ಬೆಂಗಳೂರಿನ ನೆಹರು ತಾರಾಲಯದಲ್ಲಿ ಗ್ರಹಣ ವೀಕ್ಷಣೆಯೇ ಚಂದ
ಬೆಂಗಳೂರು, ಡಿಸೆಂಬರ್ 26: ಇಂದು ಸಂಭವಿಸಿದ ಅಪರೂಪದ ಕಂಕಣ ಸೂರ್ಯಗ್ರಹಣವನ್ನು ಬೆಂಗಳೂರಿನ ನೆಹರು ತಾರಾಲಯದಲ್ಲಿ ಸಹಸ್ರಾರು ಜನ ನೋಡಿ ಖುಷಿ ಪಟ್ಟರು.
ಇದಕ್ಕಾಗಿ ನೆಹರು ತಾರಾಲಯದ ಸಿಬ್ಬಂದಿ, ನಾಲ್ಕು ಸಾಧಾರಣ ಟೆಲಿಸ್ಕೋಪ್ನ್ನು ಹಾಗೂ ಒಂದು ಬೃಹತ್ ಟೆಲಿಸ್ಕೋಪ್ನ್ನು ತಾರಾಲಯದ ಆವರಣದಲ್ಲಿ ಹಾಕಿದ್ದರು. ಒಂದು ಬೃಹತ್ ಟೆಲಿಸ್ಕೋಪ್ನಲ್ಲಿ ಕಾಣುವ ಗ್ರಹಣವನ್ನು ಪರದೆ ಮೇಲೆ ಸಾರ್ವಜನಿಕರಿಗೆ ನೋಡಲು ವ್ಯವಸ್ಥೆ ಮಾಡಲಾಗಿತ್ತು. ವಿಜ್ಞಾನ ಆಸಕ್ತರು, ಶಾಲಾ ಕಾಲೇಜು ವಿದ್ಯಾರ್ಥಿಗಳು, ವಿಜ್ಞಾನಿಗಳು ಹೆಚ್ಚಾಗಿ ಕಂಡು ಬಂದರು. ಬೆಳಿಗ್ಗೆ 8 ರಿಂದ 11.30 ರವೆರೆಗೆ ಸುಮಾರು ಐದು ಸಾವಿರ ಜನ ಕಂಕಣ ಸೂರ್ಯಗ್ರಹಣವನ್ನು ವೀಕ್ಷಿಸಿದರು.
ಮೋಡಗಳ ಮರೆಯಲ್ಲಿ
ಅಪರೂಪದ ಕಂಕಣ ಸೂರ್ಯಗ್ರಹಣವನ್ನು ನೋಡಬೇಕು ಎಂದು ನೆಹರು ತಾರಾಲಯದಲ್ಲಿ ಆಸಕ್ತರು ಜಮಾಯಿಸಿದ್ದರು. ಇದಕ್ಕಾಗಿ ಎಲ್ಲ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಬೆಳಿಗ್ಗೆಯಿಂದಲೇ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇದ್ದಿದ್ದರಿಂದ ಕಂಕಣ ಸೂರ್ಯಗ್ರಹಣ ಸ್ಪಷ್ಟವಾಗಿ ಗೋಚರಿಸಲಿಲ್ಲ. ಟೆಲಿಸ್ಕೋಪ್ ಜೊತೆ ವಿಶೇಷ ಕನ್ನಡಕಗಳನ್ನು ಹಾಕಿಕೊಂಡು ಜನ ಗ್ರಹಣವನ್ನು ವೀಕ್ಷಿಸುತ್ತಿದ್ದು ಕಂಡು ಬಂದಿತು. ಇದರ ಜೊತೆಗೆ ತಾರಾಲಯದಲ್ಲಿ ಗ್ರಹಣಗಳು ಎಂದರೇನು? ಅವುಗಳ ವೈಜ್ಞಾನಿಕ ವಿವರಣೆಗಳ ಫಲಕಗಳು, ಗ್ರಹಣಗಳ ಬಗ್ಗೆ ಜನರಿಗೆ ಇರುವ ಮೂಢ ನಂಭಿಕೆಗಳು ಏನು? ಎಂಬುದನ್ನು ಬೃಹತ್ ಪರದೆ ಮೂಲಕ ತೋರಿಸಿ ಆಸಕ್ತರ ಪ್ರಶ್ನೆಗಳಿಗೆ ಉತ್ತರಿಸಲಾಗುತ್ತಿತ್ತು.
ತಾರಾಲಯ ನಿರ್ದೇಶಕರು ಏನಂದ್ರು?
