ಎರಡು ಮಾರ್ಗದಲ್ಲಿ ಮೆಮು ರೈಲು ಓಡಿಸಲಿದೆ ನೈಋತ್ಯ ರೈಲ್ವೆ
ಬೆಂಗಳೂರು, ಅಕ್ಟೋಬರ್ 26; ನೈಋತ್ಯ ರೈಲ್ವೆ ಬೆಂಗಳೂರು ವಿಮಾನ ನಿಲ್ದಾಣ ಮತ್ತು ತುಮಕೂರಿಗೆ ಮೆಮು ರೈಲುಗಳನ್ನು ಓಡಿಸಲು ತೀರ್ಮಾನಿಸಿದೆ. ವಿದ್ಯುದೀಕರಣ ಕಾಮಗಾರಿ ಪೂರ್ಣಗೊಂಡ ಬಳಿಕ ರೈಲುಗಳು ಸಂಚಾರ ನಡೆಸಲಿವೆ.
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ದೇವನಹಳ್ಳಿಯ ಬೆಂಗಳೂರು ವಿಮಾನ ನಿಲ್ದಾಣ ಮತ್ತು ತುಮಕೂರು-ಯಶವಂತಪುರ ನಡುವೆ ಮೆಮು ರೈಲುಗಳನ್ನು ಓಡಿಸಲಿದೆ. ರೈಲ್ವೆ ಸುರಕ್ಷತಾ ಆಯುಕ್ತರ ಪರಿಶೀಲನೆ ಬಳಿಕ ರೈಲು ಸಂಚಾರದ ದಿನಾಂಕ ನಿಗದಿಯಾಗಲಿದೆ.
ಯಶವಂತಪುರ-ತುಮಕೂರು ನಡುವೆ ಓಡಲಿವೆ ಹೆಚ್ಚುವರಿ ರೈಲು
ತುಮಕೂರು-ಯಶವಂತಪುರ ನಡುವಿನ ಮಾರ್ಗದ ವಿದ್ಯುದೀಕರಣ ಕಾಮಗಾರಿ ಪೂರ್ಣಗೊಂಡಿದೆ. ರೈಲ್ವೆ ಸುರಕ್ಷತಾ ಆಯುಕ್ತರಿಗೆ ಮಾರ್ಗ ಪರಿಶೀಲನೆಗೆ ಬರುವಂತೆ ಅಗತ್ಯ ದಾಖಲೆಗಳನ್ನು ರವಾನೆ ಮಾಡಲಾಗಿದೆ. ಯಲಹಂಕ-ದೇವನಹಳ್ಳಿ ಮಾರ್ಗದ ವಿದ್ಯುದೀಕರಣ ಪೂರ್ಣಗೊಳ್ಳುವ ಹಂತದಲ್ಲಿದೆ.
ಧಾರವಾಡ-ಬೆಳಗಾವಿ ನೇರ ರೈಲು ಮಾರ್ಗ ಮತ್ತಷ್ಟು ವಿಳಂಬ?
ನೈಋತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಅನೀಶ್ ಹೆಗಡೆ ಈ ಕುರಿತು ಮಾತನಾಡಿದ್ದು, "ಯಲಹಂಕ-ದೇವನಹಳ್ಳಿ ಮಾರ್ಗದಲ್ಲಿ 220 ಕೆವಿ ವಿದ್ಯುತ್ ಮಾರ್ಗ ಹಾದು ಹೋಗಿದೆ. ಕೆಪಿಟಿಸಿಎಲ್ ಅದನ್ನು ಸ್ಥಳಾಂತರ ಮಾಡಬೇಕಿದೆ" ಎಂದರು.
