ಬೆಂಗಳೂರಿನ ಬುಧವಾರದ ನಿಗೂಢ ಶಬ್ದದ ರಹಸ್ಯ ಬಯಲು
ಬೆಂಗಳೂರು, ಮೇ 20: ಬೆಂಗಳೂರಿನ ಅನೇಕ ಬಡಾವಣೆಗಳಲ್ಲಿ ಬುಧವಾರ ಮಧ್ಯಾಹ್ನ ಬೆಚ್ಚಿ ಬೀಳುವಂತೆ ಮಾಡಿದ ಶಬ್ದದ ರಹಸ್ಯ ಬಯಲಾಗಿದೆ. ಬೆಂಗಳೂರನ್ನು ನಡುಗುವಂತೆ ಮಾಡಿದ ಶಬ್ದವು ಭೂಕಂಪದಿಂದ ಉಂಟಾಗಿದ್ದಲ್ಲ, ಬೇರೆ ಯಾವುದೇ ಸ್ಫೋಟವಲ್ಲ ಎಂದು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣ ಕೇಂದ್ರ(kSNDMC)ದ ಅಧಿಕಾರಿಗಳು ಸ್ಪಷ್ಟಪಡಿಸಿದ್ದರು.
ಆದರೆ, ಇನ್ನು ಸ್ಪಷ್ಟವಾದ ಉತ್ತರ ಸಿಕ್ಕಿರಲಿಲ್ಲ. ಸಂಜೆ ವೇಳೆಗೆ ಈ ಎಲ್ಲಾ ಗೊಂದಲ, ಕುತೂಹಲ, ರಹಸ್ಯಕ್ಕೆ ಭಾರತೀಯ ವಾಯುಸೇನೆ ತೆರೆ ಎಳೆದಿದೆ. ರಕ್ಷಣಾ ಇಲಾಖೆಯ ಬೆಂಗಳೂರಿನ ವಕ್ತಾರರು ಟ್ವೀಟ್ ಮಾಡಿ ಸ್ಪಷ್ಟನೆ ನೀಡಿದ್ದಾರೆ.
#Update
— PRO Bengaluru, Ministry of Defence (@Prodef_blr) May 20, 2020
It was a routine IAF Test Flight involving a supersonic profile which took off from Bluru Airport and flew in the allotted airspace well outside City limits. The aircraft was of Aircraft Systems and Testing Establishment (ASTE) @IAF_MCC @SpokespersonMoD
ಬೆಂಗಳೂರಿನ ವೈಟ್ ಫೀಲ್ಡ್, ಟಿನ್ ಫ್ಯಾಕ್ಟರಿ, ಕೋರಮಂಗಲ, ಜಯನಗರ, ಎಚ್ ಎಸ್ ಆರ್ ಲೇ ಔಟ್, ಕೆ. ಆರ್ ಪುರಂ, ಬನ್ನೇರುಘಟ್ಟ ರಸ್ತೆ, ಮುಂತಾದೆಡೆ ಈ ಶಬ್ದ ಕೇಳಿ ಬಂದ ಶಬ್ದಕ್ಕೆ ಕಾರಣವಾಗಿದ್ದು ಯುದ್ಧ ವಿಮಾನ.
ಬೆಂಗಳೂರಿಗರನ್ನು ಬೆಚ್ಚಿಬೀಳುವಂತೆ ಮಾಡಿದ ನಿಗೂಢ ಶಬ್ದ
ಕೊರೊನಾವೈರಸ್ ನಿಂದ ಲಾಕ್ಡೌನ್ ಆಗಿದ್ದ ವಾಯುನೆಲೆಗಳು ಕೆಲದಿನಗಳಿಂದ ಕಾರ್ಯನಿರ್ವಹಿಸಲು ಆರಂಭಿಸಿವೆ. ಇಂದು ಮಧ್ಯಾಹ್ನದ ವೇಳೆ ಸುಖೋಯ್ 30 ಯುದ್ಧ ವಿಮಾನವೊಂದು ಬೆಂಗಳೂರಿನ ಉತ್ತರ ಭಾಗದಲ್ಲಿ ಹಾರಾಟ ನಡೆಸಿದೆ. ತೀರಾ ಕೆಳ ಮಟ್ಟದಲ್ಲಿ ಹಾರಾಟ ನಡೆಸಿದ್ದರಿಂದ ಅಗತ್ಯಕ್ಕಿಂತ ದೊಡ್ಡ ಮಟ್ಟದಲ್ಲಿ ಶಬ್ದ ಕೇಳಿಸಿರಬಹುದು ಎಂದು ವಿಜ್ಞಾನಿಗಳು ಹೇಳಿದ್ದಾರೆ. ಎಚ್ಎಎಲ್ ತರಬೇತಿ ಕೇಂದ್ರ ಆರಂಭವಾಗಿದ್ದರೂ ಯಾವುದೇ ವಿಮಾನ ಹಾರಾಟವಾಗಿಲ್ಲ ಎಂದು ಸಂಸ್ಥೆ ಹೇಳಿದ್ದರಿಂದ ಕುತೂಹಲ ಇನ್ನಷ್ಟು ಹೆಚ್ಚಾಗಿತ್ತು.
