ಲೋಕಾರ್ಪಣೆಗೊಳ್ಳುತ್ತಿದೆ ಶ್ರೀರಾಮಪುರ ಅಂಡರ್ಪಾಸ್, ಕೇವಲ 11 ವರ್ಷ ತಡವಾಗಿ!
ಬೆಂಗಳೂರು, ಮಾರ್ಚ್ 08: ಸರ್ಕಾರಿ ಪ್ರಯೋಜಿತ ಕಾಮಗಾರಿಗಳು ಧಾರವಾಹಿಗಳಂತೆ ಎಂದಿಗೂ ಬೇಗನೆ ಮುಗಿಯುವುದಿಲ್ಲ. ವರ್ಷ ಎಂದದ್ದು ಎರಡು-ಮೂರು ವರ್ಷ ದಾಟಿಬಿಡುತ್ತದೆ.
ಆದರೆ ಬೆಂಗಳೂರಿನ ಶ್ರೀರಾಮಪುರ ಅಂಡರ್ಪಾಸ್ ಬರೋಬ್ಬರಿ 11 ವರ್ಷ ತಡವಾಗಿ ಆರಂಭವಾಗುತ್ತಿದೆ. 11 ವರ್ಷದ ಹಿಂದೆ ಪ್ರಾರಂಭವಾದ ಕಾಮಗಾರಿ ಈಗಷ್ಟೆ ಮುಗಿದಿದ್ದು, ಲೋಕಾರ್ಪಣೆಗೊಳ್ಳಲು ತಯಾರಾಗಿದೆ.
ರಾಜಾಜಿನಗರ, ಮಲ್ಲೇಶ್ವರ, ಗಾಯತ್ರಿನಗರಗಳಿಗೆ ಸಂಪರ್ಕ ಕಲ್ಪಿಸುವ ಶ್ರೀರಾಮಪುರ ರೈಲ್ವೆ ಅಂಡರ್ಪಾಸ್ 11 ವರ್ಷಗಳ ವರೆಗೆ 'ಕಾಮಗಾರಿ ಪ್ರಗತಿಯಲ್ಲಿದೆ' ಬೋರ್ಡು ನೇತುಹಾಕಿಕೊಂಡಿತ್ತು. ಆದರೆ ಈಗ ಅದು ಲೋಕಾಪರ್ಪಣೆ ಗೊಳ್ಳಲು ಸರ್ವ ಸಜ್ಜುಗೊಳ್ಳುತ್ತಿದೆ. ಇದರ ಶಂಕುಸ್ಥಾಪನೆ ಆಗಿದ್ದು 2007 ರಲ್ಲಿ.
ಜಮೀನು ವಿವಾದದಿಂದಾಗಿ ಶಂಕುಸ್ಥಾಪನೆಗೊಂಡು ಕಾಮಗಾರಿ ಪ್ರಾರಂಭವಾದ ಕೆಲವೇ ತಿಂಗಳುಗಳ ನಂತರ ಕಾಮಗಾರಿ ಸ್ಥಗಿತಗೊಂಡಿತು. ಮಂತ್ರಿ ಡೆವಲಪರ್ಸ್, ಬಿಬಿಎಂಪಿ ಮತ್ತು ರೈಲ್ವೆ ಇಲಾಖೆ ಮಧ್ಯೆ ಈ ಜಮೀನು ವಿವಾದ ನಡೆದು ಕೊನೆಗೆ ಹತ್ತು ವರ್ಷದ ನಂತರ ಇತ್ಯರ್ಥವಾಗಿದೆ.
ಕಾಮಗಾರಿ ತಡವಾಗಿದ್ದಕ್ಕೆ ಇಲ್ಲಿನ ಸ್ಥಳೀಯ ಜನರು ಹತ್ತು ವರ್ಷಗಳಿಂದ ಪ್ರತಿದಿನ ತೊಂದರೆ ಅನುಭವಿಸುವಂತಾಗಿತ್ತು. ಕಾಮಗಾರಿ ಪ್ರಾರಂಭವಾದಾಗ ಇದನ್ನು ಸಂಚಾರ ದಟ್ಟಣೆ ಕಡಿಮೆಗೊಳಿಸುವ ಉದ್ದೇಶದಿಂದ ನಿರ್ಮಿಸಲು ಉದ್ದೇಶಿಸಲಾಗಿತ್ತು. ಈಗ ಇದರ ಮೇಲೆಯೇ ಮೆಟ್ರೋ ಹಳಿ ಹಾದು ಹೋಗಿದೆ. ಈಗ ಕೆಲವು ಮಾರ್ಪಾಡುಗಳೊಂದಿಗೆ ಅಂಡರ್ಪಾಸ್ ಅನ್ನು ಪೂರ್ತಿಗೊಳಿಸಲಾಗಿದೆ.