ಕರ್ನಾಟಕದಲ್ಲಿ ಶೀಘ್ರವೇ ಓಡಲಿದೆ; ವಂದೇ ಭಾರತ್ ಎಕ್ಸ್ಪ್ರೆಸ್ ರೈಲು
"ವಿದ್ಯುತ್ ಮಾರ್ಗ ಸ್ಥಳಾಂತರದ ಬಳಿಕ ನೈಋತ್ಯ ರೈಲ್ವೆ ವಿದ್ಯುದೀಕರಣ ಕಾಮಗಾರಿಯನ್ನು ಪೂರ್ಣಗೊಳಿಸಲಿದೆ. ಬಳಿಕ ಸಿಆರ್ಎಸ್ ಪರಿಶೀಲನೆ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುತ್ತದೆ" ಎಂದು ಅನೀಶ್ ಹೆಗಡೆ ಹೇಳಿದ್ದಾರೆ.
ಯಲಹಂಕ-ದೇವನಹಳ್ಳಿ ಮಾರ್ಗದಲ್ಲಿನ ವಿದ್ಯುದೀಕರಣ ಕಾಮಗಾರಿ ಪೂರ್ಣಗೊಳಿಸಲು ಹಿಂದೆ ಆಗಸ್ಟ್ ತಿಂಗಳ ಗುಡುವು ನೀಡಲಾಗಿತ್ತು. ಈ ಕಾಮಗಾರಿ ಪೂರ್ಣಗೊಂಡರೆ ಬೆಂಗಳೂರು ನಗರದಿಂದ ದೇವನಹಳ್ಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮೆಮು ರೈಲು ಸಂಚಾರ ಆರಂಭಿಸಲಾಗುತ್ತದೆ.
ತುಮಕೂರು-ಯಶವಂತಪುರ ಮಾರ್ಗದಲ್ಲಿ ಪ್ರತಿನಿತ್ಯ 10 ರಿಂದ 15 ಸಾವಿರ ಜನರು ಪ್ರಯಾಣ ಮಾಡಲಿದ್ದಾರೆ ಎಂದು ನೈಋತ್ಯ ರೈಲ್ವೆ ಅಂದಾಜಿಸಿದೆ. ಈ ಮಾರ್ಗದಲ್ಲಿ ಮೆಮು ರೈಲು ಆರಂಭವಾದರೆ ಒಂದು ಗಂಟೆಯಲ್ಲಿ ಉಭಯ ನಗರಗಳ ನಡುವೆ ಸಂಚಾರ ನಡೆಸಬಹುದಾಗಿದೆ.
100-150 ಕಿ. ಮೀ. ದೂರದ ನಗರಗಳಿಗೆ ಮೆಮು ರೈಲುಗಳನ್ನು ಓಡಿಸಬಹುದಾಗಿದೆ. ಇದರಿಂದಾಗಿ ರೈಲ್ವೆ ಇಲಾಖೆಗೆ ಸಹ ಹಣದ ಉಳಿತಾಯವಾಗಲಿದೆ. ಮೆಮು ರೈಲುಗಳ ನಿರ್ವಹಣೆ ವೆಚ್ಚವೂ ಕಡಿಮೆಯಾಗಿದ್ದು, ರೈಲ್ವೆ ಇಂಧನಕ್ಕಾಗಿ ಖರ್ಚು ಮಾಡುವ ಹಣ ಉಳಿತಾಯವಾಗಲಿದೆ.
ಕಾಮಗಾರಿ ಪೂರ್ಣಗೊಂಡಿದೆ; ರೈಲ್ವೆ ಇಲಾಖೆ ಯಶವಂತಪುರ-ತುಮಕೂರು ನಡುವಿನ 69.47 ಕಿ. ಮೀ. ವಿದ್ಯುದೀಕರಣ ಕಾಮಗಾರಿ ಪೂರ್ಣಗೊಳಿಸಿದೆ. ಈ ಮಾರ್ಗದಲ್ಲಿ ಪ್ರಾಯೋಗಿಕ ಸಂಚಾರವನ್ನು ಸಹ ಪೂರ್ಣಗೊಳಿಸಲಾಗಿದೆ. ರೈಲ್ವೆ ಸುರಕ್ಷತಾ ಆಯುಕ್ತರು ಶೀಘ್ರದಲ್ಲೇ ಮಾರ್ಗದ ಪರಿಶೀಲನೆ ನಡೆಸಲಿದ್ದಾರೆ. ಬಳಿಕ ರೈಲುಗಳ ವಾಣಿಜ್ಯ ಸಂಚಾರಕ್ಕೆ ಅವಕಾಶ ನೀಡಲಾಗುತ್ತದೆ.
