'ಜನರ ಕಷ್ಟ ಕೇಳಲಾಗದೆ ಅನಂತ್ ಕಿವಿ ಮುಚ್ಚಿದೆ'
ಬೆಂಗಳೂರು, ಏ.6: ಕಳೆದ ಹತ್ತು ಹದಿನೈದು ದಿನಗಳಿಂದ ಬೆಂಗಳೂರಿನ ಹತ್ತು ಹಲವು ಉದ್ಯಾನಗಳಲ್ಲಿ ಮಾರ್ನಿಂಗ್ ವಾಕ್ ಮಾಡುವ ನಾಗರಿಕರನ್ನು ಸೆಳೆಯುವಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ನಂದನ್ ನಿಲೇಕಣಿ ಸಫಲರಾಗಿದ್ದಾರೆ. ಮುಂಜಾನೆಯಲ್ಲಿ ಜನ ಸ್ಪಂದನ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಜನರ ನೋವು ನಲಿವುಗಳ ಬಗ್ಗೆ ಅರಿತುಕೊಳ್ಳುತ್ತಿರುವ ನಂದನ್ ಅವರು ಪ್ರತಿಸ್ಪರ್ಧಿ ಅನಂತ್ ವಿರುದ್ಧ ಹರಿಹಾಯ್ದಿದ್ದಾರೆ.
ಚುಮುಚುಮು ಬೆಳಗು, ಮೇಲೆ ಹಸಿರ ಚಪ್ಪರ, ಕೆಳಗೆ ಹೂಹಾಸಿಗೆ, ಬೆಳಗಿನ ವಾಯುವಿಹಾರಕ್ಕೆ ನಿಧಾನ ನಡಿಗೆಯಲ್ಲಿ ಬರುವ ಹಿರಿಯ ನಾಗರಿಕರು, ಗೃಹಣಿಯರು, ಈಗ ಇವರೆಲ್ಲರೊಂದಿಗೆ ಮಾತುಕತೆ ಆಡುತ್ತಿರುವ, ಸಂವಾದ ಮಾಡುತ್ತಿರುವ ನಂದನ್ ಅವರು ತಮ್ಮ ಚುನಾವಣಾ ಪ್ರಚಾರ ಕಾರ್ಯವನ್ನು ಸಮರ್ಥವಾಗಿ ಬಳಸಿಕೊಳ್ಳುತ್ತಿದ್ದಾರೆ.
ಇದು ಕಳೆದ ಹತ್ತು ಹದಿನೈದು ದಿನಗಳಿಂದ ಬೆಂಗಳೂರಿನ ಹತ್ತು ಹಲವು ಉದ್ಯಾನಗಳಲ್ಲಿ ಕಂಡುಬರುತ್ತಿರುವ ನಂದನ್ ಜನಸ್ಪಂದನದ ದೃಶ್ಯ. ಜನರಿಗೆ ತಮ್ಮ ಬಡಾವಣೆಗಳ ಸಮಸ್ಯೆಗಳನ್ನು, ತಾವು ಎದುರಿಸುತ್ತಿರುವ ನಿತ್ಯದ ಸಂಕಷ್ಟಗಳನ್ನು ಹೇಳಿಕೊಳ್ಳಲು ಇದೊಂದು ಅವಕಾಶವಾಗುತ್ತಿದೆ. ಜೊತೆಗೆ ಶುದ್ಧಹಸ್ತದ, ಸರಳ ವ್ಯಕ್ತಿಯೊಂದಿಗೆ ಕಾರ್ಯಸಾಧ್ಯ ಪರಿಹಾರಗಳ ಚರ್ಚೆ ಮಾಡಲು ಸಾಧ್ಯವಾಗುತ್ತಿದೆ. ಕೆಲವೊಮ್ಮೆ ನಂದನ್ ಆಟವಾಡುತ್ತಿರುವ ಮಕ್ಕಳೊಂದಿಗೆ ಸೇರಿ ತಾವೂ ಕ್ರಿಕೆಟ್ ಮತ್ತು ಫುಟ್ಬಾಲ್ ಆಡುತ್ತಾರೆ. ಇನ್ನು ಕೆಲವರು ಅವರೊಂದಿಗೆ ದರ್ಶಿನಿಗೆ ಹೋಗಿ, ಬಿಸಿ-ಬಿಸಿ ದೋಸೆ ಅಥವಾ ಬೈ ಟು ಕಾಫಿ ಹೀರುತ್ತಾರೆ.
ಗೋವಿಂದರಾಜನಗರ ಮತ್ತು ಪದ್ಮನಾಭನಗರದಲ್ಲಿ ಬೆಳಗ್ಗೆ ಉದ್ಯಾನಗಳಲ್ಲಿ ನಡೆದ ಜನಸ್ಪಂದನದಲ್ಲಿ ಜನರು ನಂದನ್ ಅವರೊಂದಿಗೆ ಸಂವಾದ ನಡೆಸಿದರು. ತಮ್ಮ ಕಾಳಜಿಗಳನ್ನು ಹಂಚಿಕೊಂಡರು.
