ಸೆ.30ರಂದು ಕರ್ನಾಟಕಕ್ಕೆ ಸೋನಿಯಾ ಭೇಟಿ
ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಸೋನಿಯಾ ಗಾಂಧಿ ಸೆ.30ರಂದು ಬೆಂಗಳೂರಿಗೆ ಆಗಮಿಸಿಲಿದ್ದು, ಅಂದು ಮಧ್ಯಾಹ್ನ 3 ಗಂಟೆಗೆ ಮಂಡ್ಯದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದಾರೆ ಎಂದರು.
ಸೆ.30ರಂದು ಬೆಂಗಳೂರಿನಲ್ಲಿ ಪಕ್ಷದ ನಾಯಕರೊಂದಿಗೆ ಲೋಕಸಭೆ ಚುನಾವಣೆಯ ಕುರಿತು ಚರ್ಚೆ ನಡೆಲಿರುವ ಸೋನಿಯಾ ಗಾಂಧಿ, ಚುನಾವಣೆಗೆ ಸಜ್ಜಾಗಲು ಪಕ್ಷದ ಮುಖಂಡರಿಗೆ ಮತ್ತು ಕಾರ್ಯಕರ್ತರಿಗೆ ಸಂದೇಶ ನೀಡಲಿದ್ದಾರೆ ಎಂದು ಹೇಳಿದರು.
ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದ ಹಿನ್ನಲೆಯಲ್ಲಿ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ರಾಜ್ಯಕ್ಕೆ ಆಗಮಿಸಿ, ಮತದಾರರಿಗೆ ಅಭಿನಂದನೆ ಸಲ್ಲಿಸಲು ಆಗಮಿಸಬೇಕಾಗಿತ್ತು.
ಆದರೆ, ಬೆಂಗಳೂರು ಗ್ರಾಮಾಂತರ ಮತ್ತು ಮಂಡ್ಯ ಲೋಕಸಭೆ ಉಪ ಚುನಾವಣೆ ಎದುರಾಗಿದ್ದರಿಂದ ಸೋನಿಯಾ ಗಾಂಧಿ ರಾಜ್ಯ ಪ್ರವಾಸ ಮುಂದೂಡಲಾಗಿತ್ತು. ಸದ್ಯ ಲೋಕಸಭೆ ಉಪ ಚುನಾವಣೆಯಲ್ಲಿಯೂ ಕಾಂಗ್ರೆಸ್ ಜಯಗಳಿಸಿದೆ. ಆದ್ದರಿಂದ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ.
ಲೋಕಸಭೆ ಚುನಾವಣೆ ಹತ್ತಿರವಾಗುತ್ತಿರುವುದರಿಂದ ಸೋನಿಯಾ ಗಾಂಧಿ ರಾಜ್ಯ ಪ್ರವಾಸ ಮಹತ್ವ ಪಡೆದುಕೊಂಡಿದೆ. ವಿಧಾನಸಭೆ ಚುನಾವಣೆಗಳ ನಂತರ ನಡೆದ ಉಪ ಚುನಾವಣೆಗಳನ್ನು ಗೆದ್ದು ಬೀಗುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಸೋನಿಯಾ ಭೇಟಿ ಮತ್ತಷ್ಟು ಶಕ್ತಿ ತುಂಬಬಹುದು.
ಮತ್ತೆ ಮೌಲ್ಯಮಾಪನ : ಸಿಎಂ ಸಿದ್ದರಾಮಯ್ಯ ಸಂಪುಟದ ಸಚಿವರ ಮೌಲ್ಯ ಮಾಪನ ಮಾಡುವ ವಿಚಾರದಲ್ಲಿ ಕೆಪಿಸಿಸಿ ಅಧ್ಯಕ್ಷ ಮತ್ತು ಸಿದ್ದರಾಮಯ್ಯ ನಡುವೆ ಭಿನ್ನಮತ ಉಂಟಾಗಿದೆ. ಆದರೆ, ತಮ್ಮ ನಿಲುವಿನಿಂದ ಪರಮೇಶ್ವರ್ ಹಿಂದೆ ಸರಿದಿಲ್ಲ. ಪಕ್ಷದ ಆದೇಶದಂತೆ ಮೌಲ್ಯಮಾಪನ ಮಾಡಿ, ರಾಹುಲ್ ಗಾಂಧಿ ಅವರಿಗೆ ವರದಿ ನೀಡಬೇಕಾಗಿದೆ. ಆದ್ದರಿಂದ ಸಚಿವರ ಮೌಲ್ಯಮಾಪನ ನಡೆಸಲಾಗುತ್ತದೆ ಎಂದು ಅವರು ಹೇಳಿದ್ದಾರೆ. (ಸಚಿವರ ಟೆಸ್ಟ್ : ಸಿದ್ದು, ಪರಮೇಶ್ವರ್ ನಡುವೆ ಭಿನ್ನಮತ)