ಆಂಬಿಡೆಂಟ್ ಪ್ರಕರಣ ಮುಚ್ಚಿ ಹಾಕಲು ಯತ್ನ: ರವಿಕೃಷ್ಣಾ ರೆಡ್ಡಿ ಆರೋಪ
ಬೆಂಗಳೂರು, ಡಿಸೆಂಬರ್ 14: ಸಾವಿರಾರು ಜನಕ್ಕೆ ಕೋಟ್ಯಂತರ ವಂಚನೆ ಆಗಿರುವ ಆಂಬಿಡೆಂಟ್ ಪ್ರಕರಣವನ್ನು ಮುಚ್ಚಿ ಹಾಕುವ ವ್ಯವಸ್ಥಿತ ಪ್ರಯತ್ನ ನಡೆಯುತ್ತಿದೆ ಎಂದು ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ ಅಧ್ಯಕ್ಷ ರವಿಕೃಷ್ಣಾ ರೆಡ್ಡಿ ಆರೋಪ ಮಾಡಿದರು.
ಶುಕ್ರವಾರ ಪ್ರೆಸ್ಕ್ಲಬ್ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಆಂಬಿಡೆಂಟ್ ಪ್ರಕರಣ ದೊಡ್ಡ ದೊಡ್ಡ ಉನ್ನತ ವ್ಯಕ್ತಿಗಳ ತಲೆದಂಡ ಕೇಳಲು ಪ್ರಾರಂಭಿಸಿದ್ದರಿಂದ ಸರ್ಕಾರ ಮತ್ತು ಅಧಿಕಾರಿಗಳು ಮುತುವರ್ಜಿ ವಹಿಸಿ ತನಿಖೆಯನ್ನು ಹಳ್ಳ ಹಿಡಿಸಿ ವಂಚನೆಗೊಳಗಾದವರಿಗೆ ನ್ಯಾಯ ದೊರಕದಂತೆ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಆಂಬಿಡೆಂಟ್ ಪ್ರಕರಣ : ಅಲಿಖಾನ್ಗೆ ಷರತ್ತು ಬದ್ಧ ಜಾಮೀನು
ಆಂಬಿಡೆಂಟ್ ಪ್ರಕರಣದ ಬಗ್ಗೆ ಪೂರ್ಣ ವಿವರ ನೀಡಿದ ರವಿಕೃಷ್ಣಾರೆಡ್ಡಿ ಅವರು, ಸಾವಿರಾರು ಜನ ತಮ್ಮ ಉಳಿತಾಯವನ್ನೆಲ್ಲಾ ಆಂಬಿಡೆಂಟ್ನಲ್ಲಿ ಹೂಡಿದ್ದಾರೆ. ಬಡ ಮುಸ್ಲಿಂ ಕುಟುಂಬಗಳನ್ನೇ ಗುರಿ ಮಾಡಿಕೊಂಡು ಈ ವಂಚನೆಯನ್ನು ಎಸೆಗಲಾಗಿದೆ ಎಂದು ಅವರು ಕೆಲವು ಉದಾಹರಣೆಗಳನ್ನು ನೀಡಿದರು. ಆಂಬಿಡೆಂಟ್ ನಿಂದ ವಂಚನೆಗೊಳಗಾದವರೂ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಸೈಯದ್ ಫರೀದ್ ಹಣವನ್ನು ಯಾರಿಗೆ ಕೊಟ್ಟ?
ಪ್ರಕರಣದ ಪ್ರಮುಖ ಆರೋಪಿಗಳಲ್ಲೊಬ್ಬರಾದ ಸೈಯದ್ ಫರೀದ್, ತಾನು ಹಣವನ್ನು ತೆಗೆದುಕೊಂಡಿದ್ದಾಗಿ ಒಪ್ಪಿಕೊಂಡಿದ್ದಾನೆ ಮತ್ತು ಹಣವನ್ನು ವಾಪಸ್ ನೀಡುವುದಾಗಿ ಹೇಳಿದ್ದಾನೆ. ಆದರೆ ಈತ ಹಣವನ್ನು ಏಕೆ ಪಡೆದಿದ್ದ, ಯಾರಿಗೆ ನೀಡಿದ್ದ? ಈಗ ಎಲ್ಲಿಂದ ಅಷ್ಟು ದೊಡ್ಡ ಮೊತ್ತದ ಹಣ ತರುತ್ತಾನೆ ಎಂಬೆಲ್ಲ ಪ್ರಶ್ನೆಗಳು ಏಳುತ್ತಿವೆ. ಇವುಗಳ ಬಗ್ಗೆ ಪೂರ್ಣ ತನಿಖೆ ಆಗಬೇಕಿದೆ ಎಂದು ಅವರು ಹೇಳಿದರು.
