ರಂಗಶಂಕರದಲ್ಲಿ ಆಗಸ್ಟ್ 5ಕ್ಕೆ ಶ್ರೀನಿವಾಸ ವೈದ್ಯ ಬರಹ ಆಧರಿಸಿದ ನಾಟಕ
ಬೆಂಗಳೂರು, ಆಗಸ್ಟ್ 2 : ಇದೇ ತಿಂಗಳ 5ನೇ ತಾರೀಕಿನ ಭಾನುವಾರ ಮಧ್ಯಾಹ್ನ 3.30 ಮತ್ತು ರಾತ್ರಿ 7.30ಕ್ಕೆ ಗಂಟೆಗೆ ಬೆಂಗಳೂರಿನ ರಂಗಶಂಕರದಲ್ಲಿ ರಂಗವಲ್ಲಿ ತಂಡದ ನೂತನ ರಂಗಪ್ರಯೋಗ, ಸಾಹಿತಿ ಶ್ರೀನಿವಾಸ ವೈದ್ಯ ಅವರ ಬರಹಗಳನ್ನು ಆಧರಿಸಿದ ಪಾರ್ಶ್ವಸಂಗೀತ ನಾಟಕದ ಪ್ರದರ್ಶನವಿದೆ.
ರಂಗಾಯಣದ ಹಿರಿಯ ಕಲಾವಿದರಾದ ಪ್ರಶಾಂತ್ ಹಿರೇಮಠ ಈ ನಾಟಕದ ನಿರ್ದೇಶಕರು. ಪಾರ್ಶ್ವಸಂಗೀತ ನಾಟಕವು 1940ರ ದಶಕದಿಂದ 1970ರ ದಶಕಗಳವರೆಗಿನ, ಆದರೆ ಇಂದಿಗೂ ಜನಮಾನಸದಲ್ಲಿ ಉಳಿದಿರುವ ಹಿಂದಿ ಚಿತ್ರಗೀತೆಗಳೊಂದಿಗಿನ ನಮ್ಮ ಅವಿನಾಭಾವ ಸಂಬಂಧವನ್ನು ತೆರೆದಿಡುತ್ತದೆ.
ಮುನಿ, ಮಂದಾಕಿನಿ ಹೊಯ್ದಾಟದ ಬದುಕು ತೆರೆದಿಡುವ ಮೋಕ್ಷ-ಮೌನಿ
ಅಂದಿನ ಕಾಲದ ಅದ್ಭುತ ಹಾಡುಗಳು, ಸಂಗೀತ ನಮ್ಮನ್ನು ಬೇರೊಂದು ಲೋಕಕ್ಕೆ ಕರೆದೊಯ್ಯುತ್ತದೆ. ಹಿಂದಿ ಗಾನಲೋಕದಲ್ಲಿ ದಂತಕತೆಗಳೆನಿಸಿದ ಕೆ.ಎಲ್.ಸೈಗಲ್, ತಲತ್ ಮಹಮೂದ್, ಮಹಮದ್ ರಫಿ, ಕಿಶೋರ್ ಕುಮಾರ್, ಶಂಶಾದ್ ಬೇಗಂ, ಲತಾ ಮಂಗೇಶ್ಕರ್, ಮನ್ನಾಡೇ ಮುಂತಾದವರ ಸುಶ್ರಾವ್ಯ ಕಂಠ ನಮ್ಮ ಹೃದಯದ ತಂತಿಗಳನ್ನು ಮೀಟಿ ಭಾವತರಂಗಗಳನನ್ನು ಎಬ್ಬಿಸುವ ಪರಿಯನ್ನು ಈ ನಾಟಕದ ಮೂಲಕ ಕಟ್ಟಿಕೊಡಲಾಗಿದೆ.
ಈ ನಾಟಕದ ನಿರೂಪಕ ತನ್ನ ಬಾಲ್ಯದ ಅನುಭವದ ಮೂಲಕ ಆ ಕಾಲದ ಹಿಂದಿ ಚಿತ್ರ ಸಂಗೀತದ ಸುವರ್ಣ ಯುಗವನ್ನು ನೆನಪಿಸಿಕೊಳ್ಳುತ್ತಾನೆ. ಅಪ್ರತಿಮ ಚಿತ್ರಪ್ರೇಮಿಯಾದ ತನ್ನ ಚಿಕ್ಕಪ್ಪನ ಜೀವನಗಾಥೆಯನ್ನು ಪ್ರೇಕ್ಷಕರೆದುರು ಹರವಿಡುತ್ತಾನೆ.
25ಕ್ಕೂ ಹೆಚ್ಚು ಕಲಾವಿದರು ಅಭಿನಯಿಸಿರುವ ಈ ನಾಟಕದ ರಂಗರೂಪ- ಬಿ.ಪಿ.ಅರುಣ್. ಸಂಗೀತ ನಿರ್ವಹಣೆ -ವಿಶ್ವಾಸ್ ಕೃಷ್ಣ, ರಂಗವಿನ್ಯಾಸ-ಎಚ್.ಕೆ.ದ್ವಾರಕಾನಾಥ್, ಬೆಳಕಿನ ವಿನ್ಯಾಸ-ಕೃಷ್ಣಕುಮಾರ್ ನಾರ್ಣಕಜೆ, ವಸ್ತ್ರವಿನ್ಯಾಸ-ನಂದಿನಿ ಕೆ.ಆರ್., ನೃತ್ಯಸಂಯೋಜನೆ-ಕಾರ್ತಿಕ್ ಉಪಮನ್ಯು, ರಂಗನಿರ್ವಹಣೆ-ಸೀಮಂತಿನಿ ಬಿ., ಸಹ-ನಿರ್ದೇಶನ ಮಹೇಶ್ ಕುಮಾರ್.