ಎಸ್.ಆರ್.ಹಿರೇಮಠ್ ವಿರುದ್ಧ ಹಣ ದುರ್ಬಳಕೆ ಆರೋಪ
ಬೆಂಗಳೂರಿನಲ್ಲಿ ಗುರುವಾರ ಪತ್ರಿಕಾಗೋಷ್ಠಿ ನಡೆಸಿದ ಗಣಿ ಉದ್ಯಮಿ ಟಪಾಲ್ ಗಣೇಶ್, ಅಕ್ರಮ ಗಣಿಗಾರಿಕೆ ವಿರುದ್ಧ ಹೋರಾಟ ನಡೆಸುವ ಹೆಸರಿನಲ್ಲಿ ಹಿರೇಮಠ್, ವಿದೇಶದಿಂದ ಕೋಟ್ಯಾಂತರ ರೂ. ದೇಣಿಗೆ ಪಡೆದಿದ್ದಾರೆ. ಅದನ್ನು ತಮ್ಮ ಸ್ವಂತ ಖರ್ಚಿಗೆ ಬಳಸಿಕೊಂಡಿದ್ದಾರೆ. ಈ ಕುರಿತು ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ವಿದೇಶಗಳಿಂದ ಬಡಜನರಿಗೆ ಸಹಕರಿಸುವುದಾಗಿ ಹಿರೇಮಠ್ ಕೋಟಿ-ಕೋಟಿ ಹಣವನ್ನು ತರುತ್ತಾರೆ. ಅದನ್ನು ಬಡವರಿಗೆ, ಹಿಂದುಳಿದವರಿಗೆ ಸಹಾಯ ಮಾಡಲು ವಿನೊಯೋಗಿಸುವ ಬದಲು ಸ್ವಂತಕ್ಕೆ ಉಪಯೋಗಿಸಿಕೊಂಡಿದ್ದಾರೆ. ಹಿರೇಮಠ್ ಅವರಿಗೆ ವಿದೇಶದಿಂದ ಬಂದಿರುವ ಹಣದ ಕುರಿತು ಸರ್ಕಾರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಸಚಿವ ಸಂತೋಷ್ ಲಾಡ್ ರಾಜೀನಾಮೆ ನೀಡಬೇಕು ಎಂದು ಪ್ರತಿಭಟನೆ ನಡೆಸುತ್ತಿರುವ ಬಿಜೆಪಿಗೆ ನೈತಿಕತೆ ಇಲ್ಲ. ಹಿಂದೆ ಬಿಜೆಪಿ ಸರ್ಕಾರ ಅಕ್ರಮ ಗಣಿಗಾರಿಕೆ ತಡೆಯಲು ವಿಫಲವಾಗಿತ್ತು. ಗಣಿಧಣಿಗಳ ಹಣದಲ್ಲೇ ಅಧಿಕಾರ ಪಡೆಯಿತು. ಆದ್ದರಿಂದ ಅವರು ಪ್ರತಿಭಟನೆ ನಡೆಸುವ ನೈತಿಕತೆ ಉಳಿಸಿಕೊಂಡಿಲ್ಲ ಎಂದು ಟಪಾಲ್ ಗಣೇಶ್ ಆರೋಪಿಸಿದರು.
ಎಸ್.ಆರ್.ಹಿರೇಮಠ್ ಸಚಿವ ಸಂತೋಷ್ ಲಾಡ್ ವಿರುದ್ಧ ದಾಖಲೆಗಳನ್ನು ನೀಡಿ ಅವರ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿಯೇ ಹಿರೇಮಠ್ ವಿರುದ್ಧ ಹಣ ದುರ್ಬಳಕೆ ಆರೋಪ ಕೇಳಿ ಬರುತ್ತಿದೆ. ಇದಕ್ಕೆ ಅವರು ಹೇಗೆ? ಪ್ರತಿಕ್ರಿಯೆ ನೀಡುತ್ತಾರೆ ಎಂದು ಕಾದು ನೋಡಬೇಕು.