ಬೆಂಗಳೂರು ಪರಿವರ್ತನೆ ಮಾಡಿದವರು ನೀವು
ನೀವು ನಾರಾಯಣ ಮೂರ್ತಿಯವರೊಂದಿಗೆ ಸೇರಿ, ರೇಡಿಯೋ ಸಿಟಿ ಸಂದರ್ಶನಗಳನ್ನು ಕೇಳಿದಾಗಿನಿಂದಲೂ ನಾನು ನಿಮ್ಮ ಅಭಿಮಾನಿ ಸರ್. ನೀವು ಬೆಂಗಳೂರನ್ನು ಪರಿವರ್ತನೆ ಮಾಡಿದ ಜನರಲ್ಲಿ ಒಬ್ಬರು, ನೀವು ರಾಜಕೀಯ ಪ್ರವೇಶ ಮಾಡ್ತಿದ್ದೀರಿ ಅಂದ್ರೆ ನಮ್ಮಂಥ ಯುವಕರಿಗೆ ಒಂದು ಭರವಸೆ ಮೂಡಿದೆ ಎಂದು ಗೋವಿಂದರಾಜನಗರದ ಚಂದ್ರಾ ಲೇಔಟಿನ ಅಭಿಷೇಕ್ ಹೇಳಿದರು.
ಹಿರಿಯ ನಾಗರಿಕರು ಮೆಚ್ಚಿದ ಅಭ್ಯರ್ಥಿ
ನಂದನ್ ತುಂಬ ಸರಳ ವ್ಯಕ್ತಿ. ನೀವು ಕಾಣಬಯಸುವ ಬದಲಾವಣೆ ನೀವೇ ಆಗಿ ಎಂಬ ಗಾಂಧೀಜಿಯವರ ಮಾತಿಗೆ ಒಂದು ಉದಾಹರಣೆ ನಂದನ್ ಎಂದು ಹಿರಿಯ ನಾಗರಿಕರಾದ ಮಂಜುನಾಥ್ ಪತ್ರಕರ್ತರೊಬ್ಬರ ಪ್ರಶ್ನೆಗೆ ಉತ್ತರಿಸುತ್ತ ಹೇಳಿದರು.
ಬೆಂಗಳೂರಿನಲ್ಲಿ ಇನ್ನೂ ಬದಲಾವಣೆ ಬೇಕಿದೆ
ಬೆಂಗಳೂರಿನಲ್ಲಿ ನಿಜವಾಗ್ಲೂ ಒಂದು ಬದಲಾವಣೆ ತರಬೇಕಾಗಿದೆ. ನಾನು ಯಾವತ್ತೂ ಸಮಸ್ಯೆಗಳಿಗೆ ಪರಿಹಾರ ಹುಡುಕೋ ಅಂಥ ವ್ಯಕ್ತಿ. ಬೆಂಗಳೂರು ದಕ್ಷಿಣ ಭಾಗದಲ್ಲಿ ಏನೇನು ಸಮಸ್ಯೆಗಳಿವೆ ಅಂತ ನಂಗೆ ಜನರೊಂದಿಗೆ ಪ್ರತಿನಿತ್ಯ ಒಡನಾಟದಿಂದ ಅರಿವಿಗೆ ಬರ್ತಿದೆ. ನಾನು ಈ ಸಮಸ್ಯೆಗಳಿಗೆ ಸೂಕ್ತ ಮತ್ತು ಸ್ಥಳೀಯ ಪರಿಹಾರ ಕಂಡುಹಿಡಿಯೋ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ ಎಂದು ನಂದನ್ ಈ ಸಂದರ್ಭದಲ್ಲಿ ಮಾತನಾಡುತ್ತ ಹೇಳಿದರು.
