ಮಾವನಿಗೆ ಉಗ್ರ ಪಟ್ಟ ಕಟ್ಟಲು ಹೊರಟ ಅಳಿಯನ ಸಂಚು ಏನು ಗೊತ್ತಾ?
ಬೆಂಗಳೂರು, ಅಕ್ಟೋಬರ್ 5: ಕರ್ನಾಟಕ ಹೈಕೋರ್ಟ್ನ್ನು ಬಾಂಬ್ ಇಟ್ಟು ಸ್ಫೋಟಿಸುತ್ತೇವೆ ಎಂದು ಬೆದರಿಕೆ ಪತ್ರವೊಂದು ಬಂದಿತ್ತು.
ಆ ಪತ್ರದ ಜಾಡು ಹಿಡಿದು ಹೊರಟ ಪೊಲೀಸರಿಗೆ ಬೆದರಿಕೆ ಪತ್ರದ ಹಿಂದಿನ ಅಸಲಿಯತ್ತು ಗೊತ್ತಾಗಿದೆ. ಮಾವನ ಮೇಲಿನ ಸೇಡಿಗಾಗಿ ಹೈಕೋರ್ಟ್ ಸ್ಫೋಟಿಸುವುದಾಗಿ ಹುಸಿ ಬಾಂಬ್ ಬೆದರಿಕೆ ಹಾಕಿದ್ದ ಉತ್ತರ ಪ್ರದೇಶ ಮೂಲದ ವ್ಯಕ್ತಿಯನ್ನು ವಿಧಾನಸೌಧ ಪೊಲೀಸರು ಬಂಧಿಸಿದ್ದಾರೆ.
ಎಲೆಕ್ಟ್ರಾನಿಕ್ ಸಿಟಿಯಲ್ಲಿ ಉಗ್ರರ ತಾಣ ಪತ್ತೆ, ಸುಧಾರಿತ ಸ್ಫೋಟಕ ವಸ್ತು ವಶ
ಉತ್ತರ ಪ್ರದೇಶದ ನಾಗ್ಪುರ ನಿವಾಸಿ ರಾಜೇಂದ್ರ ಸಿಂಗ್ ಬಂಧಿತ. ಹೈಕೋರ್ಟ್ಗೆ ಸೆ.17ರಂದು ಇಂಟರ್ ನ್ಯಾಷನಲ್ ಖಲಿಸ್ತಾನ ಬೆಂಬಲಿಗರ ಗುಂಪಿನ ಸದಸ್ಯ ಎಂದು ಹೇಳಿಕೊಂಡು ದೆಹಲಿಯ ಮೋತಿನಗರದ ಹರ್ದರ್ಶನ್ ಸಿಂಗ್ ಹೆಸರಿನಲ್ಲಿ ಬೆದರಿಕೆ ಪತ್ರ ಬಂದಿತ್ತು. ಮಗನ ಜೊತೆ ಸೇರಿ ಹೈಕೋರ್ಟ್ನ ಬೇರೆ ಬೇರೆ ಭಾಗಗಳಲ್ಲಿ ಬಾಂಬ್ ಇಟ್ಟಿದ್ದು, ಸ್ಫೋಟಗೊಳ್ಳಲಿದೆ ಎಂದು ಉಲ್ಲೇಖವಾಗಿತ್ತು.
ಈ ಪತ್ರ ಹೈಕೋರ್ಟ್ ರಿಜಿಸ್ಟಾರ್ಗೆ ಕೈ ತಲುಪಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ವಿಧಾನಸೌಧ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಕೇಂದ್ರ ವಿಭಾಗ ಡಿಸಿಪಿ ಚೇತನ್ ಸಿಂಗ್ ರಾಥೋಡ್ ನೇತೃತ್ವದ ವಿಶೇಷ ತಂಡ ರಚಿಸಿ ಪತ್ರದ ಜಾಡು ಹಿಡಿದಾಗ ದೆಹಲಿ ನಿವಾಸದಲ್ಲಿ ಹರ್ದರ್ಶನ್ ಸಿಂಗ್ ಸಿಕ್ಕಿದ್ದು, ಅವರು ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದರು.
ಪತ್ರದ ಕುರಿತು ಅವರನ್ನು ಪ್ರಶ್ನಿಸಿದಾಗ ನಾನು ಆ ಪತ್ರ ಬರೆದಿಲ್ಲ. ನನ್ನ ಅಳಿಯ ಕೌಟುಂಬಿಕ ವಿಚಾರಕ್ಕೆ ಗಲಾಟೆ ಮಾಡಿದ್ದಾನೆ.ಆತ ನನಗೆ ತೊಂದರೆ ಕೊಡುವ ಉದ್ದೇಶದಿಂದ ನನ್ನ ಹೆಸರಲ್ಲಿ ಪತ್ರ ರೆದಿರಬಹುದು ಎಂದು ಆತನ ವಿಳಾಸ ನೀಡಿದ್ದಾರೆ.
ಅಲ್ಲಿಗೆ ಹೋಗುವಷ್ಟರಲ್ಲಿ ಚೆನ್ನೈ ಪೊಲೀಸರು ಆರೋಪಿ ರಾಜೇಂದ್ರ ಸಿಂಗ್ನನ್ನು ಬಂಧಿಸಿ ಜೈಲಿಗೆ ತಳ್ಳಿದ್ದರು. ಆತ ಮದ್ರಾಸ್, ಹೈಕೋರ್ಟ್, ಮದ್ರಾಸ್ ಸೇರಿ ಒಟ್ಟು 7 ಹೈಕೋರ್ಟ್ಗಳಿಗೆ ಹೀಗೆಯೇ ಬೆದರಿಕೆ ಪತ್ರ ಕಳುಹಿಸಿದ್ದ ಎನ್ನಲಾಗಿದೆ.