ಒಂದು ದಿನದ ವೇತನ ಕಡಿತಕ್ಕೆ ಸರ್ಕಾರಿ ಶಾಲಾ ಶಿಕ್ಷಕರ ನಿರಾಕರಣೆ ನಿರ್ಣಯ
ಬೆಂಗಳೂರು, ಮೇ. 28: ಕೋವಿಡ್ -19 ನಿಂದ ಸಂಕಷ್ಟಕ್ಕೆ ಒಳಗಾಗಿರುವ ಖಾಸಗಿ ಶಾಲಾ ಶಿಕ್ಷಕರಿಗೆ ಆರ್ಥಿಕ ಪರಿಹಾರ ನೀಡುವ ನಿಟ್ಟಿನಲ್ಲಿ ಒಂದು ದಿನದ ವೇತನ ನೀಡುವಂತೆ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಮಾಡಿದ್ದ ಮನವಿಯನ್ನು ಸರ್ಕಾರಿ ಶಾಲಾ ಶಿಕ್ಷಕರು ತಿರಸ್ಕಿರಿಸದ್ದಾರೆ. ಇದು ಖಾಸಗಿ ಹಾಗೂ ಸರ್ಕಾರಿ ಶಾಲಾ ಶಿಕ್ಷಕರ ನಡುವಿನ ಶೀತಲ ಸಮರಕ್ಕೆ ನಾಂದಿ ಹಾಡಿದೆ.
ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವ ಖಾಸಗಿ ಶಾಲಾ ಶಿಕ್ಷಕರಿಗೆ ಆರ್ಥಿಕ ಪ್ಯಾಕೇಜ್ ನೀಡುವಂತೆ ಶಿಕ್ಷಣ ಸಚಿವರ ನೇತೃತ್ವದಲ್ಲಿ ವಿಧಾನ ಪರಿಷತ್ ಸದಸ್ಯರ ನಿಯೋಗ ಸಿಎಂ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಚರ್ಚಿಸಿತ್ತು. ಶಿಕ್ಷಣ ಇಲಾಖೆಯಲ್ಲಿನ ಅನುದಾನ ಬಳಸಿ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡುವಂತೆ ಸಿಎಂ ಸಲಹೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಕೇವಲ ಒಂದು ದಿನದ ವೇತನವನ್ನು ನೀಡುವಂತೆ ಸರ್ಕಾರಿ ಶಾಲಾ ಶಿಕ್ಷಕರಿಗೆ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಮನವಿ ಮಾಡಿದ್ದರು.
ಸಭೆ ನಡೆಸಿದ ಕರ್ನಾಟಕ ರಾಜ್ಯ ಸರ್ಕಾರ
ಶಿಕ್ಷಣ ಸಚಿವರ ಮನವಿ ಹಿನ್ನೆಲೆಯಲ್ಲಿ ಸಭೆ ನಡೆಸಿದ ಕರ್ನಾಟಕ ರಾಜ್ಯ ಸರ್ಕಾರಿ ಶಾಲಾ ಶಿಕ್ಷಕರ ಸಂಘಟನೆ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಖಾಸಗಿ ಶಾಲಾ ಶಿಕ್ಷಕರಿಗೆ ವಿಶೇಷ ಆರ್ಥಿಕ ಪ್ಯಾಕೇಜ್ ನೀಡಲು ಒಂದು ದಿನದ ವೇತನವನ್ನು ನೀಡುವ ಶಿಕ್ಷಣ ಸಚಿವರ ಮನವಿಯನ್ನು ನಿರಾಕರಿಸುವ ತೀರ್ಮಾನ ತೆಗೆದುಕೊಳ್ಳಲಾಗಿದೆ. ಇದರ ಜತೆಗೆ ಸರ್ಕಾರಿ ಶಿಕ್ಷಕರನ್ನು ಕೋವಿಡ್ ಕರ್ತವ್ಯಕ್ಕೆ ನಿಯೋಜಿಸುವ ಸಂಬಂಧ ವಿಮಾ ಸೌಲಭ್ಯದೊಂದಿಗೆ ನಿಯೋಜಿಸಬೇಕು. ಮೃತ ಶಿಕ್ಷಕರಿಗೆ ಪರಿಹಾರ ನೀಡಬೇಕು ಎಂಬ ಹಲವು ನಿರ್ಣಯಗಳನ್ನು ಕೈಗೊಳ್ಳಲಾಗಿದೆ.