ಇದೇ ವೇಳೆ "ಒನ್ ಇಂಡಿಯಾ'ದೊಂದಿಗೆ ಮಾತನಾಡಿದ ನೆಹರು ತಾರಾಲಯದ ನಿರ್ದೇಶಕ ಡಾ.ಪ್ರಮೋದ್ ಗಲಗಲಿ ಅವರು, ನಾವು ಗ್ರಹಣ ಕಣ್ತುಂಬಿಕೊಳ್ಳಲು ಜನರಿಗೆ ಎಲ್ಲಾ ರೀತಿಯ ವ್ಯವಸ್ಥೆ ಮಾಡಿದ್ದೇವು. ಆದರೆ, ಮುಂಜಾನೆಯಿಂದಲೂ ಮೋಡ ಕವಿದ ವಾತಾವರಣ ಇತ್ತು. ಹೀಗಾಗಿ ಸಂಪೂರ್ಣವಾಗಿ ಗ್ರಹಣವನ್ನು ನೋಡಲು ಜನರಿಗೆ ಆಗಲಿಲ್ಲ. 2020 ರ ಜೂನ್ 21 ರಂದು ಗ್ರಹಣ ಮತ್ತೆ ಬರಲಿದೆ, ಪ್ರತಿಬಾರಿಯ ಗ್ರಹಣ ವಿಜ್ಞಾನಿಗಳ ಹೊಸ ಅವಿಷ್ಕಾರಕ್ಕೆ ವರದಾನ ಆಗಲಿದೆ. ಸೂರ್ಯನಲ್ಲಿ ಹೀಲಿಯಂ ಅಂಶ ಇರುವುದು ಕೂಡ ಗ್ರಹಣದಿಂದ ಬಯಲಾಯ್ತು. ಭೂಮಿ ಗೋಲಾಕಾರವಾಗಿದೆ ಎನ್ನುವುದು ಕೂಡ ಗ್ರಹಣಗಳ ಅಧ್ಯಯನದಿಂದ ಪತ್ತೆಯಾಯಿತು ಎಂದು ಹೇಳಿದರು.
ಉಡುಪಿಯಲ್ಲಿ ರಾಜ್ಯದಲ್ಲೇ ಎರಡನೇ ಗರಿಷ್ಠ ಕಂಕಣ ಸೂರ್ಯಗ್ರಹಣ ದಾಖಲು
ಪೊಲೀಸ್ ಕಮೀಷನರ್ ಭೇಟಿ
ಇನ್ನು, ಗ್ರಹಣ ನೋಡಬೇಕು ಎಂದು ತಾರಾಲಯಕ್ಕೆ ಬಂದಿದ್ದ ಬೆಂಗಳೂರು ಪೊಲೀಸ್ ಆಯುಕ್ತ ಬಾಸ್ಕರ್ ರಾವ್ ಅವರು, ಗ್ರಹಣ ನೋಡಲು ನೆಹರು ತಾರಾಲಯದಲ್ಲಿ ಸಾರ್ವಜನಿಕರಿಗೆ ಉತ್ತಮ ವ್ಯವಸ್ಥೆ ಮಾಡಿದ್ದಾರೆ. ಮಕ್ಕಳು ಮೊಬೈಲ್ ಬಿಟ್ಟು ಇಲ್ಲಿಗೆ ಬಂದು ಗ್ರಹಣ ನೋಡುತ್ತಿದ್ದಾರೆ. ಗ್ರಹಣಗಳ ವಿಚಾರದಲ್ಲಿ ನಮ್ಮ ಮನೆಯಲ್ಲೂ ಸಾಕಷ್ಟು ಸಂಪ್ರದಾಯವಿದೆ. ಆಚಾರ ವಿಚಾರಗಳನ್ನು ಹೇಳುತ್ತಾರೆ. ಚಿಕ್ಕವಯಸ್ಸಿನಲ್ಲಿಯೂ ಹಿರಿಯರು ನಮಗೆ ತುಂಬಾ ಹೇರುತ್ತಿದ್ದ ನಿರ್ಬಂಧರು. ಆದರೂ ಗ್ರಹಣಗಳನ್ನು ನೋಡುತ್ತಿದ್ದೇವು. ಗ್ರಹಣಗಳ ಬಗ್ಗೆ ಜನರಲ್ಲಿ ಇರುವ ಮೂಢನಂಭಿಕೆಗಳನ್ನು ಹೋಗಲಾಡಿಸಬೇಕು ಎಂದು ಹೇಳಿದರು.
2010 ರಲ್ಲಿ ಕಂಡಿತ್ತು
ಸೂರ್ಯಗ್ರಹಣದಲ್ಲಿ ಖಗ್ರಾಸಗ್ರಹಣ (ಪೂರ್ಣ ಪ್ರಮಾಣದ ಗ್ರಹಣ) ಹಾಗೂ ಕಂಕಣಗ್ರಹಣ (ಭಾಗಶಃ ಗ್ರಹಣ) ಎಂಬ ಎರಡು ಬಗೆ ಇವೆ. ವರ್ಷಾಂತ್ಯಕ್ಕೆ ಕಾಣಿಸುತ್ತಿರುವುದು ಕಂಕಣ ಸೂರ್ಯಗ್ರಹಣ. ಭೂಮಿ ಮತ್ತು ಸೂರ್ಯನ ನಡುವೆ ಚಂದ್ರ ಬಂದಾಗ ಸೂರ್ಯಗ್ರಹಣ ಸಂಭವಿಸುತ್ತದೆ. 2010 ರಲ್ಲಿ ಭಾರತದಲ್ಲಿ ಈ ಹಿಂದೆ ಕಂಕಣ ಸೂರ್ಯಗ್ರಹಣ ಸಂಭವಿಸಿತ್ತು.