ಯಶವಂತಪುರ-ತುಮಕೂರು ಮಾರ್ಗದಲ್ಲಿನ ತುಮಕೂರು-ಹಿರೇಹಳ್ಳಿ ಮಾರ್ಗದ ಸಿಆರ್ಎಸ್ ಪರಿಶೀಲನೆ ಈಗಾಗಲೇ ಪೂರ್ಣಗೊಂಡಿದೆ. ಉಳಿದ ಮಾರ್ಗದ ಪರಿಶೀಲನೆಯನ್ನು ರೈಲ್ವೆ ಸುರಕ್ಷತಾ ಆಯುಕ್ತರು ನಡೆಸಬೇಕಿದೆ. ಇದಕ್ಕಾಗಿ ಅಗತ್ಯವಿರುವ ದಾಖಲೆಗಳನ್ನು ಈಗಾಗಲೇ ಇಲಾಖೆಗೆ ಸಲ್ಲಿಕೆ ಮಾಡಲಾಗಿದೆ.
ತುಮಕೂರು-ಬೆಂಗಳೂರು ನಡುವೆ ಹೆಚ್ಚು ರೈಲುಗಳನ್ನು ಓಡಿಸಬೇಕು ಎಂದು ಪ್ರಯಾಣಿಕರು ಒತ್ತಾಯಿಸಿದ್ದಾರೆ. ಅದರಲ್ಲೂ ಬೆಳಗ್ಗೆ ಮತ್ತು ಸಂಜೆ ಹೆಚ್ಚು ರೈಲು ಓಡಿಸಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ವಿದ್ಯುದೀಕರಣಗೊಂಡ ಮಾರ್ಗದಲ್ಲಿ ರೈಲು ಸಂಚಾರಕ್ಕೆ ಅನುಮತಿ ಸಿಕ್ಕಿದರೆ, ಹೆಚ್ಚು ರೈಲುಗಳನ್ನು ಅದರಲ್ಲೂ ಮೆಮು ರೈಲುಗಳನ್ನು ಓಡಿಸಲು ಇಲಾಖೆ ಮುಂದಾಗಿದೆ.
ರೈಲ್ವೆ ಇಲಾಖೆ ಚಿಕ್ಕಬಣಾವರ-ಹುಬ್ಬಳ್ಳಿ ನಡುವಿನ ಮಾರ್ಗದ ವಿದ್ಯುದೀಕರಣದ ಭಾಗವಾಗಿ ಬೆಂಗಳೂರು-ತುಮಕೂರು ನಡುವಿನ ರೈಲು ಮಾರ್ಗವನ್ನು ವಿದ್ಯುದೀಕರಣ ಮಾಡಿದೆ. ಕಾಮಗಾರಿ ಪೂರ್ಣಗೊಂಡಿದ್ದು, ಪ್ರಾಯೋಗಿಕ ಸಂಚಾರವೂ ಮುಗಿದಿದೆ.
Recommended Video
ಒಟ್ಟು 856.76 ಕೋಟಿ ಅನುದಾನದಲ್ಲಿ ಚಿಕ್ಕಬಣಾವರ-ಹುಬ್ಬಳ್ಳಿ ರೈಲ್ವೆ ಮಾರ್ಗದ ವಿದ್ಯುದೀಕರಣ ಕಾಮಗಾರಿ ನಡೆಯುತ್ತಿದೆ. ರೈಲ್ವೆ ವಿಕಾಸ ನಿಗಮ ಸೇರಿದಂತೆ ವಿವಿಧ ಸಂಸ್ಥೆಗಳು ವಿದ್ಯುದೀಕರಣ ಕಾಮಗಾರಿಯನ್ನು ಕೈಗೊಂಡಿವೆ. 2022ರ ಡಿಸೆಂಬರ್ ವೇಳೆಗೆ ಈ ಮಾರ್ಗದ ವಿದ್ಯುದೀಕರಣ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಅಂದಾಜಿಸಲಾಗಿದೆ.