ಕಂಕಣ ಸೂರ್ಯ ಗ್ರಹಣ: ಮನೆಯಿಂದ ಹೊರ ಬರದ ಯಡಿಯೂರಪ್ಪ
ಬೆಂಗಳೂರು, ಡಿಸೆಂಬರ್ 26: ಸೂರ್ಯ ಗ್ರಹಣ ಮುಗಿಯುವವರೆಗೂ ಮನೆಯಿಂದ ಹೊರಬರದಿರಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಿರ್ಧರಿಸಿದ್ದು, ನಾಯಕರ ಭೇಟಿಯನ್ನೂ ಕೂಡ ನಿರಾಕರಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಇನ್ನು ಮೊನ್ನೆಯಷ್ಟೇ ಗ್ರಹಣಕ್ಕೂ ಮುನ್ನ ಕೇರಳದ ದೇವಸ್ಥಾನಕ್ಕೆ ಹೋಗಿ ಬಿಎಸ್ವೈ ವಿಶೇಷ ಪೂಜೆ ಸಲ್ಲಿಸಿ ಬಂದಿದ್ದರು.ಗ್ರಹಣ ಸಂದರ್ಭದಲ್ಲಿ ಯಾವುದೇ ಕೆಲಸ ಕೈಗೆತ್ತಿಕೊಂಡರು ಶುಭವಾಗುವುದಿಲ್ಲ ಎಂಬುದು ವಾಡಿಕೆಯಾಗಿದೆ.
ಈ ಹಿನ್ನೆಲೆಯಲ್ಲಿ ಗ್ರಹಣ ಗೋಚರಿಸುವ ವೇಳೆ ದೇವಸ್ಥಾನದ ಬಾಗಿಲುಗಳನ್ನು ತೆರೆಯುವುದಾಗಲಿ, ಪೂಜೆ ಸಲ್ಲಿಸುವುದಾಗಲಿ ಮಾಡುವುದಿಲ್ಲ. ದೇವರಲ್ಲಿ ಅಪಾರ ನಂಬಿಕೆಯನ್ನು ಹೊಂದಿರುವ ಸಿಎಂ ಬಿಎಸ್ವೈ ಅವರು ಗ್ರಹಣ ಮುಗಿಯೋವರೆಗೂ ಮನೆಯಿಂದ ಹೊರಬರದಿರಲು ನಿರ್ಧರಿಸಿದ್ದಾರೆ. ಹೀಗಾಗಿ ಡಾಲರ್ಸ್ ಕಾಲೋನಿ ನಿವಾಸದಲ್ಲೇ ಉಳಿದುಕೊಂಡಿದ್ದಾರೆ.
ಕಂಕಣ ಸೂರ್ಯಗ್ರಹಣ ಹಿನ್ನೆಲೆಯಲ್ಲಿ ಗ್ರಹಣ ಮುಗಿಯೋವರೆಗೂ ಮನೆಯಿಂದ ಹೊರಬರದಿರಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನಿರ್ಧರಿಸಿದ್ದು, ದಿನನಿತ್ಯದ ವಾಕಿಂಗ್ಗೂ ತೆರಳದೇ ಮನೆಯಲ್ಲೇ ಉಳಿದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಇದಲ್ಲದೆ ಗ್ರಹಣ ಮುಗಿಯೋವರೆಗೂ ಯಾರ ಭೇಟಿಗೂ ಸಿಎಂ ಬಿಎಸ್ವೈ ಅವಕಾಶ ಮಾಡಿಕೊಟ್ಟಿಲ್ಲ. ಸಿಎಂ ಭೇಟಿಗೆ ಅವಕಾಶ ಇಲ್ಲದೆ ಇರುವುದರಿಂದದ ಸದ್ಯ ಸಿಎಂ ಮನೆಯ ಬಳಿ ಯಾವ ನಾಯಕರೂ ತೆರಳಿಲ್ಲ.
9 ವರ್ಷಗಳ ಬಳಿಕ ಸಂಭವಿಸುತ್ತಿರುವ ಕಂಕಣ ಸೂರ್ಯ ಗ್ರಹಣ ಇದಾಗಿದೆ. ಇದನ್ನು ವಿಜ್ಞಾನಿಗಳು ಹಾಗೂ ಜನರು ಕಣ್ತುಂಬಿಕೊಳ್ಳುತ್ತಿದ್ದಾರೆ. ಬೆಂಗಳೂರು ನೆಹರು ಪ್ಲಾನಿಟೋರಿಯಂನಲ್ಲಿ ಸೂರ್ಯಗ್ರಹಣ ವೀಕ್ಷಣೆ ಮಾಡಲಾಗುತ್ತಿದೆ. 5 ಟೆಲಿಸ್ಕೋಪ್ ಇರಿಸಲಾಗಿದೆ. ಸಿಲೋಸ್ಟಾಟ್ ನ ಮೂಲಕ ಗ್ರಹಣ ವೀಕ್ಷಣೆ ಮಾಡಲಾಗುತ್ತದೆ.
ಸಿಲೋಸ್ಟಾಟ್ ಮೂಲಕ ಸೂರ್ಯನ ಚಲನೆ ನೋಡಬಹುದಾಗಿದೆ. ಸೋಲಾರ್ ಗಾಗಲ್ಸ್ ಗಳನ್ನು ನೀಡಲಾಗುತ್ತದೆ. ಸೋಲಾರ್ ಗಾಗಲ್ಸ್ ನಿಂದ ಸೂರ್ಯನನ್ನು ನೋಡಬಹುದು. ಯಾವುದೇ ಬೈನಾಕ್ಯುಲರ್, ಎಕ್ಸರೇ ಬಳಕೆ ಮಾಡುವಂತಿಲ್ಲ.