|
ಹಿರಿಯ ಸಂಪಾದಕ ಶಿವ್ ಅರೂರ್ ಟ್ವೀಟ್
ಬೆಂಗಳೂರಿನ ಪೂರ್ವ ಉತ್ತರ ಹಾಗೂ ದಕ್ಷಿಣ ಕೆಲ ಭಾಗದಲ್ಲಿ ಬುಧವಾರ ಮಧ್ಯಾಹ್ನ ಕೇಳಿ ಬಂದ ಭಾರಿ ಶಬ್ದಕ್ಕೆ ಕಾರಣವಾಗಿದ್ದು ಯುದ್ಧ ವಿಮಾನದ ಹಾರಾಟ ಎಂದು ಭಾರತೀಯ ವಾಯುಸೇನೆ ಸ್ಪಷ್ಟಪಡಿಸಿದೆ ಎಂದು ಇಂಡಿಯಾ ಟುಡೇ ಹಿರಿಯ ಸಂಪಾದಕ ಶಿವ್ ಅರೂರ್ ಟ್ವೀಟ್ ಮಾಡಿದ್ದಾರೆ.
ನಾಗರಿಕರ ಅಭಿಪ್ರಾಯ, ಅನುಭವ
ನಮಗೆ ಭೂಕಂಪದ ಅನುಭವವಾಗಿಲ್ಲ, ಟ್ರಾನ್ಸ್ ಫಾರ್ಮರ್ ಸ್ಫೋಟ ಎಂದು ಭಾವಿಸಿದೆವು ಆದರೆ, ನಂತರ ಇದು ಭೂಕಂಪವಲ್ಲ ಎಂದು ತಿಳಿದು ಬಂದಿದೆ. ತಕ್ಷಣವೇ ತಮ್ಮ ವಾಟ್ಸಾಪ್ ಗುಂಪಿನಲ್ಲಿ ಈ ಬಗ್ಗೆ ವಿಷಯ ಹಂಚಿಕೊಂಡೆವು ಎಂದು ಎಚ್ ಎಸ್ ಆರ್ ಲೇ ಔಟ್ ನ ಅಪಾರ್ಟ್ಮೆಂಟ್ ನಿವಾಸಿ ಸುಷ್ಮಾ ಅವರು ತಿಳಿಸಿದ್ದಾರೆ. ಇದೇ ರೀತಿ ಅನುಭವವನ್ನು ಹಲವು ಮಂದಿ ಹಂಚಿಕೊಂಡಿದ್ದಾರೆ. ಒಟ್ಟಾರೆ, ಇದು ಭೂಮಿಯಲ್ಲಲ್ಲ ಆಗಸದಲ್ಲಿ ಏನೋ ಆಗಿದೆ ಎಂಬುದು ಜನರ ಅಭಿಪ್ರಾಯವಾಗಿದೆ.
ಭೂಕಂಪವಂತೂ ಅಲ್ಲವೇ ಅಲ್ಲ: ಕೆಎಸ್ಎನ್ ಡಿಎಂಸಿ
''ಇದು ಭೂಕಂಪವಾಗಿರಲು ಸಾಧ್ಯವಿಲ್ಲ ನಮ್ಮ ಮಾಪಕಗಳಲ್ಲಿ ಯಾವುದೇ ದಾಖಲೆ ರೆಕಾರ್ಡ್ ಆಗಿಲ್ಲ. ಈ ಬಗ್ಗೆ ಕಂಟ್ರೋಲ್ ರೂಮಿಗೆ ಸಾಕಷ್ಟು ಕರೆಗಳು ಬಂದಿವೆ. ಕೆಲವು ಭೂ ಕಂಪನದ ಅನುಭವ ಹಂಚಿಕೊಂಡಿದ್ದಾರೆ. ಹಲವಾರು ಮಂದಿ ಭಾರಿ ಶಬ್ದ ಕೇಳಿಸಿದೆ ಎಂದಿದ್ದಾರೆ, ಈ ಬಗ್ಗೆ ಪರಿಶೀಲಿಸುತ್ತಿದ್ದೇವೆ'' ಎಂದು ಕೆಎಸ್ ಎನ್ ಡಿಎಂಸಿ ನಿರ್ದೇಶಕ ಶ್ರೀನಿವಾಸ ರೆಡ್ಡಿ ಪ್ರತಿಕ್ರಿಯಿಸಿದ್ದಾರೆ.
