ಬೆಂಗಳೂರು ಸೇರಿ 7 ಏರ್ಪೋರ್ಟ್ಗಳಲ್ಲಿ ಕೊರೊನಾ ವೈರಸ್ ಕಟ್ಟೆಚ್ಚರ
ಬೆಂಗಳೂರು, ಜನವರಿ 24: ಚೀನಾದಲ್ಲಿ ಆತಂಕ ಮೂಡಿಸಿರುವ 'ಕೊರೊನಾ' ಸೋಂಕಿನ ಬಗ್ಗೆ ಬೆಂಗಳೂರು ಸೇರಿದಂತೆ ಭಾರತದ ಏಳು ಏರ್ಪೋರ್ಟ್ಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವು ಬೆಂಗಳೂರು, ಚೆನ್ನೈ, ಹೈದರಾಬಾದ್, ದೆಹಲಿ, ಮುಂಬೈ, ಕೊಲ್ಕತ್ತ ಹಾಗೂ ಕೊಚ್ಚಿ ವಿಮಾನ ನಿಲ್ದಾಣಗಳಲ್ಲಿ ತೀವ್ರ ಕಟ್ಟೆಚ್ಚರ ವಹಿಸುವಂತೆ ನಿರ್ದೇಶಿಸಲಾಗಿದೆ.
ಸೌದಿಯಲ್ಲಿ ಭಾರತೀಯ ನರ್ಸ್ಗೆ ಭಯಾನಕ 'ಕೊರೊನಾ' ಸೋಂಕು
ಈ ನಿಟ್ಟಿನಲ್ಲಿ ಈ ಎಲ್ಲಾ ನಿಲ್ದಾಣಗಳಲ್ಲಿ ಪ್ರಯಾಣಿಕರ ವಿಶೇಷ ಪರೀಕ್ಷೆ ನಡೆಸಲಾಗುತ್ತಿದೆ. ಅದರಲ್ಲೂ ವಿಶೇಷವಾಗಿ ಚೀನಾ, ದಕ್ಷಿಣ ಕೊರಿಯಾ, ಜಪಾನ್, ಥೈವಾನ್ ಹಾಗೂ ಥೈಲೆಂಡ್ನಿಂದ ಬರುತ್ತಿರುವ ಪ್ರಯಾಣಿಕರ ಮೇಲೆ ತೀವ್ರ ಕಟ್ಟೆಚ್ಚರವಹಿಸಲಾಗುತ್ತಿದೆ. ಈ ದೇಶಗಳಿಂದ ಆಗಮಿಸುತ್ತಿರುವ ಪ್ರಯಾಣಿಕರನ್ನು ತಪಾಸಣೆ ಮಾಡಿಯೇ ಹೊರಗೆ ಬಿಡಲಾಗುತ್ತಿದೆ.
ಇದಲ್ಲದೆ ವಿಮಾನ ಏರುತ್ತಿದ್ದಂತೆ, ಎಲ್ಲಾ ಪ್ರಯಾಣಿಕರಿಗೆ ಜ್ವರ, ಕೆಮ್ಮು ಅಥವಾ ಇನ್ನಿತರೆ ಯಾವುದೇ ಲಕ್ಷಣಗಳಿದ್ದರೆ ಸ್ವಯಂ ಘೋಷಣೆ ಮಾಡಿಕೊಳ್ಳುವಂತೆ ವಿಮಾನ ಸಿಬ್ಬಂದಿ ಪ್ರಯಾಣಿಕರಿಗೆ ಸೂಚನೆ ನೀಡುತ್ತಿದ್ದಾರೆ.
ಹೀಗಾಗಿ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆ ಸ್ವಘೋಷಣೆ ಹಾಗೂ ತಪಾಸಣೆ ಎರಡು ಹಂತದ ಪ್ರಕ್ರಿಯೆ ನಡೆಯುತ್ತಿದೆ.
ಈ ಮೂಲಕ ಭಾರತಕ್ಕೆ ಸೋಂಕು ಹರಡದಂತೆ ಮುನ್ನೆಚ್ಚರಿಕೆ ವಹಿಸಲಾಗುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆ ಈ ನಿಟ್ಟಿನಲ್ಲಿ ತೀವ್ರ ಮುನ್ನೆಚ್ಚರಿಕೆ ವಹಿಸಲು ಈಗಾಗಲೇ ಮುನ್ನೆಚ್ಚರಿಕೆ ನೀಡಿದೆ.
ಚೀನಾದಲ್ಲಿಯ ಈ ಕುರಿತು ವಿಶೇಷ ಮುಂಜಾಗ್ರತೆ ವಹಿಸಲಾಗುತ್ತಿದ್ದು, ಆ ದೇಶದ ವಿಮಾನ ನಿಲ್ದಾಣಗಳಲ್ಲಿ ಕೂಡ ವಿಶೇಷ ತಪಾಸಣೆ ನಡೆಸಲಾಗುತ್ತಿದೆ. ಅದರಲ್ಲೂ ಹ್ಯೂಂಗ್ಯಾಗ್, ಇಸೌ ಹಾಗೂ ಊಹಾನ್ ನಗರಗಳಲ್ಲಿ ವಿಮಾನ ಹಾಗೂ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.