ಒಳ್ಳೆಯ ಕೆಲಸವನ್ನು ಪ್ರಚಾರ ಮಾಡದಿದ್ದರೆ ಕೆಲವರು ಅಪಪ್ರಚಾರ ಮಾಡುತ್ತಾರೆ
ಒಳ್ಳೆಯ ಕೆಲಸವನ್ನು ಪ್ರಚಾರ ಮಾಡದಿದ್ದರೆ ಕೆಲವರು ಅಪಪ್ರಚಾರ ಮಾಡುತ್ತಾರೆ
ಬೆಂಗಳೂರು, ಡಿ 8: ನಾವು ಪ್ರಚಾರವನ್ನು ಬಯಸುವವರಲ್ಲ, ಆದರೆ ಸಂಪುಟ ನರಸಿಂಹ ಸುಬ್ರಮಣ್ಯ ಮಠದಿಂದ, ಯಾವ ಒಳ್ಳೆಯ ಕೆಲಸವೂ ನಡೆಯುತ್ತಿಲ್ಲ ಎಂದು ಅಪಪ್ರಚಾರ ಮಾಡಲಾಗುತ್ತಿದೆ, ಹಾಗಾಗಿ ಅಂತವರಿಗಾಗಿಯಾದರೂ, ನಾವು ಮಾಡುವ ಕೆಲಸ ಜನರಿಗೆ ತಿಳಿಯಬೇಕು ಎಂದು ಶ್ರೀಕುಕ್ಕೇ ಸುಬ್ರಮಣ್ಯ ಮಠದ ಯತಿಗಳಾದ ವಿದ್ಯಾಪ್ರಸನ್ನ ತೀರ್ಥರು ಹೇಳಿದ್ದಾರೆ.
ನಗರದಲ್ಲಿ 'ಒನ್ ಇಂಡಿಯಾದ' ಸಿಬ್ಬಂದಿಯೊಂದಿಗೆ ಮಾತನಾಡುತ್ತಿದ್ದ ಶ್ರೀಗಳು, ಕುಕ್ಕೇ ಸುಬ್ರಮಣ್ಯ ದೇವಾಲಯದ ಸಿಬ್ಬಂದಿಗಳು, ಮಠದ ವಿರುದ್ದ ವ್ಯವಸ್ಥಿತ ಅಪಪ್ರಚಾರವನ್ನು ಮಾಡುತ್ತಿದ್ದಾರೆ. ದೊಡ್ಡ ದೊಡ್ಡ ಫ್ಲೆಕ್ಸ್ ಗಳನ್ನು ಹಾಕಿ, ಸುಬ್ರಮಣ್ಯ ಮಠಕ್ಕೆ ಯಾರೂ ಹೋಗಬಾರದೆಂದು ಹೇಳುತ್ತಿದ್ದಾರೆಂದು ಶ್ರೀಗಳು ಬೇಸರ ವ್ಯಕ್ತಪಡಿಸಿದ್ದಾರೆ. (ತಾರಕಕ್ಕೇರಿದ ಕುಕ್ಕೇ ವಿವಾದ)
ನಾವು ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳುತ್ತಿಲ್ಲ, ಎಲ್ಲವನ್ನೂ ದೇವರು ನೋಡುತ್ತಿದ್ದಾರೆಂದು ಸುಮ್ಮನಾಗಿದ್ದೇವೆ. ಎಷ್ಟರ ಮಟ್ಟಿಗೆ ನಮಗೆ ತೊಂದರೆ ಕೊಡುತ್ತಿದ್ದಾರೆಂದರೆ, ನಾವು ವಿಶ್ರಾಂತಿ ತೆಗೆದುಕೊಳ್ಳುವ ಕೋಣೆಯ ಕಿಟಕಿಗೆ ಸರಿಯಾಗಿ, ಮೈಕನ್ನಿಟ್ಟು ಕಿರಿಕಿರಿ ಮಾಡುತ್ತಿದ್ದಾರೆಂದು ಸುಬ್ರಮಣ್ಯ ಮಠದ ಶ್ರೀಗಳು ಹೇಳಿದ್ದಾರೆ.