ಸರ್ಕಾರಿ ಶಾಲಾ ಶಿಕ್ಷಕರ ಈ ನಿರ್ಣಯ
ಸರ್ಕಾರಿ ಶಾಲಾ ಶಿಕ್ಷಕರ ಈ ನಿರ್ಣಯ ಇದೀಗ ಶೈಕ್ಷಣಿಕ ಕ್ಷೇತ್ರದಲ್ಲಿ ಇನ್ನೊಂದು ರೀತಿಯ ಮುಸುಕಿನ ಗುದ್ದಾಟಕ್ಕೆ ಎಡೆ ಮಾಡಿಕೊಟ್ಟಿದೆ. ಖಾಸಗಿ ಶಾಲಾ ಶಿಕ್ಷಕರಿಗೆ ವಿಶೇಷ ಆರ್ಥಿಕ ಸೌಲಭ್ಯ ನೀಡುವ ಸಂಬಂಧ ಸರ್ಕಾರಿ ಶಾಲಾ ಶಿಕ್ಷಕರ ವೇತನ ಕೇಳಬೇಡಿ ಎಂದು ಶಿಕ್ಷಣ ಸಚಿವರಿಗೆ ಮೊದಲೇ ಮನವಿ ಮಾಡಿದ್ದೆವು. ಅವರು ಕೇಳಿದರೂ ಅವರ ಮಾತಿಗೆ ಸರ್ಕಾರಿ ಶಾಲಾ ಶಿಕ್ಷಕರು ಬೆಲೆ ಕೊಟ್ಟಿಲ್ಲ. ಶಿಕ್ಷಣ ಸಚಿವರಿಗೆ ಹಾಗೂ ಖಾಸಗಿ ಶಿಕ್ಷಕರಿಗೆ ಅವಮಾನ ಮಾಡಲಾಗಿದೆ. ಬಹುತೇಕ ಎಲ್ಲಾ ಸರ್ಕಾರಿ ಶಾಲಾ ಶಿಕ್ಷಕರ ಮತ್ತು ಅಧಿಕಾರಿಗಳ ಮಕ್ಕಳು ಖಾಸಗಿ ಶಾಲೆಗಳಲ್ಲಿ ಓದುತ್ತಿದ್ದಾರೆ. ಎಲ್ಲಾ ಮಕ್ಕಳನ್ನು ಅವರು ಸರ್ಕಾರಿ ಶಾಲೆಗಳಿಗೆ ದಾಖಲು ಮಾಡಲಿ. ಅವರು ಮಕ್ಕಳು ಓದುವ ಗುರುಗಳಿಗೆ ನೀಡಿರುವ ಗೌರವವೇ ಎಂದು ಕ್ಯಾಮ್ಸ್ ಸೇರಿದಂತೆ ಹಲವು ಖಾಸಗಿ ಶಾಲಾ ಶಿಕ್ಷಕರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.
ಶಾಲಾ ಶಿಕ್ಷಕರು ಕೈಗೊಂಡಿರುವ ನಿರ್ಣಯ ಖಂಡನೀಯ
ಖಾಸಗಿ ಶಾಲಾ ಶಿಕ್ಷಕರಿಗೆ ಯಾವುದೇ ರೀತಿಯ ಸಹಾಯ ಮಾಡಲ್ಲ ಎಂದು ಸರ್ಕಾರಿ ಶಾಲಾ ಶಿಕ್ಷಕರು ಕೈಗೊಂಡಿರುವ ನಿರ್ಣಯ ಖಂಡನೀಯ. ನಿಮ್ಮ ಎಲ್ಲಾ ಮಕ್ಕಳು ಖಾಸಗಿ ಶಿಕ್ಷಕರ ಬಳಿ ಪಾಠ ಕೇಳುತ್ತಾರೆ ಎಂಬುದನ್ನು ಮರೆಯಬೇಡಿ. ನಾವು ಮೊದಲೇ ಶಿಕ್ಷಣ ಸಚಿವರಿಗೆ ಮನವಿ ಮಾಡಿದ್ದೆವು. ಖಾಸಗಿ ಶಾಲಾ ಶಿಕ್ಷಕರಿಗೆ ಸರ್ಕಾರ ನೆರವು ನೀಡಬೇಕು. ಇದು ಸರ್ಕಾರದ ಜವಾಬ್ಧಾರಿ, ಸರ್ಕಾರಿ ಶಾಲೆ ಶಿಕ್ಷಕರು ಎಷ್ಟು ಸೇವೆ ಮಾಡುತ್ತಿದ್ದಾರೋ ಅಷ್ಟೇ ಸೇವೆ ಖಾಸಗಿ ರಂಗವೂ ನೀಡುತ್ತಿದೆ ಎಂಬುದನ್ನು ಸರ್ಕಾರಿ ಶಿಕ್ಷಕರು ಮರೆಯಬಾರದು. ಸರ್ಕಾರಿ ಶಾಲಾ ಶಿಕ್ಷಕರ ಈ ನಿರ್ಣಯವನ್ನು ಖಂಡಿಸುತ್ತೇನೆ ಎಂದು ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Recommended Video
ಶಿಕ್ಷಕರ ಸಂಘದ ಅಧ್ಯಕ್ಷ ಶಂಭುಲಿಂಗನಗೌಡ ಪಾಟೀಲ್
ಕರ್ನಾಟಕ ರಾಜ್ಯ ಸರ್ಕಾರಿ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಂಭುಲಿಂಗನಗೌಡ ಪಾಟೀಲ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಖಾಸಗಿ ಶಾಲಾ ಶಿಕ್ಷಕರಿಗೆ ಸರ್ಕಾರ ನೆರವು ನೀಡುವ ಸಂಬಂಧ ಸರ್ಕಾರಿ ಶಾಲಾ ಶಿಕ್ಷಕರು ಒಂದು ದಿನದ ವೇತನ ಕೊಡುವುದಿಲ್ಲ ಎಂಬ ನಿರ್ಣಯ ಕೈಗೊಳ್ಳಲಾಗಿದೆ. ಇದರ ಜತೆಗೆ ವರ್ಗಾವಣೆ, ಗಳಿಕೆ ರಜೆ, ಸರ್ಕಾರಿ ಶಾಲಾ ಶಿಕ್ಷಕರಿಗೆ ಮೊದಲ ಆದ್ಯತೆಯಲ್ಲಿ ಲಸಿಕೆ ನೀಡುವ ಹಲವು ತೀರ್ಮಾನಗಳನ್ನು ಕೈಗೊಳ್ಳಲಾಗಿದೆ.