ವಿಜಯ್ ಟಾಟಾ ರನ್ನು ಬಂಧಿಸಿ
ಸೈಯದ್ ಫರೀದ್ 38 ಕೋಟಿ ಹಣವನ್ನು ಉದ್ಯಮಿ ವಿಜಯ್ ಟಾಟಾಗೆ ನೀಡಿರುವುದಾಗಿ ತನಿಖೆ ವೇಳೆ ಒಪ್ಪಿಕೊಂಡಿದ್ದಾನೆ ಹಾಗಾಗಿ ಕೂಡಲೇ ಉದ್ಯಮಿ ವಿಜಯ್ ಟಾಟಾ ರನ್ನು ಬಂಧಿಸಬೇಕು ಎಂದು ಅವರು ಆಗ್ರಹಿಸಿದರು. ವಿಜಯ್ ಟಾಟಾ ಮನೆಯ ಮೇಲೆ ನಿನ್ನೆ ದಾಳಿ ಆಗಿದೆ.
ಆಂಬಿಡೆಂಟ್ ವಂಚನೆ ಪ್ರಕರಣ : ಜನಾರ್ದನ ರೆಡ್ಡಿಗೆ ತಾತ್ಕಾಲಿಕ ನೆಮ್ಮದಿ
ಹನಿಟ್ರಾಪಿಂಗ್ ಬಳಸಲಾಗುತ್ತಿದೆ
ಆಂಬಿಡೆಂಟ್ ಪ್ರಕರಣದಲ್ಲಿ ದೊಡ್ಡ ದೊಡ್ಡ ವ್ಯಕ್ತಿಗಳು ತಮ್ಮ ಹೆಸರುಗಳು ಹೊರ ಬರದಂತೆ ತಡೆಯಲು ನಾನಾ ರೀತಿಯ ಯತ್ನಗಳನ್ನು ಮಾಡುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಅದರ ಬಗ್ಗೆ ಸಾಕ್ಷ್ಯ ಕಲೆ ಹಾಕುತ್ತಿದ್ದೇವೆ. ಈ ಪ್ರಕರಣದಲ್ಲಿ ತನಿಖಾಧಿಕಾರಿಗಳ ದಾರಿ ತಪ್ಪಿಸಲು ಹನಿಟ್ರಾಪಿಂಗ್ ಮಾಡಲಾಗಿದೆ ಎಂಬ ಮಾಹಿತಿಯೂ ಇದೆ ಎಂದು ಅವರು ಬಾಂಬ್ ಎಸೆದರು.
ನಮಗೆ ಕರೆ ಮಾಡಿ ಮಾಹಿತಿ ನೀಡಿ
ಲಂಚಮುಕ್ತ ಕರ್ನಾಟಕ ವೇದಿಕೆಯು ಆಂಬಿಡೆಂಟ್ ಪ್ರಕರಣದ ವಿರುದ್ಧ ಹೋರಾಟ ಮಾಡುತ್ತಿದ್ದು, ಪ್ರಕರಣದ ಬಗ್ಗೆ ಸ್ವತಂತ್ರ್ಯ ತನಿಖೆ ಕೈಗೊಂಡಿದೆ. ಈಗಾಗಲೇ ಹಲವು ದಾಖಲೆಗಳು, ಸಾಕ್ಷ್ಯಗಳನ್ನು ವಶಪಡಿಸಿಕೊಂಡಿದ್ದೇವೆ. ಆಂಬಿಡೆಂಟ್ನಿಂದ ಮೋಸ ಹೋದವರು, ಪ್ರಕರಣದ ಬಗ್ಗೆ ಮಾಹಿತಿ ಉಳ್ಳವರು ನಮಗೆ 8884277730 ಸಂಖ್ಯೆಗೆ ಕರೆ ಮಾಡಿ ಮಾಹಿತಿ ಹಂಚಿಕೊಳ್ಳಬಹುದು ಎಂದು ಅವರು ಹೇಳಿದರು.