ಬೆಂಗಳೂರಲ್ಲಿ ಸೆ.1ಕ್ಕೆ ಸ್ಪ್ಯಾನಿಷ್ ಗಾದೆಗಳ ಇಂಗ್ಲೀಷ್ ಕೃತಿ ಲೋಕಾರ್ಪಣೆ
ಬೆಂಗಳೂರು, ಆಗಸ್ಟ್ 28: ಸ್ಪ್ಯಾನಿಷ್ ಗಾದೆಗಳನ್ನು ಕುರಿತ ಕನ್ನಡ ಪುಸ್ತಕದ ಇಂಗ್ಲಿಷ್ ಅನುವಾದ, ಸಾಹಿತ್ಯ ಕ್ಷೇತ್ರದಲ್ಲೊಂದು ಹೊಸ ಪ್ರಯೋಗವನ್ನು ಸೆಪ್ಟೆಂಬರ್ 01ರಂದು ಸಾಹಿತ್ಯಾಸ್ತಕರು ಕಾಣಬಹುದು.
ಸೆಪ್ಟೆಂಬರ್ 1, 2019ರ ಭಾನುವಾರ ಬೆಳಿಗ್ಗೆ 11ಕ್ಕೆ ಬೆಂಗಳೂರಿನ ಉದಯಭಾನು ಕಲಾಸಂಘದಲ್ಲಿ ಏರ್ಪಡಿಸಲಾಗಿರುವ ಕಾರ್ಯಕ್ರಮದಲ್ಲಿ 'ಸ್ಪ್ಯಾನಿಷ್ ಪ್ರಾವರ್ಬ್ಸ್' ಕೃತಿ ಲೋಕಾರ್ಪಣೆಗೊಳ್ಳಲಿದೆ.
ಇದು ಸ್ಪೇನ್ ದೇಶದ ಗಾದೆಗಳನ್ನು ಕುರಿತು ಲೇಖಕ, ಆರ್ಥಿಕ ಪರಿಣತ, ಒನ್ಇಂಡಿಯಾ ಕನ್ನಡ ಅಂಕಣಕಾರರಾಗಿದ್ದ ರಂಗಸ್ವಾಮಿ ಮೂಕನಹಳ್ಳಿಯವರು ಕನ್ನಡದಲ್ಲಿ ಬರೆದ 'ಸ್ಪ್ಯಾನಿಷ್ ಗಾದೆಗಳು' ಕೃತಿಯ ಇಂಗ್ಲಿಷ್ ಅನುವಾದವಾಗಿದೆ. ಅಮೆರಿಕಾದ ಷಿಕಾಗೋ ನಿವಾಸಿ, ಮ್ಯಾನೇಜ್ಮೆಂಟ್ ತಜ್ಞ ರವಿ ಹಂಜ್ ಈ ಕೃತಿಯನ್ನು ಕನ್ನಡದಿಂದ ಇಂಗ್ಲಿಷಿಗೆ ಅನುವಾದಿಸಿದ್ದಾರೆ.
ಉಪಸ್ಥಿತಿ: ಖ್ಯಾತ ಸಾಹಿತಿ ಎಸ್. ದಿವಾಕರ್, ಐಪಿಎಸ್ ಅಧಿಕಾರಿ-ಲೇಖಕಿ ಸವಿತಾ ಶ್ರೀನಿವಾಸ ಹಾಗೂ ಐಆರ್ಎಸ್ ಅಧಿಕಾರಿ ಜಯರಾಮ್ ರಾಯಪುರ ಅವರು ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಲೇಖಕ ರಂಗಸ್ವಾಮಿ ಮೂಕನಹಳ್ಳಿ ಹಾಗೂ ಅನುವಾದಕ ರವಿ ಹಂಜ್ ಉಪಸ್ಥಿತರಿರಲಿದ್ದಾರೆ. 'ರೀಡ್ಫ್ರೆಶ್' ಎಂಬ ಹೊಸ ಪ್ರಯೋಗದ ಭಾಗವಾಗಿ ಈ ಪುಸ್ತಕವನ್ನು ಪ್ರಕಟಿಸಲಾಗಿದೆ.