ರಚನಾ ಫೌಂಡೇಶನ್ ಸಹಯೋಗದೊಂದಿಗೆ, ಸುಬ್ರಮಣ್ಯ ಮಠ 'ಸಂಸ್ಕೃತಿ ಪಥ' ಎನ್ನುವ ಈ ಕಾರ್ಯಕ್ರಮವನ್ನು ಆಯೋಜಿಸಿದೆ. ಬಸವನಗುಡಿ ವ್ಯಾಪ್ತಿಯಲ್ಲಿ ಬರುವ 20 ಸರಕಾರೀ ಮತ್ತು ಅನುದಾನಿತ ಶಾಲೆಗಳ ಸುಮಾರು ಐನರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ, ನಮ್ಮ ಸಂಸ್ಕೃತಿ, ನಮ್ಮ ಭವ್ಯ ಹಿಂದೂ ಇತಿಹಾಸದ ಪರಿಚಯವನ್ನು ಮಾಡುತ್ತಿದ್ದೇವೆ, ಜೊತೆಗೆ ಜಾಗೃತಿ ಮೂಡಿಸುವ ಕೆಲಸವನ್ನೂ ಮಾಡುತ್ತಿದ್ದೇವೆ. (ಮತ್ತೆ ತಾರಕಕ್ಕೇರಿದ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ವಿವಾದ)
ಈ ಕಾರ್ಯಕ್ರಮ ಮುಂದಿನ ದಿನಗಳಲ್ಲಿ ಮುಂದುವರಿಯಲಿದೆ. ಇಂತಹ ಕಾರ್ಯಕ್ರಮಗಳಿಗೆ ಲಕ್ಷಾಂತರ ರೂಪಾಯಿ ಖರ್ಚಾಗುತ್ತದೆ. ಇಂತಹ ಕೆಲಸಗಳು ದಕ್ಷಿಣಕನ್ನಡ ಜಿಲ್ಲೆಯಲ್ಲೂ ನಾವು ಮಾಡುತ್ತಿದ್ದೇವೆ. ನಾವು ಪ್ರಚಾರ ಪ್ರಿಯರು ಅಲ್ಲದೇ ಇರುವುದರಿಂದ, ಇಂತಹ ವಿಚಾರಗಳು ಯಾರಿಗೂ ತಿಳಿದಿಲ್ಲ. ಆದರೆ, ಮಠದ ವಿರೋಧಿಗಳು, ನಮ್ಮ ವಿರುದ್ದ ಅಪಪ್ರಚಾರದಲ್ಲಿ ತೊಡಗಿರುವುದರಿಂದ, ಇನ್ನು ಮುಂದೆ ಪ್ರಚಾರ ಮಾಡಬೇಕಾಗುತ್ತದೆ ಎಂದು ಶ್ರೀಗಳು ಹೇಳಿದ್ದಾರೆ.
ಸಂಸ್ಕೃತಿ ಪಥದ ಕಾರ್ಯಕ್ರಮ
'ಸಂಸ್ಕೃತಿ ಪಥ'ದ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡುತ್ತಾ ಸುಬ್ರಮಣ್ಯ ಶ್ರೀಗಳು, ಆರು ತಿಂಗಳ ಹಿಂದೆ ಒಂದು ಕಾರ್ಯಕ್ರಮವನ್ನು ಉದ್ಘಾಟಿಸುವ ಪ್ರಸಂಗ ಬಂತು, ಅದಕ್ಕೆ ಹೆಸರು ಏನು ಇಡಬಹುದು ಎಂದು ನನ್ನಲ್ಲಿ ಕೇಳಿದಾಗ 'ಸಂಸ್ಕೃತಿ ಪಥ' ಎಂದು ಇಟ್ಟರೆ ಒಳ್ಳೆಯದು ಎಂದು ಸಲಹೆ ನೀಡಿದೆ. ಅಲ್ಲಿಂದ ಈ ಕಾರ್ಯಕ್ರಮ ನಡೆಯುತ್ತಾ ಬಂತು. ನಮ್ಮ ಬದುಕು ಸುಂದರವಾಗಿ ಇರಬೇಕಾದರೆ, ಮೊದಲು ಬೇಕಾಗಿರುವುದು ಉತ್ತಮ ಸಂಸ್ಕೃತಿ ಮತ್ತು ಸಂಸ್ಕಾರ - ವಿದ್ಯಾಪ್ರಸನ್ನ ತೀರ್ಥರು.
ಭಾರತೀಯ ಸಂಸ್ಕೃತಿ ಎನ್ನುವುದು ಪರಿಶುದ್ದವಾದ ಧರೆಯಿದ್ದಂತೆ
ಹಾಲು ಮತ್ತು ನೀರು ಎರಡೂ ಮನುಷ್ಯನ ಜೀವನದಲ್ಲಿ ಎಲ್ಲರಿಗೂ ಬೇಕಾಗಿರುವಂತದ್ದು. ಆದರೆ, ನೀರಿಗೆ ಹಾಲು ಸಮಾನವಾದುದಲ್ಲ. ಭಾರತೀಯ ಸಂಸ್ಕೃತಿ ಎನ್ನುವುದು ಪರಿಶುದ್ದವಾದ ಧರೆಯಿದ್ದಂತೆ. ಮಾನವ ಬದುಕನ್ನು ಭಗವಂತ ನಮಗೆ ಕರುಣಿಸಿದ್ದಾನೆ. ಬದುಕು ಎನ್ನುವ ಪುಟದಲ್ಲಿ ಅರವತ್ತು ಪುಟಗಳಿದ್ದವಂತೆ, ಅರವತ್ತು ವಿದ್ಯಾರ್ಥಿಗಳು ಇರುವ ಶಾಲೆಗೆ ಈ ಪುಸ್ತಕವನ್ನು ಕಳುಹಿಸಿ, ಅರವತ್ತು ದಿನದಲ್ಲಿ ವಾಪಸ್ ಕೊಡಲು ಹೇಳುತ್ತಾರೆ. ಹಾಗಾಗಿ, ಎಲ್ಲಾ ವಿದ್ಯಾರ್ಥಿಗಳು ತಮಗೆ ಕೊಟ್ಟದಿನದಂದು ಪುಸ್ತಕವನ್ನು ಓದಲೇ ಬೇಕಾಗುತ್ತದೆ. ಬದುಕು ಕೂಡಾ ಹೀಗೆ, ಇದ್ದಾಗ ಸಂಸ್ಕಾರದಿಂದ ಬದುಕಬೇಕು - ವಿದ್ಯಾಪ್ರಸನ್ನ ತೀರ್ಥರು.
