ಭೂಹಗರಣ: ಅಶೋಕ್ ವಿರುದ್ಧ ಹಿರೇಮಠ್ ಹೈಕೋರ್ಟಿಗೆ
ಬೆಂಗಳೂರು, ಏಪ್ರಿಲ್ 3: ಲೋಕಸಭಾ ಚುನಾವಣೆ ವೇಳೆ ಬೆಂಗಳೂರಿನ ಹೊಣೆ ಹೊತ್ತು ತಮ್ಮ ಪಕ್ಷವನ್ನು ಅಧಿಕಾರಕ್ಕೆ ತರಲು ಪ್ರಯತ್ನಿಸುತ್ತಿರುವ ಬಿಜೆಪಿ ಶಾಸಕ, ಮಾಜಿ ಗೃಹ ಸಚಿವ ಆರ್ ಅಶೋಕ್ ಅವರತ್ತ ಸಮಾಜ ಪರಿವರ್ತನ ಸಮುದಾಯದ ಮುಖಂಡ ಎಸ್ಆರ್ ಹಿರೇಮಠ ಅವರು ಭ್ರಷ್ಟಾಚಾರ ವಿರೋಧಿ ಅಸ್ತ್ರ ಝಳಪಿಸಿದ್ದಾರೆ.
'ಬಿಜೆಪಿಯ ಮಾಜಿ ಉಪ ಮುಖ್ಯಮಂತ್ರಿ ಅಶೋಕ್ ಅವರು ತಮ್ಮ ಅಧಿಕಾರಾವಧಿಯಲ್ಲಿ ಮಾಜಿ ಮೇಯರ್ ಡಿ ವೆಂಕಟೇಶ ಮೂರ್ತಿ ಅವರು ಅಕ್ರಮವಾಗಿ ಕಬಳಿಸಿದ್ದ 8 ಎಕರೆ ಜಮೀನನ್ನು ಕಾನೂನು ಬಾಹಿರವಾಗಿ ಸಕ್ರಮಗೊಳಿಸುವ ನಿರ್ಧಾರ ಕೈಗೊಂಡಿದ್ದರು. ಈ ಕುರಿತು ಸಿಬಿಐ ತನಿಖೆ ನಡೆಸಬೇಕು' ಎಂದು ಹಿರೇಮಠ ಅವರು ಹೈಕೋರ್ಟಿಗೆ ಬುಧವಾರ ಮನವಿ ಸಲ್ಲಿಸಿದ್ದಾರೆ. ವಿಚಾರಣೆಯನ್ನು ಜೂನ್ 6ಕ್ಕೆ ಮುಂದೂಡಲಾಗಿದೆ.
ಬೆಂಗಳೂರು ದಕ್ಷಿಣ ತಾಲ್ಲೂಕಿನ ಉತ್ತರಹಳ್ಳಿ ವ್ಯಾಪ್ತಿಯ ಸೋಮನಹಳ್ಳಿಯಲ್ಲಿ ವೆಂಕಟೇಶಮೂರ್ತಿ ಮತ್ತು ಅವರ ಪತ್ನಿ ತಲಾ 4 (ಒಟ್ಟು 8) ಎಕರೆ ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿಕೊಂಡರು. ಬಳಿಕ ತಮ್ಮದೇ ಪಕ್ಷ ಅಧಿಕಾರದಲ್ಲಿರುವುದರಿಂದ 'ತಾವು ಜಮೀನುರಹಿತ ಕಾರ್ಮಿಕರು ಎಂದು ಹೇಳಿಕೊಂಡು, ಒತ್ತುವರಿಯನ್ನು ಸಕ್ರಮಗೊಳಿಸಬೇಕು' ಎಂದು ಅವರು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು.
ಅದರಂತೆ ಅಶೋಕ್ ನೇತೃತ್ವದ ಸಮಿತಿಯು ಒತ್ತುವರಿಯನ್ನು ಸಕ್ರಮಗೊಳಿಸಲು ನಿರ್ಧರಿಸಿತು ಎಂಬುದು ಹಿರೇಮಠ ಅವರ ವಾದ. ಇದನ್ನೇ ಅವರು ಮುಖ್ಯ ನ್ಯಾಯಮೂರ್ತಿ ಡಿಎಚ್ ವಘೇಲಾ ಮತ್ತು ನ್ಯಾಯಮೂರ್ತಿ ಬಿವಿ ನಾಗರತ್ನ ಅವರ ವಿಭಾಗೀಯ ಪೀಠಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]
ಈ ಅಕ್ರಮ ಬಹಿರಂಗವಾಗುತ್ತಿದ್ದಂತೆ ಸಾರ್ವಜನಿಕರಿಂದ ಪ್ರತಿರೋಧ ವ್ಯಕ್ತವಾಯಿತು. ಆಗ ಸರ್ಕಾರವು ತನ್ನ ನಿರ್ಧಾರವನ್ನು 2012ರಲ್ಲಿ ಕೈಬಿಟ್ಟಿತು. ಆದರೆ ಅಶೋಕ್ ಅವರು ನಡೆಸಿದ ಭ್ರಷ್ಟಾಚಾರ ಕುರಿತು ಸರ್ಕಾರ ಕ್ರಮ ಜರುಗಿಸಲಿಲ್ಲ. ಅಶೋಕ್ ಅವರು ಆ ಸಂದರ್ಭದಲ್ಲಿ ರಾಜ್ಯದ ಉಪ ಮುಖ್ಯಮಂತ್ರಿ ಆಗಿದ್ದರು ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ. ಈ ಕುರಿತು ಸಿಬಿಐ ತನಿಖೆಗೆ ಆದೇಶಿಸಬೇಕು ಎಂದು ಹಿರೇಮಠ ಅವರು ನ್ಯಾyಪೀಠವನ್ನು ಕೋರಿದ್ದಾರೆ.