ಬ್ರಾಹ್ಮಣರಿಗೆ ವಿಶೇಷ ಲಸಿಕೆ ಅಭಿಯಾನ ಆರೋಪ: ಡಿಸಿಎಂ ಕೆಂಡಾಮಂಡಲ
ಬೆಂಗಳೂರು, ಜೂನ್ 2: ಜಾತಿ ಆಧಾರದ ಮೇಲೆ ಲಸಿಕೆ ಹಾಕಲಾಗುತ್ತಿದೆ, ದಲಿತರಿಗೆ ಲಸಿಕೆ ಹಾಕದೇ ವಾಪಸ್ ಕಳುಹಿಸಲಾಗಿದೆ ಎನ್ನುವ ಕಾಂಗ್ರೆಸ್ ಮುಖಂಡ ಬಿ.ಕೆ.ಹರಿಪ್ರಸಾದ್ ಆರೋಪಕ್ಕೆ ಉಪ ಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ ತಿರುಗೇಟು ನೀಡಿದರು.
"ಲಸಿಕೆ ಅಭಿಯಾನ ಆರಂಭವಾದಾಗಿನಿಂದ ಕಾಂಗ್ರೆಸ್ಸಿಗೆ ಇದರ ಮೇಲೆ ಅನುಮಾನ. ಈಗ ಲಸಿಕೆಯ ವಿಚಾರದಲ್ಲಿ ವಿನಾಕಾರಣ ರಾಜಕೀಯ ಮಾಡುತ್ತಿದ್ದಾರೆ. ಲಸಿಕೆಯಲ್ಲಿ ಜಾತಿ ನೋಡಬೇಕು ಎನ್ನುವ ಯಾವ ಯೋಚನೆಯೂ ನಮಗಿಲ್ಲ"ಎಂದು ಅಶ್ವಥ್ ನಾರಾಯಣ ಹೇಳಿದರು.
ಎಲ್ಲರಿಗೂ ಉಚಿತ ಲಸಿಕೆಗಾಗಿ ಧ್ವನಿಯೆತ್ತಲು ರಾಹುಲ್ ಗಾಂಧಿ ಕರೆ
"ಜಾತಿಯನ್ನು ಇಟ್ಟುಕೊಂಡೇ ಕಾಂಗ್ರೆಸ್ ಇಷ್ಟು ದಿನ ರಾಜಕೀಯ ಮಾಡಿಕೊಂಡು ಬಂದಿರುವುದು. ನಮ್ಮ ಮಲ್ಲೇಶ್ವರಂ ಕ್ಷೇತ್ರದಲ್ಲಿ ಇವತ್ತು ಒಂದೇ ದಿನ ಒಂಬತ್ತು ಸಾವಿರ ಲಸಿಕೆಯನ್ನು ಹದಿನೆಂಟು ವರ್ಷ ಮೇಲ್ಪಟ್ಟವರಿಗೆ ಕೊಟ್ಟಿದ್ದೇವೆ, ಯಾವ ಜಾತಿಯವರು ಎಂದು ನೋಡಿಲ್ಲ"ಎಂದು ಅಶ್ವಥ್ ನಾರಾಯಣ ಸ್ಪಷ್ಟನೆಯನ್ನು ನೀಡಿದರು.
"ಇಷ್ಟು ದಿನ ಬಿ.ಕೆ.ಹರಿಪ್ರಸಾದ್ ಮನೆಯಿಂದ ಹೊರಗೆ ಬಂದಿದ್ದಾರೋ ಇಲ್ಲವೋ, ಯಾರ ಜೊತೆ ಬೆರೆತಿದ್ದಾರೋ ಇಲ್ಲವೋ, ಸೋಂಕಿತರನ್ನು ನೋಡಿದ್ದಾರೋ ಇಲ್ಲವೋ, ಕೊರೊನಾದ ವೇಳೆ ಏನು ಸೇವೆ ಮಾಡಿದ್ದಾರೋ ಇಲ್ಲವೋ ಗೊತ್ತಿಲ್ಲ. ರಾಜಕೀಯ ಮಾತ್ರ ಮಾಡುತ್ತಿದ್ದಾರೆ"ಎಂದು ಅಶ್ವಥ್ ನಾರಾಯಣ ಆರೋಪಿಸಿದರು.
ರಾಜ್ಯದಲ್ಲಿ ಕೊರೊನಾ 3ನೇ ಅಲೆ ಸಿದ್ಧತೆ: ವಾರದಲ್ಲಿ ಕಾರ್ಯಪಡೆ ವರದಿ ಸಲ್ಲಿಕೆ
"ನನ್ನ ಕ್ಷೇತ್ರದ ವ್ಯಾಪ್ತಿಯ ಏಳು ಸ್ಲಂಗಳಲ್ಲಿ ಹೋಗಿ, ಮನೆಮನೆಯವರನ್ನು ಕರೆದು, ಆದ್ಯತೆಯ ಮೇಲೆ ಲಸಿಕೆಯನ್ನು ನೀಡಲಾಗಿದೆ. ನನ್ನ ಕ್ಷೇತ್ರದಲ್ಲಿ ಯಾವುದೇ ಜಾತಿ/ಧರ್ಮದ ಆಧಾರದ ಮೇಲೆ ಲಸಿಕೆಯನ್ನು ನೀಡಲಾಗುತ್ತಿಲ್ಲ"ಎಂದು ಅಶ್ವಥ್ ನಾರಾಯಣ ಅವರು ಹರಿಪ್ರಸಾದ್ ಅವರಿಗೆ ತಿರುಗೇಟು ನೀಡಿದರು.
"ನಿನ್ನೆ ಮಲ್ಲೇಶ್ವರಂ ಗರ್ಲ್ ಹೈಸ್ಕೂಲ್ ನಲ್ಲಿ ದಲಿತರಿಗೆ ಲಸಿಕೆ ಹಾಕದೆ ವಾಪಸ್ ಕಳುಹಿಸಿದ್ದಾರೆ. ನಿಮಗೆ ಇಲ್ಲಿ ಹಾಕಲ್ಲ, ಬಿಬಿಎಂಪಿಗೆ ಹೋಗಿ ಅಂತಾರೆ. ಬೆಡ್ ಬ್ಲಾಕಿಂಗ್ ಕೇಸ್ ನಲ್ಲಿ ಯಾರ ಮೇಲೆ ಕೇಸ್ ಹಾಕಿದ್ದಾರೆ. ದಲಿತರ ಬಗ್ಗೆ ಯಾರು ಧ್ವನಿ ಎತ್ತುತ್ತಾರೆ" ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಗಂಭೀರ ಆರೋಪ ಮಾಡಿದ್ದರು.