ಭಗವಂತ ನಮಗೆ ಒಳ್ಳೆಯ ಶಾರೀರವನ್ನು ಕೊಟ್ಟಿದ್ದಾನೆ
ಭಗವಂತ ನಮಗೆ ಒಳ್ಳೆಯ ಶಾರೀರವನ್ನು ಕೊಟ್ಟಿದ್ದಾನೆ, ನಾವು ಈ ಜನ್ಮದಲ್ಲಿ ಒಳ್ಳೆಯ ಕೆಲಸವನ್ನು ಮಾಡಿದರೆ, ಮುಂದಿನ ಜನ್ಮದಲ್ಲೂ ಒಳ್ಳೆಯದನ್ನೇ ಮಾಡುತ್ತಾನೆ. ಭಾರತ ಒಳ್ಳೆಯ ಸಂಪ್ರದಾಯವಿರುವ ರಾಷ್ಟ್ರ. ಖುಷಿಮುನಿಗಳು ಕಾಡಿನಲ್ಲಿ ತಪಸ್ಸನ್ನು ಮಾಡುವ ಮೂಲಕ, ಒಳ್ಳೆಯ ಸಂಸ್ಕಾರವನ್ನು ನಮಗೆ ನೀಡಿದ್ದಾರೆ. ಅದನ್ನು ಸದ್ಭಳಕೆ ಮಾಡಬೇಕೆಂದು ವಿದ್ಯಾಪ್ರಸನ್ನ ಶ್ರೀಗಳು ಹೇಳಿದರು.
ರಾಷ್ಟ್ರದಲ್ಲಿ ಪ್ರೇಮದಿಂದ ಬದುಕಬೇಕು
ಉತ್ತಮ ಸಂಸ್ಕಾರ ಕೊಟ್ಟ ನಮ್ಮ ಈ ರಾಷ್ಟ್ರದಲ್ಲಿ ಪ್ರೇಮದಿಂದ ಬದುಕಬೇಕು, ಇಲ್ಲದಿದ್ದರೆ ಎಲ್ಲಾ ವ್ಯರ್ಥವಾಗುತ್ತದೆ. ರಾಷ್ಟ್ರಪ್ರೇಮವನ್ನು ನಾವು ಬೆಳೆಸಿಕೊಂಡರೆ, ಉತ್ತಮ ರಾಷ್ಟ್ರ ನಮ್ಮದು ಎನ್ನುವ ಹೆಸರು ನಮ್ಮ ದೇಶಕ್ಕೇನಿದೆಯೋ ಅದನ್ನು ಮುಂದುವರಿಸಿಕೊಂಡು ಹೋಗಬಹುದಾಗಿದೆ ಎಂದು ವಿದ್ಯಾಪ್ರಸನ್ನ ತೀರ್ಥರು, ವಿದ್ಯಾರ್ಥಿಗಳನ್ನು ಉದ್ದೇಶಿಸಿ ಹೇಳಿದರು.
ಗೀತೆ, ರಾಮಾಯಣ, ಮಹಾಭಾರತ
ಗೀತೆ, ರಾಮಾಯಣ, ಮಹಾಭಾರತ ನಮಗೆ ಬದುಕಿನ ಅರ್ಥ ಮತ್ತು ಶ್ರೇಷ್ಟತೆಯನ್ನು ಕರುಣಿಸಿದೆ. ಅದನ್ನೆಲ್ಲಾ ನಾವು ಸಮಾಜದಲ್ಲಿ ರೂಢಿಸಿಕೊಂಡರೆ, ಗಣ್ಯವ್ಯಕ್ತಿಯಾಗಿ ಬದುಕಬಹುದು. ಗೊಂಡೆ ಹೂವು ದೊಡ್ಡ ಹೂವಾದರೂ ಅದಕ್ಕೆ ಪರಿಮಳವಿರುದಿಲ್ಲ ಎನ್ನುವ ಹಾಗೆ, ಮಕ್ಕಳು ನೀವು ಸಂಸ್ಕಾರವನ್ನು ಬೆಳೆಸಿಕೊಂಡು, ಉತ್ತಮವಾದ ಬಾಳನ್ನು ಬಾಳಿ ಎಂದು ಶ್ರೀಗಳು ತಮ್ಮ ಆಶೀರ್ವಚನದಲ್ಲಿ ಹೇಳಿದರು.