ಸಿದ್ದರಾಮಯ್ಯಗೆ ಕಾರು, ಸಿಬ್ಬಂದಿ ನೀಡದಿರಲು ಈ ಹೇಳಿಕೆಯೇ ಕಾರಣವಾಯ್ತಾ?
Recommended Video
ಬೆಂಗಳೂರು, ನವೆಂಬರ್ 14: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯಗೆ ಕಾರು ಹಾಗೂ ಸಿಬ್ಬಂದಿಯನ್ನು ನೀಡಲು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹಿಂದೇಟು ಹಾಕುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿದೆ.
ಸಿದ್ದರಾಮಯ್ಯ ಪ್ರತಿಪಕ್ಷ ನಾಯಕರಾಗಿ ತಿಂಗಳಾಗುತ್ತಾ ಬಂದರೂ ಅವರಿಗೆ ನೀಡಬೇಕಿದ್ದ ಕಾರು ಹಾಗೂ ಸಿಬ್ಬಂದಿ ಸೇರಿದಂತೆ ಹಲವು ಸೌಲಭ್ಯಗಳನ್ನು ನೀಡಲು ಹಿಂದೇಟು ಹಾಕುತ್ತಿದ್ದಾರೆ ಎನ್ನುವ ಆರೋಪಗಳು ಕೇಳಿವೆ.
ಕಾನೂನುಬದ್ಧವಾಗಿ ಕೆಲವು ಸೌಲಭ್ಯ ನೀಡಲೇಬೇಕು
ಸ್ಪೀಕರ್ ಅವರು ಸಿದ್ದರಾಮಯ್ಯ ಅವರಿಗೆ ಕಾನೂನು ಬದ್ಧವಾಗಿ ದೊರೆಯಬೇಕಾದ ಸೌಲಭ್ಯ ಮಂಜೂರು ಮಾಡುವುದನ್ನು ನಿಧಾನಗೊಳಿಸುತ್ತಿರುವುದಾದರೂ ಏಕೆ ಎಂಬ ಪ್ರಶ್ನೆಗೆ ಸಿದ್ದರಾಮಯ್ಯ ಆಪ್ತರಿಂದ ಕುತೂಹಲಕಾರಿ ವಿವರಣೆ ದೊರೆಯುತ್ತಿದೆ.
ಸ್ಪೀಕರ್ಗೆ ಏನೂ ಗೊತ್ತಾಗುವುದಿಲ್ಲ ಎಂದಿದ್ದ ಸಿದ್ದರಾಮಯ್ಯ
ಈ ಹಿಂದೆ ಸಿದ್ದರಾಮಯ್ಯ ಸ್ಪೀಕರ್ ಅವರನ್ನು ಟೀಕೆ ಮಾಡುವ ಸಂದರ್ಭದಲ್ಲಿ ಕಾಗೇರಿಗೆ ಏನೂ ಗೊತ್ತಾಗುವುದಿಲ್ಲ ಎಂದು ವ್ಯಾಖ್ಯಾನಿಸಲಾಗಿತ್ತು. ಇದನ್ನು ಮರೆಯದ ಕಾಗೇರಿ , ಪ್ರತಿಪಕ್ಷ ನಾಯಕರಿಗೆ ಸೌಲಭ್ಯ ಒದಗಿಸುವುದಕ್ಕೆ ಸಂಬಂಧಿಸಿದ ಕಡತ ಏನಾಯಿತು ಎಂದು ಸಿದ್ದರಾಮಯ್ಯ ಕಚೇರಿಯ ಸಿಬ್ಬಂದಿ ಕೇಳಿದರೆ ಕಡತದ ಬಗ್ಗೆ ಏನು ಮಾಡಬೇಕು ಎಂದು ನನಗೆ ಗೊತ್ತಾಗುತ್ತಿಲ್ಲ ಎಂದು ಹೇಳುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಮುಖ್ಯಮಂತ್ರಿ ಹುದ್ದೆಗೆ ಸಮಾನಾದ ಹುದ್ದೆ ಪ್ರತಿಪಕ್ಷ ಸ್ಥಾನ
ಮುಖ್ಯಮಂತ್ರಿ ಹುದ್ದೆಗೆ ಸಮಾನಾಂತರ ಹುದ್ದೆಯಾದ ಪ್ರತಿಪಕ್ಷ ನಾಯಕರಿಗೆ ಸಂಪುಟ ದರ್ಜೆ ಸಚಿವರ ಸ್ಥಾನಮಾನ ಲಭ್ಯವಿದೆ. ಸರ್ಕಾರಿ ಬಂಗಲೆ ಮಾತ್ರವಲ್ಲದೆ ಕಾರು, ಇಬ್ಬರು ಕಾರು ಚಾಲಕರು , ಇಬ್ಬರು ಆಪ್ತ ಸಹಾಯಕರು ನಾಲ್ಕು ಸಹಾಯಕ ಸಿಬ್ಬಂದಿ ಒದಗಿಸಬೇಕು.
ಪ್ರತಿಪಕ್ಷ ನಾಯಕರಾದ ಕೂಡಲೇ ಮನವಿ ಸಲ್ಲಿಕೆಯಾಗಿತ್ತು
ಈ ಕುರಿತು ಮನವಿಯನ್ನು ಸಿದ್ದರಾಮಯ್ಯ ಅವರು ಪ್ರತಿಪಕ್ಷ ನಾಯಕರಾದ ಕೂಡಲೇ ಸ್ಪೀಕರ್ ಕಚೇರಿಗೆ ಸಲ್ಲಿಸಲಾಗಿತ್ತು. ಆದರೆ ಈ ಕಡತಕ್ಕೆ ಮಂಜೂರಾತಿ ನೀಡುವ ಮನಸ್ಸನ್ನು ಸ್ಪೀಕರ್ ಕಾಗೇರಿ ಮಾಡುತ್ತಿಲ್ಲ ಎನ್ನಲಾಗಿದೆ. ಈ ಬಗ್ಗೆ ಸಿದ್ದರಾಮಯ್ಯ ಅವರ ಆಪ್ತ ಸಿಬ್ಬಂದಿ ಸ್ಪೀಕರ್ ಅವರನ್ನು ಪ್ರಶ್ನಿಸಿದರೆ , ಕಡತದ ಬಗ್ಗೆ ಏನು ಮಾಡಬೇಕು ಎಂಬುದೇ ನನಗೆ ಗೊತ್ತಾಗುತ್ತಿಲ್ಲ ಎಂದಷ್ಟೇ ಹೇಳುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.