''ಅಂಫಾನ್ ಚಂಡಮಾರುತದ ದೆಸೆಯಿಂದ ತಂಪಾದ ವಾತವಾರಣವಿದೆ. ಈ ಸಂದರ್ಭದಲ್ಲಿ ಸೈಕ್ಲೋನ್ ಗಾಳಿ ರಭಸವಾಗಿ ನಿರ್ವಾತಕ್ಕೆ ನುಗ್ಗಿದಾಗ ಆಗಸದಲ್ಲಿ ಉಂಟಾದ ಶಬ್ದ ಇದು ಎಂದು ಹೇಳಬಹುದು. ಇದು ಭೂಕಂಪವಲ್ಲ. ಅತ್ಯಂತ ಸಣ್ಣ ಪ್ರಮಾಣದ ಕಂಪನವಾದರೂ ಅದನ್ನು ದಾಖಲಿಸುವ ಸಾಧನಗಳನ್ನು ನಮ್ಮ ಮೂರು ಕೇಂದ್ರಗಳು ಹೊಂದಿವೆ. ಬೆಂಗಳೂರು, ಗೌರಿಬಿದನೂರು ಕೇಂದ್ರಗಳಲ್ಲಿ ಯಾವುದೇ ಕಂಪನದ ದಾಖಲೆಗಳಾಗಿಲ್ಲ. ಇದು ಆಗಸದಲ್ಲಿ ಬಿಸಿ ಹಾಗೂ ತಂಪು ವಾಯುವಿನ ನಡುವಿನ ಸಂಘರ್ಷದಿಂದ ಉಂಟಾದ ಶಬ್ದ'' ಎಂದು ಮಾಜಿ ಮುಖ್ಯಸ್ಥ ಪ್ರಕಾಶ್ ಹೇಳಿದ್ದಾರೆ.
ಪೊಲೀಸ್ ಆಯುಕ್ತರ ಪ್ರತಿಕ್ರಿಯೆ
ಪೊಲೀಸ್ ಆಯುಕ್ತರ ಪ್ರತಿಕ್ರಿಯೆ: ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಪ್ರತಿಕ್ರಿಯಿಸಿ, ಈ ಬಗ್ಗೆ ಪೊಲೀಸ್ ಕಂಟ್ರೋಲ್ ರೂಮ್ 100ಕ್ಕೆ ಯಾವುದೇ ಕರೆ ಬಂದಿಲ್ಲ. ಏರ್ ಫೋರ್ಸ್ ಕಂಟ್ರೋಮ್ ರೂಮ್ ಅಧಿಕಾರಿಗಳನ್ನು ಸಂಪರ್ಕಿಸಿ ಈ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಎಲ್ಲಾದರೂ ವಿಮಾನ ಪತನವಾಗಿದೆಯೆ, ಯುದ್ಧ ವಿಮಾನ ಹಾರಾಟ ನಡೆಸಲಾಗಿದೆಯೆ ಎಂಬುದರ ಬಗ್ಗೆ ಚೆಕ್ ಮಾಡಲಾಗುತ್ತಿದೆ ಎಂದು ಹೇಳಿದ್ದರು.
|
ಸುಖೋಯ್ 30 ವಿಮಾನ ಹಾರಾಟ?
ಸುಖೋಯ್ 30 ವಿಮಾನ ಹಾರಾಟ ಎಂದು ನಂಬಲಾಗಿದೆ. ಆದರೆ, ಭಾರತದಲ್ಲೇ ನಿರ್ಮಾಣಗೊಂಡ ತೇಜಸ್ ಯುದ್ಧ ವಿಮಾನದ ಹಾರಾಟವೂ ಇದೇ ರೀತಿ ಶಬ್ದ ಉಂಟು ಮಾಡಬಹುದು.ವಿಮಾನವು ಮೋಡಗಳನ್ನು ಸೀಳಿ ಹಾರಾಟ ಮಾಡುವಾಗ ಸರಿ ಸುಮಾರು 300 ಡೆಸಿಬಲ್ ನಷ್ಟು ಶಬ್ದ ಉತ್ಪಾದಿಸುತ್ತದೆ. ಬಹುಶಃ ಹಲವು ದಿನಗಳ ಲಾಕ್ಡೌನ್ ನಿಂದ ವಾಯು ಮಾಲಿನ್ಯ ಕಡಿಮೆ ಆಗಿದ್ದರಿಂದ ಈ ಶಬ್ದ ಹೆಚ್ಚಿನ ವ್ಯಾಪ್ತಿಯನ್ನು ಪಡೆದುಕೊಂಡಿರಬಹುದು.