ವಿಇಟಿ ಕಾಲೇಜಿನ ಘಟನೆ ಬಗ್ಗೆ ನಂದನ್
ಪದ್ಮನಾಭ ನಗರದಲ್ಲಿ ಪ್ರಚಾರ ಮಾಡುತ್ತಿದ್ದ ನಂದನ್ ಅವರಿಗೆ ‘ಇಂದು ಬೆಳಗ್ಗೆ ವಿಇಟಿ ಕಾಲೇಜಿನಲ್ಲಿ ನಡೆದ ಸಂವಾದದಲ್ಲಿ ಅನಂತ್ ಕುಮಾರ್ ಅವರಿಗೆ ಉಪನ್ಯಾಸಕಿಯೊಬ್ಬರು ಕ್ಷೇತ್ರದ ಅಭಿವೃದ್ಧಿಗೆ ನೀವೇನು ಮಾಡಿದ್ದೀರಿ ಎಂದು ಕೇಳಿದ ಪ್ರಶ್ನೆಗೆ ತಬ್ಬಿಬ್ಬಾಗಿ, ಮುಜುಗರದಿಂದ ಉತ್ತರ ನೀಡದೇ, ಸಂವಾದವನ್ನೇ ಮೊಟಕುಗೊಳಿಸಿ ಹೊರನಡೆದ ಘಟನೆಗೆ ಬಗ್ಗೆ ನಂದನ್ ಪ್ರತಿಕ್ರಿಯಿಸಿದ್ದು ಹೀಗೆ
'ನನ್ನ ಎದುರಾಳಿ ತನರ ಕಷ್ಟಸುಖಕ್ಕೆ ಕಿವಿ ಮುಚ್ಚಿಕೊಂಡಿದ್ದಾರೆ. ಜನತೆಯ ಒಂದೇ ಒಂದು ಧ್ವನಿ ಕೂಡ ಶಕ್ತಿಶಾಲಿ ಅಂತ ನಾನು ಭಾವಿಸ್ತೇನೆ' ಎಂದರು.
ಈ ಮನೋಭಾವ ಪ್ರಜಾಸತ್ತೆಗೆ ಒಳ್ಳೇದಲ್ಲ
ನಾವು ಈ ನಗರದ ನಾಗರಿಕರು. ಒಂದು ದೊಡ್ಡ ಧ್ವನಿ ಸಾಕು, ಇಡೀ ಚರ್ಚೆಯ ದಿಕ್ಕನ್ನು ಬದಲಿಸುತ್ತೆ, ನಗರದ ಅಭಿವೃದ್ಧಿಗೆ ಸಹಾಯ ಮಾಡುತ್ತೆ. ಆದರೆ ನನ್ನ ಎದುರಾಳಿಗೆ ಜನರ ಮಾತನ್ನು ಆಲಿಸುವ ತಾಳ್ಮೆಯೇ ಇಲ್ಲ. ಜನರ ಬಾಯಿ ಮುಚ್ಚಿಸಕ್ಕೆ ನೋಡ್ತಾರೆ. ಅವರ ಈ ಮನೋಭಾವ ಪ್ರಜಾಸತ್ತೆಗೆ ಒಳ್ಳೇದಲ್ಲ ಎಂದರು.
ಕಷ್ಟ ಸುಖ ಅರಿತುಕೊಳ್ಳಲು ಸೂಕ್ತ ವೇದಿಕೆ
ನನ್ನ ಪ್ರಚಾರದ ಆರಂಭದಿಂದಲೂ ನಾನು ಜನರ ಕಷ್ಟ ಸುಖ ಅರಿತುಕೊಳ್ಳೋದಕ್ಕೆ ಪ್ರಯತ್ನ ಮಾಡ್ತಾನೆ ಇದ್ದೀನಿ. ಸಾವಿರಾರು ಜನ ನಂಗೆ ತಮ್ಮ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಬರೀತಾನೆ ಇದ್ದಾರೆ. ಕೆಲವರು ತಾಳ್ಮೆಯಿಂದ ವಿವರಿಸಿದರೆ, ಕೆಲವರು ಅಸಹನೆಯಿಂದ ಏನೂ ಅಭಿವೃದ್ಧಿಯಾಗಿಲ್ಲ ಎಂದು ಹೇಳ್ತಿದ್ದಾರೆ. ಆದರೆ ಅವರ ಪ್ರಶ್ನೆಗಳು ಏನೇ ಇರಲಿ, ನಾನು ತಾಳ್ಮೆಯಿಂದ ಕೇಳಿ, ಉತ್ತರಿಸಲಿಕ್ಕೆ ಪ್ರಯತ್ನ ಪಟ್ಟಿದ್ದೀನಿ ಎಂದು ನಂದನ್ ವಿವರಿಸಿದರು.
ಬಿಎಂಟಿಸಿ ಉದ್ಯೋಗಿಗಳ ಜತೆ ಸಭೆ
ಇತ್ತೀಚೆಗೆ ಬಸ್ ಡೇ ದಿನದಂದು ಬಸ್ ಹತ್ತಿದ್ದ ನಂದನ್ ಅವರು ಬಿಎಂಟಿಸಿ ಉದ್ಯೋಗಿಗಳ ಜತೆ ಸಭೆ ನಡೆಸಿದ ನಂತರ ಬಸವನಗುಡಿಯಲ್ಲಿ ಮತಯಾಚನೆ ನಡೆಸಿದರು.
|
ಬಿಎಂಟಿಸಿ ಉದ್ಯೋಗಿಗಳ ಜತೆ ಸಭೆ ಟ್ವೀಟ್
ಬಿಎಂಟಿಸಿ ಉದ್ಯೋಗಿಗಳ ಜತೆ ಸಭೆ ಬಗ್ಗೆ ನಂದನ್ ನಿಲೇಕಣಿ ಅವರಿಂದ ಟ್ವೀಟ್