದರು.
ಈ ಮಧ್ಯೆ, ರೆಡ್ಡಿ ಬ್ರದರ್ಸ್ ಪೈಕಿ ಕೆಎಂಎಫ್ ಅಧ್ಯಕ್ಷ ಜಿ ಸೋಮಶೇಖರ ರೆಡ್ಡಿ, ಬಿಜೆಪಿ ಶಾಸಕ ಕರುಣಾಕರ ರೆಡ್ಡಿ, ಸಂಸದೆ ಜೆ ಶಾಂತಾ ಅವರುಗಳ ನಡೆಯೇನು? ಬಿಎಸ್ಸಾರ್ ಕಾಂಗ್ರೆಸ್ ಪಕ್ಷದ ಇತರೆ ಶಾಸಕರ ಮುಂದಿನ ನಡೆಯೇನು? ಎಂಬುದು ನಿಗೂಢವಾಗಿದೆ.
ಇತ್ತೀಚೆಗಷ್ಟೇ ಶ್ರೀರಾಮುಲು ಅವರು ಬಿಎಸ್ಸಾರ್ ಕಾಂಗ್ರೆಸ್ ಪಕ್ಷದಿಂದ ಭಾರತೀಯ ಜನತಾ ಪಕ್ಷವನ್ನ ಸೇರಿಕೊಂಡಿದ್ದರು. ಭಾರತೀಯ ಜನತಾ ಪಕ್ಷದ ಮೂಲಕವೇ ರಾಜಕೀಯ ಪ್ರವೇಶ ಮಾಡಿದ್ದ ಮಾಜಿ ಸಚಿವ ಶ್ರೀರಾಮುಲು ಅವರು ರೆಡ್ಡಿ ಸಹೋದರರು ಜೈಲಿಗೆ ಹೋದ ಬಳಿಕ ಬಿಜೆಪಿಯಿಂದ ಸಿಡಿದು ಬಿಎಸ್ಸಾರ್ ಕಾಂಗ್ರೆಸ್ ಹುಟ್ಟುಹಾಕಿದ್ದರು.
ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಶ್ರೀರಾಮುಲು ಅವರನ್ನು ಬಿಜೆಪಿ ತನ್ನ ಪಕ್ಷಕ್ಕೆ ಆಹ್ವಾನಿಸಿತ್ತು. ರಾಮುಲು ಸಹ ತಾವು ಬಿಜೆಪಿಗೆ ಮರಳುವುದನ್ನು ಬಯಸಿದ್ದರು. ಆದರೆ ಕೇಂದ್ರ ನಾಯಕಿ ಸುಷ್ಮಾ ಸ್ವರಾಜ್ ಅವರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಆದಾಗ್ಯೂ, ಶ್ರೀರಾಮುಲು ಅವರನ್ನು ಸೇರಿಸಿಕೊಳ್ಳಲು ನಿರ್ಧರಿಸಿದ ಬಿಜೆಪಿ ಅವರಿಗೆ ಬಳ್ಳಾರಿ ಟಿಕೆಟ್ ಸಹ ನೀಡಿದೆ.