ಪಕ್ಷಾಂತರಕ್ಕೆ ಅಡಿಪಾಯ ಹಾಕಿದ್ದೇ ಕುಮಾರಸ್ವಾಮಿ: ಕೆಂಗಲ್ ಶ್ರೀಪಾದ
ಬೆಂಗಳೂರು ನವೆಂಬರ್ 28: ರಾಜ್ಯದಲ್ಲಿ ಕಾಂಗ್ರೆಸ್ -ಜೆಡಿಎಸ್ ಸರ್ಕಾರವನ್ನು ಪತನಗೊಳಿಸಿ ಪಕ್ಷಾಂತರಕ್ಕೆ ನಾಂದಿ ಹಾಡಿದವರೇ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಎಂದು ಪ್ರದೇಶ ಕಾಂಗ್ರೆಸ್ ಸಮಿತಿ ಮಾಜಿ ವಕ್ತಾರರಾದ ಶ್ರೀಪಾದ ರೇಣು ಅವರು ನೇರ ಆರೋಪ ಮಾಡಿದ್ದಾರೆ.
ಬೆಂಗಳೂರಿನಲ್ಲಿಂದು ಪತ್ರಿಕಾ ಪ್ರಕಟಣೆಯನ್ನು ಬಿಡುಗಡೆ ಮಾಡಿರುವ ಅವರು, ಈ ಹಿಂದೆ ಧರ್ಮಸಿಂಗ್ ನೇತೃತ್ವದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಸುಗಮವಾಗಿ ಆಡಳಿತ ನಡೆಸುತ್ತಿತ್ತು. ಆದರೆ ಅಧಿಕಾರದ ಆಸೆಯಿಂದ ಆ ಸರ್ಕಾರವನ್ನೇ ಅಸ್ಥಿರಗೊಳಿಸಿ ಪತನವಾಗುವಂತೆಯೂ ಮಾಡಿದ ಕೀರ್ತಿ ಕುಮಾರಸ್ವಾಮಿಯವರಿಗೆ ಸಲ್ಲುತ್ತದೆ ಎಂದು ವ್ಯಂಗ್ಯವಾಡಿದರು.
ನಾರಾಯಣಗೌಡ ಬರೆದ ಪತ್ರ ಓದಿ ಕಣ್ಣೀರಿಟ್ಟ ಕುಮಾರಸ್ವಾಮಿ
ಧರ್ಮಸಿಂಗ್ ಸರ್ಕಾರ ಪತನವಾದ ನಂತರ ಬಿಜೆಪಿ ಜತೆ ಸೇರಿ ಸರ್ಕಾರ ರಚನೆ ಮಾಡುವುದು ಬೇಡ ಎಂದು ಜೆಡಿಎಸ್ ತಾಕೀತು ಮಾಡಿದರೂ ಮತ್ತು ಪಕ್ಷದ ವರಿಷ್ಠರಾದ ಎಚ್.ಡಿ.ದೇವೇಗೌಡ ಅವರು ಹೇಳಿದರೂ ಕೇಳದೇ ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರವನ್ನು ರಚಿಸಿದ್ದ ಕುಮಾರಸ್ವಾಮಿಯವರೇ ಮೊದಲ ಅನರ್ಹ ಶಾಸಕರೆನಿಸಿಕೊಂಡಿದ್ದರು ಎಂದು ಶ್ರೀಪಾದ ರೇಣು ವಾಗ್ದಾಳಿ ನಡೆಸಿದರು.
ಪಕ್ಷ ಅವರನ್ನು ಶಾಸಕ ಸ್ಥಾನದಿಂದ ಅಮಾನತು ಮಾಡಿದ್ದರೂ ಅಂದಿನ ಸ್ಪೀಕರ್ ಮೇಲೆ ಪ್ರಭಾವ ಬೀರಿ ಅನರ್ಹತೆಯಿಂದ ಪಾರಾಗಿದ್ದ ಕುಮಾರಸ್ವಾಮಿ, ಅಂದು ಹಿಂದುಳಿದ ವರ್ಗದ ಧರ್ಮಸಿಂಗ್ ಮತ್ತು ಲಿಂಗಾಯತ ಸಮುದಾಯದ ನಾಯಕರಾದ ಎಂ.ಪಿ.ಪ್ರಕಾಶ್ ಅವರಿಗೆ ರಾಜಕೀಯವಾಗಿ ವಂಚನೆ ಮಾಡಿದ್ದನ್ನು ಯಾರೂ ಮರೆತಿಲ್ಲ ಎಂದು ಮೂದಲಿಸಿದರು.
ಈ ಮೂಲಕ ಕುಮಾರಸ್ವಾಮಿಯವರು ಜಾತ್ಯತೀತ ತತ್ತ್ವಗಳಿಗೆ ತಿಲಾಂಜಲಿ ಇಟ್ಟಿದ್ದರು. ಇದಾದ ಬಳಿಕವೂ ಕಾಂಗ್ರೆಸ್ ಪಕ್ಷದ ನಾಯಕರು ಕೋಮುವಾದಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಬೇಕೆಂಬ ಕಾರಣಕ್ಕೆ ಕುಮಾರಸ್ವಾಮಿಯವರಿಗೆ ಮುಖ್ಯಮಂತ್ರಿ ಪದವಿಯನ್ನು ನೀಡಿದರು. ಆದರೆ, ಇದೇ ಕುಮಾರಸ್ವಾಮಿಯವರು ಇಂದು ಬಿಜೆಪಿ ಸರ್ಕಾರವನ್ನು ಉರುಳಲು ಬಿಡುವುದಿಲ್ಲ ಎಂದು ಹೇಳುವ ಮೂಲಕ ಮತ್ತೊಮ್ಮೆ ಜಾತ್ಯತೀತ ತತ್ತ್ವಗಳನ್ನು ಗಾಳಿಗೆ ತೂರಿದ್ದಾರೆ. ಈ ಮೂಲಕ ಢೋಂಗಿ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಕುಮಾರಸ್ವಾಮಿ ಕಣ್ಣೀರಿಗೆ ನಾರಾಯಣ ಗೌಡ ಹೇಳಿದ್ದೇನು?
ಈ ಹಿನ್ನೆಲೆಯಲ್ಲಿ ಮತ ವಿಭಜನೆ ಮಾಡಲು ಪ್ರಯತ್ನಿಸುತ್ತಿರುವ ಜೆಡಿಎಸ್ ನ ಹುನ್ನಾರಕ್ಕೆ ಬೆಲೆ ಕೊಡದೇ ಜಾತ್ಯತೀತ ತತ್ವ್ತಗಳಿಗೆ ಬೆಲೆ ಕೊಡುವ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸುವಂತೆ ಮತದಾರರಲ್ಲಿ ಮನವಿ ಮಾಡಿದರು.